ಭರಮಸಾಗರ ಕರ್ನಾಟಕ ರಾಜ್ಯದ ಒಂದು ಊರು. ಅದು ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನಲ್ಲಿದೆ. 2001 ನೇ ಇಸವಿಯ ಭಾರತದ ಜನಗಣತಿಯ ( ), ಲೆಖ್ಖದ ಪ್ರಕಾರ, ಒಟ್ಟು ಜನಸಂಖ್ಯೆ 6244 ಅದರಲ್ಲಿ 3196 ಪುರುಷರು ಮತ್ತು 3048 ಮಹಿಳೆಯರಿದ್ದರು. ಭರಮಸಾಗರವು ಚಿತ್ರದುರ್ಗ -ದಾವಣಗೆರೆಗಳ ಮಧ್ಯೆ 30 ಕಿಲೋಮೀಟರುಗಳ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿದ್ದು, ನಾಗರಿಕ ಸೌಲಭ್ಯಗಳಿಂದ ಕೂಡಿದೆ. ಇದು ಹೋಬಳಿ ಕೇಂದ್ರವಾಗಿದೆ. ಈ ಗ್ರಾಮವು ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಗ್ರಾಮವಾಗಿದೆ. ಮೊದಲು ಈ ಗ್ರಾಮಕ್ಕೆ ಗುಡಿನಾಯಕನಹಳ್ಳಿ ಎಂದು ಹೆಸರಿದ್ದಿತಂತೆ. ಕ್ರಿ.ಶ.1695ರಲ್ಲಿ ಚಿತ್ರದುರ್ಗದ ಪಾಳೆಯಗಾರ ಬಿಚ್ಚುಗತ್ತಿ ಭರಮಣ್ಣನಾಯಕನ ಹೆಸರಿನಲ್ಲಿ ಇಲ್ಲಿ ಜೋಡಿ ಕೆರೆಗಳನ್ನು ಕಟ್ಟಸಿದ್ದರಿಂದ ನಾಯಕನ ಹೆಸರಿನಲ್ಲಿ 'ಭರಮಸಾಗರ'ವೆಂದು ಕರೆದಿದ್ದಾರೆ. ಜೋಡಿ ಕೆರೆಗಳ ಕಾಮಗಾರಿ ಕೆಲಸವನ್ನು ದಂಡಿನ ದಳವಾಯಿ ಲಿಂಗಣ್ಣನು ನಿರ್ವಹಿಸಿದ್ದನು. ಕ್ರಿ.ಶ. 1690 ರಿಂದ 1695ರವರೆಗೆ ಕೆರೆಯ ನಿರ್ಮಾಣಕಾರ್ಯ ನಡೆದಿದೆ. ಇಲ್ಲಿ ದುರ್ಗಾಂಬಿಕ ದೇವಿಯ ಮಂದಿರವಿದೆ. ಈ ದೇವಿಗೆ ದಂಡಿನ ದುರ್ಗಿ ಎಂದು ಕರೆಯುತ್ತಾರೆ. ಬ್ರಿಟಿಷರು ಈ ದೇವಿಗೆ ಒಂದು ಬೆಳ್ಳಿಯ ಮುಖವಾಡ ಮಾಡಿಸಿ ಕೊಟ್ಟಿದ್ದಾರೆ. ಈಗ ಸಂತೆ ನೆರೆಯುವ ಸ್ಥಳದಲ್ಲಿ ಹಿಂದೆ ದಿವಾನ್ ಪೂರ್ಣಯ್ಯನವರು ಕಟ್ಟಿಸಿದ ಒಂದು ಛತ್ರವಿದ್ದಿತು ಎನ್ನುತ್ತಾರೆ. ಇತ್ತೀಚಿಗೆ ಭರಮಸಾಗರದ ಐತಿಹಾಸಿಕ ಕೆರೆಗೆ ಭರಮಣ್ಣನಾಯಕರ ಕೆರೆ ಎಂದು ನಾಮಕರಣ ಮಾಡಲಾಗಿದೆ. ಅ ರಾ ಸೇ ಎಂದು ನಾಡಿನಾದ್ಯಂತ ಪ್ರಸಿದ್ಧರಾಗಿದ್ದ , ಕೊರವಂಜಿ ಬಳಗದ ಪ್ರಮುಖ ಲೇಖಕರು ಹಾಗು ಸಾಹಿತಿಗಳಾಗಿದ್ದ ಅಣಜಿ ರಾಮಣ್ಣ ಸೇತುರಾಮರಾವ್ ರವರು ಭರಮಸಾಗರದವರು. ಸದ್ಯ ಇಲ್ಲಿ ಸುತ್ತಮುತ್ತಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅಂಗವಾಗಿ ಕೆರೆಯ ಕಾಮಗಾರಿ ಪ್ರಗತಿಯಲ್ಲಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಚಿತ್ರದುರ್ಗ ಜಿಲ್ಲೆಯ ಅಧಿಕೃತ ತಾಣ