ಮತ್ತಿ (ಕರಿಮತ್ತಿ) ದಕ್ಷಿಣ ಏಷಿಯಾ ಪ್ರದೇಶದ ಒಂದು ಮರ. ಭಾರತದಲ್ಲಿ ಪಶ್ಚಿಮಘಟ್ಟ ಹಾಗೂ ಮಿಶ್ರಪರ್ಣಪಾತಿ ( ) ಅರಣ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಾಡುಬಾದಾಮಿ ಮರದ ಹತ್ತಿರದ ಸಂಬಂಧಿ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಕೊಂಬ್ರೆಟೇಸಿಯೆ ಕುಟುಂಬಕ್ಕೆ ಸೇರಿದ್ದು, ಟರ್ಮಿನೇಲಿಯ ಸಸ್ಯಕುಲ () ದಲ್ಲಿದೆ. ಇದರ ಸಸ್ಯಶಾಸ್ತ್ರೀಯ ಹೆಸರು ಟರ್ಮಿನೇಲಿಯ ಟೊಮೆಂಟೋಸ ( (.) & .) ಎಂದಾಗಿದೆ. == ವ್ಯಾಪ್ತಿ == ರಾಜಸ್ಥಾನ, ಪಂಜಾಬುಗಳ ಮರು ಪ್ರದೇಶಗಳನ್ನು ಬಿಟ್ಟು ಭಾರತದ ಉಳಿದೆಲ್ಲ ಕಡೆಗೂ ಇದು ಬೆಳೆಯುತ್ತದೆ. == ಸಸ್ಯದ ಗುಣಲಕ್ಷಣಗಳು == ಇದು ದೊಡ್ಡ ಪ್ರಮಾಣದ ಮರ. ಸುಮಾರು 35ಮೀ ಎತ್ತರಕ್ಕೆ ಬೆಳೆಯುವ ಮರ. ಮಣ್ಣು, ಹವೆ ಚೆನ್ನಾಗಿರುವಂಥ ನೆಲೆಗಳಲ್ಲಿ 50ಮೀ ಎತ್ತರಕ್ಕೆ ಬೆಳೆಯುವುದೂ ಉಂಟು. ಇದಕ್ಕೆ ದಪ್ಪನಾದ (ಸುಮಾರು ೨.೫ ಸೆ.ಮೀ.ವರೆಗೆ) ತೊಗಟೆ ಇದ್ದು, ಕೆಲವೊಮ್ಮೆ ಮೊಸಳೆಯ ಚರ್ಮದಂತೆ ಇರುವುದರಿಂದ ಸುಲಭವಾಗಿ ಗುರುತಿಸಲ್ಪಡುತ್ತದೆ. ಇದರ ತೊಗಟೆಯು ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿದೆ. ಸಾಧಾರಣ ೩೦ ಮೀ.ಎತ್ತರಕ್ಕೆ ಬೆಳೆಯುತ್ತದೆ. ಇದರ ದಾರುವು ಕರಿಗಂದು ಬಣ್ಣದ್ದಾಗಿ ಕಪ್ಪು ಗೆರೆಗಳನ್ನು ಹೊಂದಿದೆ. ಬಹಳ ಗಡಸು,ಬಲಯುತ ಹಾಗೂ ಬಾಳಿಕೆ ಬರುತ್ತದೆ. ಎಲೆಗಳು ರೇಷ್ಮೆ ಕೃಷಿಗೆ ಬಳಸಲ್ಪಡುತ್ತದೆ. == ಉಪಯೋಗಗಳು == ಇದು ಬಹಳ ಗಡುಸಾದ ಮರವಾಗಿದ್ದು, ಬಲಯುತವಾಗಿದೆ. ಬಹಳ ಕಾಲ ಬಾಳಿಕೆ ಬರುತ್ತದೆ. ನೂರಾರು ವರ್ಷಗಳಿಂದ ಇದೊಂದು ಸಾರ್ವತ್ರಿಕ ಬಳಕೆಯ ಚೌಬೀನೆಯಾಗಿ ಪ್ರಸಿದ್ಧವಾಗಿದೆ. ಇದಕ್ಕೆ ಲಾರಲ್ ಎಂಬ ವಾಣಿಜ್ಯ ನಾಮವುಂಟು. ದೃಢತೆಯಲ್ಲಿ ಉಪಯುಕ್ತತೆಯಲ್ಲಿ ಬಿಳೇಭೋಗಿ (ಸಾಲ್ ಮರ) ಮತ್ತು ಸಾಗುವಾನಿಗಳನ್ನು ಬಿಟ್ಟರೆ ಇದಕ್ಕೇ ಮುಖ್ಯ ಸ್ಥಾನ. ಕಟ್ಟಡಗಳ ಮರಮುಟ್ಟು, ಗಾಡಿ, ಬೊಂಬೆ, ಪೀಠೋಪಕರಣಗಳು, ಗಾಣ, ಅಕ್ಕಿ ಕೊಟ್ಟಣ, ವಿದ್ಯುತ್ ತಂತಿಯ ಹೊದಿಕೆ ಪಟ್ಟಿ, ಕೃಷಿ ಹತ್ಯಾರುಗಳು, ಕೈಪಿಡಿ, ಪ್ಲೈವುಡ್ ಇತ್ಯಾದಿಗಳಲ್ಲಿ ಇದರ ವಿಪುಲ ಬಳಕೆಯುಂಟು. ಗೃಹ ನಿರ್ಮಾಣಕ್ಕೆ, ರೈಲ್ವೇ ಸ್ಲೀಪರುಗಳಿಗೆ, ವ್ಯಾಗನ್ ಗಳ ನಿರ್ಮಾಣದಲ್ಲಿ ಇತ್ಯಾದಿ ಉಪಯೋಗವಾಗುತ್ತಿದೆ. ಕರಿಮತ್ತಿಯ ಚೌಬೀನೆಯನ್ನು ಯುಕ್ತವಾಗಿ ಸಂಸ್ಕರಿಸಿ ಶಾಶ್ವತ ಕಟ್ಟಡಗಳಲ್ಲಿ ಬಳಸಬಹುದಲ್ಲದೆ ವಿದ್ಯುತ್ ಕಂಬಗಳಾಗಿ ಸಹ ಉಪಯೋಗಿಸಬಹುದು. ರೇಯಾನ್, ಹೊದಿಕೆಕಾಗದ, ಬರೆವಣಿಗೆ ಹಾಗೂ ಮುದ್ರಣ ಕಾಗದಗಳ ತಯಾರಿಕೆಗೂ ಇದು ಉಪಯುಕ್ತವೆನಿಸಿದೆ. ಅಲ್ಲದೆ ಇದು ಬೆಂಕಿಗೆ ಸುಲಭವಾಗಿ ಬಲಿಯಾಗದು. ಆದ್ದರಿಂದ ಅಗ್ನಿನಿರೋಧಿ ಕಟ್ಟಡಗಳಿಗೂ ಒದಗುತ್ತದೆ. ಇದರ ಮರದ ಮೇಲೆ ಟಸ್ಸಾರ್ ರೇಷ್ಮೆ ಗೂಡುಗಳು ಕಟ್ಟಲ್ಪಡುತ್ತದೆ. ಟಸಾರ್ ರೇಷ್ಮೆಹುಳುಗಳಿಗೂ, ದನಗಳಿಗೂ, ಸೆಣಬಿನ ಬಟ್ಟೆಗಳಿಗೆ ಬಣ್ಣ ಕಟ್ಟಲೂ ಇದರ ತೊಗಟೆಯನ್ನು ಬಳಸುವುದಿದೆ. ಕರಿಮತ್ತಿಯ ಗೋಂದು ಉತ್ತಮ ಅಂಟು ಹಾಗೂ ವಿರೇಚಕ. ಇದರ ತೊಗಟೆಯ ಕಷಾಯವನ್ನು ಅತಿಸಾರ, ಕರುಳಿನ ವ್ರಣಗಳ ನಿವಾರಣೆಗೆ ಬಳಸಲಾಗುತ್ತದೆ. ಇದರ ಎಲೆಗಳು ಅಡಿಕೆ ತೋಟಗಳಲ್ಲಿ ಗೊಬ್ಬರವಾಗಿ ಬಳಕೆಯಾಗುತ್ತಿದೆ. ಇದರ ಎಲೆಯಿಂದ ಸಿಗುವ ಲೋಳೆಯನ್ನು ಸೌಂದರ್ಯವರ್ಧಕವಾಗಿ ಬಳಸುತ್ತಾರೆ. == ಆಧಾರ == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ == ಉಲ್ಲೇಖಗಳು ==