ಮಲಯಾಟ್ಟೂರ್ ಎಂಬ ಹಳ್ಳಿಯು ಆಲುವ ತಾಲೂಕಿನಲ್ಲಿದೆ. ಇದು ತೆಂಕಣ ಇಂಡಿಯಾದಲ್ಲಿನ ಕೇರಳ ರಾಜ್ಯದ ಎರಣಾಕುಳಮ್ ಜಿಲ್ಲೆಯ ಅಂಗಮಾಲಿಗೆ ದೇವರದಿಕ್ಕಿನಲ್ಲಿ ಹದಿನೈದು ಕಿಲೊಮೀಟರು ದೂರದಲ್ಲಿದೆ. ಮಲಯಾಟ್ಟೂರ್ ಎಂಬುದು ಮಲ (ಮಲೆ) ಆರ್ (ನದಿ) ಊರ್ (ಊರು) ಎಂಬ ಮೂರು ಪದಗಳ ಸಂಗಮವಾಗಿದೆ. ಅಂದರೆ ಇಲ್ಲಿ ಬೆಟ್ಟವೂ ಇದೆ, ನದಿಯೂ ಇದೆ ಮತ್ತು ಊರು ಕೂಡಾ ಇದೆ. |ಮಲಯಾಟ್ಟೂರ್ ಬೆಟ್ಟದಿಂದ ಸೂರ್ಯೋದಯದ ನೋಟ == ತಾಣ == ಕೊಚ್ಚಿಯಿಂದ ೫೨ ಕಿಲೊಮೀಟರು ದೂರದಲ್ಲಿರುವ ಸಂತ ತೋಮಾಸರ ಸಿರೊಮಲಬಾರ್ ಕಥೋಲಿಕ ಚರ್ಚು ಮಲಯಾಟ್ಟೂರ್ ಬೆಟ್ಟದ ಮೇಲೆ ೬೦೯ ಅಡಿಗಳ ಎತ್ತರದಲ್ಲಿದೆ. ಈ ಚರ್ಚು ಸಂತ ತೋಮಾಸನ ಹೆಸರು ಹೊಂದಿದ್ದು ಆತ ಇಲ್ಲಿ ಪ್ರಾರ್ಥನೆ ಮಾಡಿದ್ದಾಗಿ ಪ್ರತೀತಿಯಿದೆ. ಈ ತಾಣವು ಕೇರಳದ ಒಂದು ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು ಕೇರಳ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಂದಲೂ ಅನೇಕ ಯಾತ್ರಿಗಳನ್ನು ಆಕರ್ಷಿಸುತ್ತಿದೆ. ಈ ಪ್ರಸಿದ್ಧ ಚರ್ಚು ಪಶ್ಚಿಮಘಟ್ಟಗಳಲ್ಲಿ ಪೆರಿಯಾರ್ ನದಿಯು ಸವರಿಕೊಂಡು ಸಾಗುವ ಕುರಿಶುಮುಡಿ ಎಂಬ ಬೆಟ್ಟದ ಮೇಲಿದೆ. ಈ ದೇವಾಲಯದಲ್ಲಿ ಸಂತ ತೋಮಾಸರ ಆಳೆತ್ತರದ ಪ್ರತಿಮೆಯಿದ್ದು ಹತ್ತಿರದ ಬಂಡೆಯ ಮೇಲೆ ಪ್ರೇಷಿತನದು ಎನ್ನಲಾಗುವ ಹೆಜ್ಜೆಗುರುತು ಇದೆ. ಇವೊತ್ತು ಈ ಪವಿತ್ರತಾಣವನ್ನು ಅಂತರಾಷ್ಟ್ರೀಯ ತೀರ್ಥಸ್ಥಳ ಎಂದು ಗುರುತಿಸಲಾಗುತ್ತಿದೆ. == ಇತಿಹಾಸ == ಬೆಟ್ಟವೂ ನದಿಯೂ ತಾಗಿಕೊಂಡಿರುವ ಮಲಯಾಟ್ಟೂರ್ ಗ್ರಾಮವು ಸಂತ ತೋಮಾಸನ ಭೇಟಿಯಿಂದಾಗಿ ಬಹು ಪ್ರಾಮುಖ್ಯತೆ ಪಡೆದಿದೆ. ಸಂತ ತೋಮಾಸನು ಕ್ರಿಸ್ತಶಕ ೫೨ರಲ್ಲಿ ಕೋಡಂಗಲ್ಲೂರಿನಲ್ಲಿ ಇಳಿದು ಏಳು ಪ್ರಸಿದ್ಧ ಚರ್ಚುಗಳನ್ನು ಕಟ್ಟಿದನೆಂದು ನಂಬಲಾಗಿದೆ. ಆತ ಮೈಲಾಪುರಕ್ಕೆ ತೆರಳುವ ದಾರಿಯಲ್ಲಿ ಮಲಯಾಟ್ಟೂರಿನಲ್ಲಿ ತಂಗಿದನೆಂದು ಹೇಳುತ್ತಾರೆ. ಇಲ್ಲಿ ಆತನಿಗೆ ತೆರೆದ ಮನದ ಸ್ವಾಗತವೇನೂ ಸಿಕ್ಕಲಿಲ್ಲ ಮತ್ತು ಜೀವ ಅಪಾಯದಲ್ಲಿತ್ತು. ರಂಬನ್ ಪಾಟ್ಟುವಿನ ಪ್ರಕಾರ ಆತ ಪ್ರಾಣ ಉಳಿಸಿಕೊಳ್ಳಲು ಬೆಟ್ಟದ ಮೇಲಕ್ಕೆ ಓಡಿಹೋಗಿ ಅಲ್ಲೇ ಕೆಲದಿನಗಳು ದೇವರ ಆಶ್ರಯದಲ್ಲಿ ತಂಗಿದ್ದ. ಸ್ಥಳೀಯ ದಂತಕತೆಗಳ ಪ್ರಕಾರ ಅವನು ನೊಂದ ಮನದಿಂದ ದೀನನಾಗಿ ದೇವರನ್ನು ಪರಿಪರಿಯಾಗಿ ಬೇಡಿಕೊಂಡು ಬಂಡೆಯನ್ನು ಮುಟ್ಟಿದಾಗ ಆ ಬಂಡೆಯಿಂದ ನೆತ್ತರು ಚಿಮ್ಮಿತು. ಮಲಯಾಟ್ಟೂರನ್ನು ಜಪದ ಮತ್ತು ಪೂಜೆಯ ತಾಣವಾಗಿಸಿಕೊಂಡ ತೋಮಾಸನು ಮುಂದೆ ಮೈಲಾಪುರಕ್ಕೆ ತೆರಳಿ ಅಲ್ಲಿ ಕ್ರಿಸ್ತಶಕ ೭೨ರಲ್ಲಿ ಹುತಾತ್ಮನಾದ. ಮುಂದೊಮ್ಮೆ ಮಲಯಾಟ್ಟೂರಿನ ಜನರು ಬೇಟೆಗೆ ಹೋಗಿದ್ದಾಗ ಬಂಡೆಯೊಂದರಿಂದ ದಿವ್ಯವಾದ ಬೆಳಕು ಹೊಮ್ಮುತ್ತಿರುವುದನ್ನು ಕಂಡು ಹತ್ತಿರ ಹೋಗಿ ನೋಡಿದಾಗ ಬಂಡೆಯ ಮೇಲ್ಮೈಯಲ್ಲಿ ಬಂಗಾರದ ಶಿಲುಬೆಯೊಂದನ್ನು ಕಂಡರು. ಹಾಗೆಯೇ ಸುತ್ತಮುತ್ತ ಗಮನಿಸಿದಾಗ ಕಲ್ಲಿನ ಮೇಲೆ ಮಹಾಸಂತನ ಹೆಜ್ಜೆಗುರುತನ್ನೂ ಕಂಡು ಊರಿಗೆ ಹೋಗಿ ಸುದ್ದಿ ಅರುಹಿದರು. ಕೂಡಲೇ ಜನರೆಲ್ಲರೂ ಬೆಟ್ಟದ ಮೇಲಕ್ಕೆ ಧಾವಿಸಿ ಬಂದು ನೋಡಿ ಪುನೀತರಾದರು. == ಆಡಳಿತ == ಮಲಯಾಟ್ಟೂರ್ ಗ್ರಾಮವು ಮಲಯಾಟ್ಟೂರ್ ನೀಲೇಶ್ವರಮ್ ಗ್ರಾಮಪಂಚಾಯ್ತಿಯ ಅಧೀನದಲ್ಲಿದ್ದು ಎರಣಾಕುಳಮ್ ಜಿಲ್ಲೆಯ ಸ್ಥಳೀಯ ಸಂಸ್ಥೆಯಾಗಿದೆ. ಅಂಗಮಾಲಿ ಅರಣ್ಯಪ್ರದೇಶದಲ್ಲಿ ಮಲಯಾಟ್ಟೂರ್ ಅರಣ್ಯವಿಭಾಗವು ಪ್ರಮುಖವಾದುದಾಗಿದೆ. ಈ ವಿಭಾಗವನ್ನು ೧೯೧೪ರಲ್ಲಿ ಅಂದರೆ ಎರಣಾಕುಳಮ್ ಜಿಲ್ಲೆ ಅಸ್ಥಿತ್ವಕ್ಕೆ ಬರುವ ಮುನ್ನವೇ ಸ್ಥಾಪಿಸಲಾಗಿದೆ. ಹಾಗಾಗಿ ಇದರ ವ್ಯಾಪ್ತಿಯಲ್ಲಿ ಇಡೀ ಎರಣಾಕುಳಮ್ ಜಿಲ್ಲೆಯ ನಗರ ಮತ್ತು ಪಟ್ಟಣಗಳೂ ತಮಿಳುನಾಡು ಗಡಿವರೆಗಿನ ಎಲ್ಲ ಅರಣ್ಯಪ್ರದೇಶಗಳೂ ಸೇರಿವೆ. == ಮಂದಿ == ಹೆಚ್ಚಿನ ಜನರು ಕಥೋಲಿಕ ಮತ್ತು ಹಿಂದೂ ನಂಬುಗೆಗಳನ್ನು ಅನುಸರಿಸುತ್ತಾರೆ. ಎಲ್ಲಾ ಕುಟುಂಬಗಳಿಗೂ ಹಿಂದಿನಿಂದಲೂ ಬಂದ ಮನೆತನದ ಹೆಸರುಗಳಿವೆ. ಕ್ರಿಸ್ತುವರು ಕಥೋಲಿಕರು ಪೆಂತೆಕೋಸ್ಟ್ – ಮಲಯಾಟ್ಟೂರಿನ ಅಸೆಂಬ್ಲಿ ಆಫ್ ಗಾಡ್ ಚರ್ಚು == ಆರೈಕೆ ಕೇಂದ್ರಗಳು == ನೀಲೇಶ್ವರದ ಪಳಾಯಿಯಲ್ಲಿ ನ್ಯಾಚುರೋಪತಿ ಆರೈಕೆ ಬಿಡಾರವಿದೆ. ಮಲಯಾಟ್ಟೂರಿನಲ್ಲಿ ಸಂತ ತೋಮಾಸ್ ಆಸ್ಪತ್ರೆ ಎಂಬ ದೊಡ್ಡಾಸ್ಪತ್ರೆ ಇದೆ. == ಹಬ್ಬಗಳು == ಕ್ರಿಸ್ಮಸ್ ಮತ್ತು ಓಣಂ ಎಂಬ ಸಾಂಪ್ರದಾಯಿಕ ಹಬ್ಬಗಳನ್ನು ಇಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ. ಕ್ರಿಸ್ಮಸ್ ಮತ್ತು ಹೊಸವರ್ಷಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ಗುಡಿ ಮತ್ತು ಚರ್ಚುಗಳ ವಾರ್ಷಿಕ ಹಬ್ಬಗಳಾದ ಉಲ್ಸವಮ್/ಪೆರುನಾಳ್ ಗಳನ್ನೂ ಆಚರಿಸುತ್ತಾರೆ. == ಕಲಿಕೆಯ ಮನೆಗಳು == ಮಲಯಾಟ್ಟೂರ್ ಸಂತ ತೋಮಾಸರ ಹೈಯರ್ ಸೆಕಂಡರಿ ಶಾಲೆ ಮಲಯಾಟ್ಟೂರ್ ಸಂತ ಜೋಸೆಫರ ಕಿರಿಯಪ್ರಾಥಮಿಕ ಶಾಲೆ ನೀಲೇಶ್ವರಮ್ ಎಸ್ಎನ್ಡಿಪಿ ಹೈಯರ್ ಸೆಕಂಡರಿ ಶಾಲೆ ಸಂತ ಮೇರಿ ಕಿರಿಯಪ್ರಾಥಮಿಕ ಶಾಲೆ ಸರ್ಕಾರೀ ಕಿರಿಯಪ್ರಾಥಮಿಕ ಶಾಲೆ ಮಲಯಾಟ್ಟೂರ್ ವಿಮಲಗಿರಿ ನ್ಯೂಮನ್ ಅಕಾಡೆಮಿ == ಉದ್ದಿಮೆಗಳು == ಈ ಪ್ರದೇಶವು ಪಶ್ಚಿಮಘಟ್ಟಗಳ ಕೆಳಗಿನ ಬೆಟ್ಟಸಾಲಿನಲ್ಲಿದೆ. ಸಂಬಾರಪದಾರ್ಥವಾದ ಜಾಯಕಾಯಿ, ಮರಗೆಣಸು, ಅಲಸಂದೆ, ಅಡಿಕೆ ಮತ್ತು ರಬ್ಬರ್ ಇಲ್ಲಿನ ಮುಖ್ಯವಾದ ಬೆಳೆಗಳು. ಎಷ್ಟೋ ಔಷಧಿಸಸ್ಯಗಳೂ ಇಲ್ಲಿ ಬೆಳೆಯುತ್ತವೆ. ಜಾಯಕಾಯಿ ನಿರ್ಯಾತದಿಂದ ಅಪಾರ ವಿದೇಶೀವಿನಿಮಯ ಪ್ರಾಪ್ತವಾಗುತ್ತದೆ. ಬಿದಿರು ನಿಗಮದ, ಘಟಕಗಳು ಇಲ್ಲಿನ ಪ್ರಮುಖ ಉದ್ದಿಮೆಗಳಾಗಿವೆ. ಭಾರೀ ವಾಹನಗಳೂ ಟ್ರಕ್ಕುಗಳೂ ಇಲ್ಲಿ ಸರ್ವೇಸಾಮಾನ್ಯ. == ಹತ್ತಿರದ ರೈಲುನಿಲ್ದಾಣ == ಅಂಗಮಾಲಿ ಫಾರ್ ಕಾಲಡಿ == ಹತ್ತಿರದ ವಿಮಾನನಿಲ್ದಾಣ == ಮಲಯಾಟ್ಟೂರಿಗೆ ೧೮ ಕಿಲೊಮೀಟರು ದೂರದಲ್ಲಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನನಿಲ್ದಾಣವಿದೆ. ಈ ವಿಮಾನನಿಲ್ದಾಣದಿಂದ ದೇಶದ ಇತರ ನಗರಗಳಾದ ಚೆನ್ನೈ, ನವದೆಹಲಿ, ಮುಂಬೈ, ಬೆಂಗಳೂರು ಮತ್ತು ಕೊಲ್ಕತ್ತಾಗಳಿಗೆ ಹಾಗೂ ವಿದೇಶಗಳಿಗೆ ನೇರ ವಿಮಾನ ಸಂಪರ್ಕವಿದೆ. == ಪ್ರವಾಸತಾಣ == ಅಂತರಾಷ್ಟ್ರೀಯ ಪುಣ್ಯಕ್ಷೇತ್ರವು ಮಲಯಾಟ್ಟೂರಿನ ಪ್ರಮುಖ ಆಕರ್ಷಣೆಯಾಗಿದೆ. ಮಲಯಾಟ್ಟೂರಿಗೆ ೨೫ ಕಿಲೊಮೀಟರು ದೂರದಲ್ಲಿರುವ ಅತಿರಪಿಳ್ಳಿ ಮತ್ತು ವಳಚ್ಚಲ್ಗಳು ಕೇರಳದ ಎಲ್ಲೆಡೆಯಿಂದ ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಹತ್ತು ಕಿಲೊಮೀಟರು ದೂರದಲ್ಲಿನ ಆದಿ ಶಂಕರಾಚಾರ್ಯರ ಜನನಸ್ಥಳವಾದ ಕಾಲಡಿಯು ಮತ್ತೊಂದು ಜನಪ್ರಿಯ ತಾಣವಾಗಿದೆ. ಮಹಾಗನಿ ತೋಪು ಒಂದು ಸುಂದರತಾಣ. ಪಳಗಿಸಿದ ಆನೆಗಳಿರುವ ಅಭಯಾರಣ್ಯವು ಮತ್ತೊಂದು ಆಕರ್ಷಣೆ. == ತೀರ್ಥಯಾತ್ರೆ == ಸಂತ ತೋಮಾಸನು ಕ್ರಿಸ್ತಶಕ ೫೨ರಲ್ಲಿ ಇಲ್ಲಿನ ಕೋಡುಂಗಲ್ಲೂರು ಎಂಬಲ್ಲಿ ಬಂದಿಳಿದನೆಂದು ನಂಬುತ್ತಾರೆ. ಕ್ರಿಸ್ತಶಕ ೬೨ರಲ್ಲಿ ಸಂತ ತೋಮಾಸನು ಮಲಯಾಟ್ಟೂರಿನ ಮೂಲಕ ಮಲಂಕರ ತೀರಕ್ಕೆ ಇಳಿದು ಅಲ್ಲೊಂದು ಚರ್ಚನ್ನು ನಿರ್ಮಿಸುತ್ತಾರೆ. ಸ್ಥಳೀಯ ಐತಿಹ್ಯಗಳ ಪ್ರಕಾರ ಸಂತ ತೋಮಾಸರು ಮಲಯಾಟ್ಟೂರಿಗೆ ಬಂದಾಗ ಜೀವಬೆದರಿಕೆಯಿಂದಾಗಿ ಬೆಟ್ಟದ ಮೇಲಕ್ಕೆ ಓಡಿಹೋದರೆಂದೂ, ಅಲ್ಲಿ ಪ್ರಾರ್ಥನೆ ಮಾಡುವಾಗ ಬಂಡೆಯೊಂದರ ಮೇಲೆ ಕೈಯೂರಿದಾಗ ಆ ಬಂಡೆಯಿಂದ ನೆತ್ತರು ಚಿಮ್ಮಿತೆನ್ನಲಾಗಿದೆ. ಅಲ್ಲಿಯೇ ಸನಿಹದಲ್ಲಿ ಕಲ್ಲಿನ ಮೇಲೆ ತೋಮಾಸರ ಹೆಜ್ಜೆಗುರುತು ಮೂಡಿದೆ ಎಂದೂ ಹೇಳುತ್ತಾರೆ. ಪ್ರತಿವರ್ಷ ಈಸ್ಟರ್ ನಂತರದ ಭಾನುವಾರ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಕುರಿಶುಮುಡಿಯ ಬಂಡೆಯ ಮೇಲೆ ಸಂತ ತೋಮಾಸನು ಶಿಲುಬೆಗುರುತು ಹಾಕಿ ಅದಕ್ಕೆ ಮುತ್ತಿಟ್ಟು ಪ್ರಾರ್ಥನೆ ಮಾಡುತ್ತಿದ್ದನೆಂದೂ ಅದೇ ಆಮೇಲೆ ಅದ್ಭುತಕರವಾಗಿ ಚಿನ್ನದ ಮೆರುಗು ಪಡೆಯಿತೆಂದೂ ನಂಬಲಾಗಿದೆ. ಶಿಲುಬೆಹಾದಿ ಮಾಡುತ್ತಾ ಬೆಟ್ಟವೇರುವ ಯಾತ್ರಿಗಳು ನಿರಂತರವಾಗಿ “ಪೊನ್ನುಂ ಕುರಿಶು ಮುತ್ತಪ್ಪೊ, ಪೊನ್ಮಲಕೇಟ್ಟೊಂ” (ಚಿನ್ನದ ಶಿಲುಬೆ ಮುತ್ತಪ್ಪ, ಚಿನ್ನದಬೆಟ್ಟ ಏರುತ್ತೀವಿ) ಎಂದು ಜಪಿಸುತ್ತಾರೆ. ಮಲಯಾಳಿಗರು ತೋಮಾಸನನ್ನು ಮುತ್ತಪ್ಪ ಎನ್ನುವುದು ವಾಡಿಕೆ. ಕಳೆದ ೧೯೯೮ ಸೆಪ್ಟೆಂಬರ್ ೪ರಂದು ಈ ಸ್ಥಳವನ್ನು ಪವಿತ್ರತಾಣವೆಂದು ಅಧಿಕೃತವಾಗಿ ಘೋಷಿಸಲಾಗಿದೆ. ಮಲಯಾಟ್ಟೂರಿನಲ್ಲಿ ಪೆರಿಯಾರ್ ನದಿಯ ದಂಡೆಯಲ್ಲಿರುವ ಒಂಬತ್ತನೇ ಶತಮಾನದ ಹಳೆಯ ಚರ್ಚನ್ನು ಕಾಪಿಡಲಾಗಿದೆ. ಈ ಚರ್ಚಿನ ಹಬ್ಬವಾದ ’ಮಲಯಾಟ್ಟೂರ್ ಪೆರುನಾಳ್’ ಅನ್ನು ಮಾರ್ಚ್-ಏಪ್ರಿಲ್ ನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. == ಗಣಿಗಾರಿಕೆ == ಮಲಯಾಟ್ಟೂರು ವಲಯದಲ್ಲಿ ಬಂಡೆಯೊಡೆಯುವ ಕೆಲಸ ಭಾರೀ ಬಿರುಸಿನಿಂದ ನಡೆಯುತ್ತಿದೆ. ಸುಮಾರು ೨೫ ಕಡೆ ಕಲ್ಲುಗಣಿಗಾರಿಕೆ ನಡೆದಿದೆ. ಕೆಲ ಗಣಿಗಳಂತೂ ತುಂಬಾ ಆಳಕ್ಕೆ ಇಳಿದು ದೊಡ್ಡ ಮಟ್ಟದಲ್ಲಿ ಪರಿಸರ ಹಾನಿ ಉಂಟುಮಾಡುತ್ತಿವೆ. == ಇದನ್ನೂ ನೋಡಿ == ಪೆರಿಯಾರ್ ಮಲಯಾಟ್ಟೂರ್ ರಾಮಕೃಷ್ಣನ್ ಮಲಯಾಟ್ಟೂರ್ ಚರ್ಚು ಮಲಯಾಟ್ಟೂರ್ ಜಾತ್ರೆ == ಉಲ್ಲೇಖಗಳು ==