ಯಲಹಂಕ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ನೂತನ ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿಯ ಕೇಂದ್ರ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭಾಗವಾಗಿದೆ. ಬೆಂಗಳೂರಿನ ಹೃದಯ ಭಾಗದಿಂದ ೧೬ ಕಿಲೋಮೀಟರ್ ದೂರದಲ್ಲಿದೆ. ಯಲಹಂಕ ತಾಲ್ಲೂಕು ೩೮೭ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಆಡಳಿತದ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಯನ್ನು ತಾಲ್ಲೂಕುವಾರು ರಚನೆ ಮಾಡಲಾಗಿದೆ. ಯಲಹಂಕ ಕರ್ನಾಟಕ ರಾಜ್ಯದ ಬೆಂಗಳೂರುನಗರ ಜಿಲ್ಲೆಯ ಉತ್ತರ ತಾಲ್ಲೂಕಿನಲ್ಲಿ, ಬೆಂಗಳೂರು-ಗುಂತಕಲ್ಲು ರೈಲು ಮಾರ್ಗದಲ್ಲಿರುವ ಐತಿಹಾಸಿಕ ಸ್ಥಳ. ಬೆಂಗಳೂರಿನಿಂದ ಉತ್ತರಕ್ಕೆ ೧೬ ಕಿ.ಮೀ. ದೂರದಲ್ಲಿದೆ. ಚೋಳರ ಕಾಲದಲ್ಲಿ ಇದನ್ನು ಇಲೈಪಾಕ್ಕಂ ಮತ್ತು ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಸುತ್ತಮುತ್ತಲಿನ ನಾಡನ್ನು ಯಲಹಂಕ ನಾಡು ಎಂದೂ ಕರೆಯಲಾಗುತ್ತಿತ್ತು. == ಇತಿಹಾಸ == ೧೮೭೧ರವರೆಗೂ ತಾಲ್ಲೂಕು ಕೇಂದ್ರವಾಗಿದ್ದು ಈಗ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಮತ್ತೆ ೨೦೧೮ರಲ್ಲಿ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ ಮತ್ತು ಒಂದು ಪುರಸಭೆ ಇದೆ. ಬೆಂಗಳೂರಿನ ಸ್ಥಾಪಕ ಕೆಂಪೇಗೌಡನ ಮೂಲ ಪುರುಷನಾಗಿದ್ದ ಜಯದೇವಗೌಡ ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ತನ್ನ ವಶಪಡಿಸಿಕೊಂಡು ಕೋಟೆ ಕೊತ್ತಳಗಳನ್ನು ಕಟ್ಟಿಸಿ ಆಡಳಿತ ವ್ಯವಸ್ಥೆ ಮಾಡಿದ. ೧೪೨೦ರಲ್ಲಿ ವಿಜಯನಗರ ಸಾಮ್ರಾಟರ ಆಶ್ರಯ ಪಡೆದ ಅನಂತರ ಯಲಹಂಕನಾಡ ಪ್ರಭು ಎಂಬ ಬಿರುದನ್ನು ಪಡೆದುಕೊಂಡ. ಈ ವಂಶದವರು ಸುಮಾರು ೨೦೦ ವರ್ಷಗಳಷ್ಟು ದೀರ್ಘಕಾಲ ಯಲಹಂಕನಾಡನ್ನು ಆಳಿದರು. ೧೭೨೮ರಲ್ಲಿ ಮೈಸೂರಿನ ದಳವಾಯಿ ಈ ಪ್ರದೇಶವನ್ನು ಮೈಸೂರು ರಾಜ್ಯಕ್ಕೆ ಸೇರಿಸಿದ. == ಸ್ಥಳೀಯ ಆಕರ್ಷಣೆಗಳು == ಯಲಹಂಕದ ವೇಣುಗೋಪಾಲ ದೇವಾಲಯ ಪ್ರಸಿದ್ಧವಾದುದು. ವರ್ಷಂಪ್ರತಿ ಚೈತ್ರ ಶುದ್ಧ ಅಷ್ಟಮಿಯಂದು ನಡೆಯುವ ರಥೋತ್ಸವ ಸಾವಿರಾರು ಜನರನ್ನು ಆಕರ್ಷಿಸುತ್ತದೆ. == ಇದನ್ನೂ ನೋಡಿ == ಯಲಹಂಕದ ಪಾಳೆಯಗಾರರು