ವಲೈಕಾಪ್ಪು (ತಮಿಳು: வளைகாப்பு) (ಮಲಯಾಳಂ: வளைகாப்பு) ಸೀಮಂತ ಅಥವಾ ಬೇಬಿ-ಶವರ್ ಅನ್ನು ಹೋಲುವ ಆಚರಣೆಯಾಗಿದೆ. ಇದನ್ನು ದಕ್ಷಿಣ ಭಾರತೀಯ ಮಹಿಳೆಯರು ತಮಿಳುನಾಡು, ಕೇರಳದ ಕೆಲವು ಭಾಗಗಳು ಮತ್ತು ತೆಲಂಗಾಣದಲ್ಲಿ ಗರ್ಭಿಣಿ ಮಹಿಳೆಯನ್ನು ಆಶೀರ್ವದಿಸಲು ಆಚರಿಸುತ್ತಾರೆ. ಅವಳ ಫಲವತ್ತತೆ ಮತ್ತು ಸುರಕ್ಷಿತ ಜನನಕ್ಕಾಗಿ ಮಗುವನ್ನು ಮತ್ತು ತಾಯಿಯನ್ನು ಸಿದ್ಧಪಡಿಸುವುದು ಈ ಆಚರಣೆಯ ಉದ್ದೇಶ. ಇದನ್ನು ಸಾಮಾನ್ಯವಾಗಿ ಗರ್ಭಧಾರಣೆಯ 7 ನೇ ತಿಂಗಳು ಅಥವಾ 9 ನೇ ತಿಂಗಳಲ್ಲಿ ನಡೆಸಲಾಗುತ್ತದೆ. ಇದು ಪ್ರದೇಶದ ನಗರ ಮತ್ತು ಗ್ರಾಮೀಣ ಜನಸಂಖ್ಯೆಯ ನಡುವೆ ವ್ಯಾಪಕವಾಗಿ ಅಭ್ಯಾಸವಾಗಿದೆ. == ವ್ಯುತ್ಪತ್ತಿ == ವ್ಯುತ್ಪತ್ತಿಯು ವಲೈವಲ್(ಬಳೆ/ಗಾಜಿನ ಬಳೆ) ಮತ್ತು ಕಾಪು(ಸಂರಕ್ಷಣೆ) ಎಂಬ ಎರಡು ತಮಿಳು ಪದಗಳಿಂದ ಆಗಿದೆ. ಈ ಪದದ ಅರ್ಥವೆಂದರೆ ಬಳೆಗಳನ್ನು ರಕ್ಷಿಸುವುದು. ವಲೈಯಲ್ (ವಲೈಯಲ್) ಗೆ ಮಲಯಾಳಂನ ಪದ 'ವಳ'. == ಇತಿಹಾಸ == ಇದು 4 ನೇ ಶತಮಾನ() ಗೆ ಹಿಂದಿನ ಸೀಮಂತಮ್ ಮತ್ತು ಸಿಮಂಟೋನಯನದ ಎಂಬ ಔಪಚಾರಿಕ ಆಚರಣೆಗಳಿಗೆ ಸಂಬಂಧಿಸಿದೆ. ಇವನ್ನು ಬಹುಶಃ ಜೈನ ( ಮಹಾವೀರ ) ಮತ್ತು ಸ್ವಲ್ಪ ನಂತರದಲ್ಲಿ ರಚನೆಯಾದ ಕಲ್ಪ ಸೂತ್ರಗಳಲ್ಲಿ ದಾಖಲಿಸಲಾಗಿದೆ. ಸಮಕಾಲೀನ, ಬೌದ್ಧ ಸಂಪ್ರದಾಯಗಳಲ್ಲೂ(6 ನೇ ಶತಮಾನದಷ್ಟು ಹಿಂದಿನದು) ಇದು ದಾಖಲಾಗಿದೆ . ಇದು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿದೆ. ವಾಲೈಕಾಪ್ಪು ಮೂಲತಃ ಸರಳ ಸಮಾರಂಭವಾಗಿದ್ದು, ಮುಖ್ಯವಾಗಿ ಬಳೆಗಳ ವಿನಿಮಯಕ್ಕೆ ಸೀಮಿತವಾಗಿತ್ತು. ಆದರೆ ವಾಲೈಕಾಪ್ಪು ಹೆಚ್ಚು ವ್ಯಾಪಕವಾಗಿ ಆಚರಣೆಗೆ ಬಂದಂತೆ, ಇದು ಹೆಚ್ಚು ಅದ್ದೂರಿಯಾಗಿ ಬೆಳೆಯಿತು . 1980 ರ ದಶಕದಿಂದ ಇದನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲಾಗುತ್ತದೆ ಎಂದು ಈ ಸಂಪ್ರದಾಯದ ಬಗ್ಗೆ ಅಭ್ಯಾಸವನ್ನು ಅಧ್ಯಯನ ಮಾಡಿದ ಮಾನವಶಾಸ್ತ್ರಜ್ಞರು ಹೇಳುತ್ತಾರೆ. ಆಭರಣಗಳು, ಸೀರೆಗಳು, ಗೃಹೋಪಯೋಗಿ ವಸ್ತುಗಳು ಮತ್ತು ಚಿನ್ನದ ಆಭರಣಗಳ ಉಡುಗೊರೆಗಳೊಂದಿಗೆ ಇದನ್ನು "ವೈಭವ ಮತ್ತು ಐಷಾರಾಮಿ" ಯೊಂದಿಗೆ ನಡೆಸಲಾಗುತ್ತದೆ. == ಉದ್ದೇಶ == ಭವಿಷ್ಯದ ತಾಯಿಯ ಮಣಿಕಟ್ಟುಗಳನ್ನು ಬೆಸ ಸಂಖ್ಯೆಯ ಗಾಜಿನ ಬಳೆಗಳಿಂದ (ಕೆಂಪು ಮತ್ತು ಹಸಿರು) ಅಲಂಕರಿಸಲಾಗುತ್ತದೆ. ಬಳೆ ಶಬ್ದವು ಮಗುವಿನ ಇಂದ್ರಿಯಗಳು ಮತ್ತು ಮೆದುಳಿನ ಚಟುವಟಿಕೆಯನ್ನು ಪ್ರೇರೇಪಿಸುತ್ತದೆ ಎಂದು ನಂಬಲಾಗಿದೆ. ಭ್ರೂಣದ ಶ್ರವಣವು 7 ನೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾಗಿಯೇ ಇದನ್ನು ೭ನೇ ತಿಂಗಳಾದ ಮೇಲೆ ಆಚರಿಸಲಾಗುತ್ತದೆ. ಈ ಸಮಾರಂಭದಲ್ಲಿ ಮಹಿಳೆಯರು ಸ್ತೋತ್ರ ಮತ್ತು ಹಾಡುಗಳನ್ನು ಹಾಡುತ್ತಾರೆ. ಶ್ರೀಗಂಧ ಮತ್ತು ಅರಿಶಿನದಿಂದ ಮಾಡಿದ ಪೇಸ್ಟ್ ಅನ್ನು ತಾಯಿಯ ಕೈ ಮತ್ತು ಮುಖಕ್ಕೆ ಹಚ್ಚುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಗುವಿನ ಜನನದ ಭಯ ಮತ್ತು ಆತಂಕದಿಂದ ತಾಯಿ ಮತ್ತು ಮಗುವನ್ನು ಶಾಂತಗೊಳಿಸುತ್ತದೆ ಎಂದು ಜನ ನಂಬುತ್ತಾರೆ. ಅತಿಥಿಗಳು ನಂತರ ಅವಳ ಮಣಿಕಟ್ಟಿನ ಮೇಲೆ ಹಾರ ಮತ್ತು ಬಳೆಗಳನ್ನು ಇರಿಸಿ, ಅವಳನ್ನು ಹೂವುಗಳಿಂದ ಅಲಂಕರಿಸುತ್ತಾರೆ ಮತ್ತು ಸುರಕ್ಷಿತ ಹೆರಿಗೆಗಾಗಿ ಶುಭ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನೀಡುತ್ತಾರೆ. ಸಮಾರಂಭದ ಇನ್ನೊಂದು ಉದ್ದೇಶವೆಂದರೆ ಗರ್ಭಿಣಿ ಮಹಿಳೆಯನ್ನು ಗೌರವಿಸುವುದು ಮತ್ತು ಆರೋಗ್ಯಕರ ಮಗುವಿನ ಜನನವನ್ನು ಖಚಿತಪಡಿಸುವುದು. ಆಚರಣೆಯ ನಂತರ, ಭವಿಷ್ಯದ ತಾಯಿಯು ತನ್ನ ಗರ್ಭಾವಸ್ಥೆಯ ಕೊನೆಯ ವಾರಗಳಲ್ಲಿ ತನ್ನ ಹೆತ್ತವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾಳೆ. == ಸಮಾರಂಭದಲ್ಲಿ ಆಹಾರ == ಕೆಲವು ತಮಿಳು ಸಂಪ್ರದಾಯಗಳ ಪ್ರಕಾರ, ತಾಯಿಗೆ ಏಳು ವಿಧದ ಅನ್ನ ಮತ್ತು ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ಅನ್ನದ ಹಲವು ವಿಧಗಳಲ್ಲಿ ಪುಳಿಯೋಗರೆ, ಚಿತ್ರಾನ್ನ, ಮೊಸರು ಅನ್ನ, ಮಾವಿನಕಾಯಿ ಚಿತ್ರಾನ್ನ, ಪುದೀನ ಬಾತ್, ಟೊಮೆಟೊ ರೈಸ್ ಮತ್ತು ತೆಂಗಿನಕಾಯಿ ಅನ್ನ ಸೇರಿವೆ. ಬಡಿಸುವ ಸಿಹಿತಿಂಡಿಗಳಲ್ಲಿ ವಿವಿಧ ಪಾಯಸಗಳು ( ಜವರಿಸಿ, ಪರಪ್ಪು ಪಾಯಸಂ ), ಹಣ್ಣುಗಳ ಸಲಾಡ್ ಮತ್ತು ಕಡೆಲೆಕಾಯಿ ಲಡ್ಡು, ಬಹುಧಾನ್ಯ ಲಡ್ಡು ಮತ್ತು ಗುಲಾಬ್ ಜಾಮೂನ್‌ನಂತಹ ಸಿಹಿತಿಂಡಿಗಳು ಸೇರಿವೆ. ಶುಂಠಿ, ತಾಳೆ ಬೆಲ್ಲ ( ಕರುಪೆಟ್ಟಿ ), ಓಮಮ್ ( ಕೇರಂ ) ಮತ್ತು ಇತರ ವಸ್ತುಗಳಿಂದ ಮಾಡಿದ ಆರೋಗ್ಯಕರ ಲಡ್ಡುವನ್ನು ಉತ್ತಮ ಜೀರ್ಣಕ್ರಿಯೆಗಾಗಿ ನೀಡಲಾಗುತ್ತದೆ. ಈ ಅಡುಗೆ ಮಗುವಿನ ಆರೋಗ್ಯ ಮತ್ತು ಭವಿಷ್ಯದ ತಾಯಿಯ ಮೇಲೆ ಕೇಂದ್ರೀಕೃತವಾಗಿದೆ ಹೊರತು ಬರುವ ಅತಿಥಿಗಳ ಮೇಲಲ್ಲ . ಬಂದ ಅತಿಥಿಗಳಿಗೆ ಸಾಮಾನ್ಯವಾಗಿ ಸಸ್ಯಾಹಾರಿ ಆಹಾರವನ್ನು ನೀಡಲಾಗುತ್ತದೆ. ಬಂದವರಿಗೆ ಅನ್ನ, ಸಾಂಬಾರ್, 3 ವಿಧದ ಭಕ್ಷ್ಯಗಳನ್ನು ಮತ್ತು ಸಿಹಿತಿಂಡಿಗಳನ್ನು ನೀಡಲಾಗುತ್ತದೆ. == ಭಾರತದ ಇತರೆಡೆ ಇದೇ ರೀತಿಯ ಸಮಾರಂಭಗಳು == ಭಾರತದ ಹಲವು ಭಾಗಗಳಲ್ಲಿ ಮತ್ತು ಪಾಕಿಸ್ತಾನದಲ್ಲಿ ಇದೇ ತರದ ಆಚರಣೆಗಳು ನಡೆಯುತ್ತವೆ. ಬೆಂಗಾಲಿಯಲ್ಲಿ ಈ ತರದ ಆಚರಣೆಗೆ "ಶಾದ್" ಅಂತಲೂ, ಮರಾಠಿ ಮತ್ತು ಕೊಂಕಣಿಯಲ್ಲಿ ಈ ತರದ ಸಮಾರಂಭವನ್ನು 'ದೊಹಾಲೆ ಜೀವನ್' [डोहाळे जेवण] ಎಂದೂ, ಪಂಜಾಬಿಯಲ್ಲಿ ಇದನ್ನು 'ಗೋಧ್ ಬರಾಯಿ' ಎಂದೂ , ಸಿಂಧಿ ಮತ್ತು ಮಾರ್ವಾಡಿಗಳಲ್ಲೂ ಈ ರೀತಿಯ ಸಂಪ್ರದಾಯವಿದೆ. == ಗ್ಯಾಲರಿ == == ಉಲ್ಲೇಖಗಳು ==