ವಿ ಹರಿಕೃಷ್ಣ ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ,ಚಲನಚಿತ್ರ ನಿರ್ಮಾಪಕ,ನಿರ್ದೇಶಕ ಮತ್ತು ಸಂಗೀತ ಸಂಯೋಜಕ. ೨೦೦೬ ರಲ್ಲಿ ನಟ ದರ್ಶನ್ ಅವರ ಮೊದಲ ನಿರ್ಮಾಣವಾದ "ಜೊತೆ ಜೊತೆಯಲಿ" ಎಂಬ ಚಿತ್ರಕ್ಕೆ ಸ್ವತಂತ್ರ ಸಂಯೋಜಕರಾಗಿ ಚೊಚ್ಚಲ ಪ್ರವೇಶ ಮಾಡಿದರು. ತದನಂತರ ಅವರು ದರ್ಶನ್ ಅವರ ಬಹುತೇಕ ಚಿತ್ರಗಳಿಗೆ ಹಾಗೂ ಕನ್ನಡದ ಇತರ ಹಲವಾರು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಅವರು "ಡಿ-ಬೀಟ್ಸ್" ಎಂಬ ಆಡಿಯೊ ಕಂಪನಿಯನ್ನು ಹೊಂದಿದ್ದು, "ಬುಲ್‌ಬುಲ್" (೨೦೧೩) ಚಿತ್ರದಿಂದ ಸಂಗೀತವನ್ನು ತನ್ನ ಸ್ವಂತ ಕಂಪನಿಯಲ್ಲಿ ಸಂಯೋಜಿಸಿ ಜನರ ಮೆಚ್ಚುಗೆ ಪಡೆದರು.ಹರಿಕೃಷ್ಣ ೨೦೦೮ ರಲ್ಲಿ ಗಾಳಿಪಟ, ೨೦೦೯ ರಲ್ಲಿ ರಾಜ್ ದಿ ಶೋಮ್ಯಾನ್ ಮತ್ತು ೨೦೧೦ ರಲ್ಲಿ ಜಾಕಿ ಚಿತ್ರಗಳಿಗೆ ಅತ್ಯುತ್ತಮ ಸಂಗೀತಕ್ಕಾಗಿ ಸತತವಾಗಿ ಮೂರು ಫಿಲ್ಮ್ಫೇರ್ ಪ್ರಶಸ್ತಿಗಳಿಸಿದ್ದಾರೆ. == ವಯಕ್ತಿಕ ವಿವರ == ಹರಿಕೃಷ್ಣ ಅವರು ೧೯೭೪ ಬೆಂಗಳೂರಿನಲ್ಲಿ ಜನಿಸಿದರು. ಎಂಟು ವರ್ಷ ವಯಸ್ಸಿನಲ್ಲೇ ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ನುಡಿಸಲು ಆರಂಭಿಸಿದರು. ೧೯೮೭ ರಲ್ಲಿ ವೃತ್ತಿಪರವಾಗಿ ಕೀಬೋರ್ಡ್ ನುಡಿಸಲು ಪ್ರಾರಂಭಿಸಿ ಅವರ ಅಧ್ಯಯನವನ್ನು ನಿಲ್ಲಿಸಿದರು. ಅವರ ಮೊದಲ ವೃತ್ತಿಪರ ನಿಯೋಜನೆಯಲ್ಲಿ ಮನೋರಂಜನ್ ಪ್ರಭಾಕರ್ ಅವರೊಂದಿಗೆ ಕೆಲಸ ಮಾಡಿದರು. ೧೯೯೦ ರಲ್ಲಿ ಅವರ ತಂದೆಯನ್ನು ಕಳೆದುಕೊಂಡ ನಂತರ, ಹರಿಕೃಷ್ಣ ಅವರು ಮೆಕ್ಯಾನಿಕ್ ಅಂಗಡಿಯನ್ನು ವಹಿಸಿಕೊಂಡು ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು. ೧೯೯೪ ರಲ್ಲಿ, ಸಾಧು ಕೋಕಿಲಾ ಅವರ ಒತ್ತಾಯದ ಮೇರೆಗೆ ಮತ್ತೆ ಸಂಗೀತವನ್ನು ಪ್ರಾರಂಭಿಸಿದರು. ನಂತರ ಗಾಯಕಿ ವಾಣಿಯವರನ್ನು ವಿವಾಹವಾದರು. == ವೃತ್ತಿಜೀವನ == ೧೯೯೦ ರ ದಶಕದಲ್ಲಿ ಹಂಸಲೇಖ, ವಿ. ರವಿಚಂದ್ರನ್, ಸಾಧು ಕೋಕಿಲಾ, ಗುರುಕಿರಣ್ ಮೊದಲಾದ ಹಲವಾರು ಪ್ರಮುಖ ಸಂಗೀತ ನಿರ್ದೇಶಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಹರಿಕೃಷ್ಣ ಅವರು ಅನೇಕ ಸಂಗೀತ ನಿರ್ದೇಶಕರೊಂದಿಗೆ ಕೀಬೋರ್ಡ್ ಪ್ಲೇಯರ್ ಆಗಿಯೂ ಕೆಲಸ ಮಾಡಿದರು. ಅನೇಕ ಚಲನಚಿತ್ರಗಳು, ಕಿರುಚಿತ್ರಗಳು, ಜಾಹೀರಾತು ಮತ್ತು ಖಾಸಗಿ ಸಂಗೀತದ ಅಲ್ಬಮ್‌ಗಳಿಗೂ ಸಂಗೀತ ಕೆಲಸ ಮಾಡುತ್ತಾ ಬಂದರು. === ಸಂಗೀತ ನಿರ್ದೇಶನ === ೨೦೦೬ ರಲ್ಲಿ, ನಟ ದರ್ಶನ್ ಅವರ ಮೊದಲ ನಿರ್ಮಾಣವಾದ ಜೊತೆ ಜೊತೆಯಲಿ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಹರಿಕೃಷ್ಣ ಮೊದಲು ಸಹಿ ಹಾಕಿದರು. ಈ ಸಮಯದವರೆಗೂ, ನಟ- ನಿರ್ದೇಶಕ ವಿ. ರವಿಚಂದ್ರನ್ ಅವರ ಆಶ್ರಯದಲ್ಲಿ ಹರಿಕೃಷ್ಣ ಅವರು ಸಂಗೀತಗಾರರಾಗಿದ್ದರು. ಜೊತೆ ಜೊತೆಯಲಿ ಚಿತ್ರದಲ್ಲಿ ಪ್ರೇಮ್ ಮತ್ತು ರಮ್ಯಾ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು ಮತ್ತು ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದರು. ದಿನಕರ್ ತೂಗುದೀಪ ಅವರು ನಿರ್ದೇಶಿಸಿದರು. ಈ ಚಿತ್ರ ಸುಮಾರು ೨೫ ವಾರಗಳವರೆಗೆ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಈ ಚಿತ್ರದ ಹಾಡುಗಳು ಜನರ ಮನಸನ್ನು ಗೆದ್ದವು. ಇದರ ನಂತರ ದರ್ಶನ್ ಅವರ ಭೂಪತಿ (೨೦೦೭), ಗಜ (೨೦೦೮), ಪೊರ್ಕಿ (೨೦೧೦), ಪ್ರಿನ್ಸ್ (೨೦೧೧), ಸಾರಥಿ (೨೦೧೧) ಮತ್ತು ಚಿಂಗಾರಿ (೨೦೧೨) ಹೀಗೆ ಸಾಲು ಸಾಲಾಗಿ ಇವರಿಬ್ಬರ ಕಾಂಬಿನೇಷನ್‌ನ ಸಂಗೀತವು ಜನರ ಮನಸನ್ನು ಸೆಳೆಯಲು ಪ್ರಾರಂಭಿಸಿತು ಮತ್ತು ಉತ್ತಮ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಹರಿಕೃಷ್ಣ ಪಾತ್ರರಾದರು. ಯೋಗರಾಜ್ ಭಟ್ಟ ಅವರೊಂದಿಗೆ ಗಾಳಿಪಟ ಚಿತ್ರದ ಮೂಲಕ ಸ್ನೇಹ ಬೆಳೆಯಿತು. ಈ ಚಿತ್ರಕ್ಕಾಗಿ ಸಂಗೀತ ಸಂಯೋಜಿಸಿದ ಹರಿಕೃಷ್ಣ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತು. ಅಂಬಾರಿ, ಜಂಗ್ಲಿ, ರಾಮ್, ಮಳೆಯಲಿ ಜೊತೆಯಲಿ ಮತ್ತು ರಾಜ್-ದಿ ಶೋಮ್ಯಾನ್ ಮೊದಲಾದ ಚಿತ್ರಗಳಿಂದ ೨೦೦೯ರ ವರ್ಷವು ಹರಿಕೃಷ್ಣರಿಗೆ ಸಂಗೀತ ನಿರ್ದೇಶನದಲ್ಲಿ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿತು. ೨೦೧೦ ರಲ್ಲಿ, ೮ ಚಿತ್ರಗಳಿಗೆ ಹರಿಕೃಷ್ಣ ಸಂಗೀತ ನೀಡಿದರು ಮತ್ತು ಅವುಗಳಿಗೆ ಬಿಡುಗಡೆಯಾದ ನಂತರ ಉತ್ತಮ ಪ್ರತಿಕ್ರಿಯೆ ದೊರೆಯಿತು. ೨೦೧೧ ರ ವರ್ಷದಲ್ಲಿ ಅವರು ೧೪ ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿದರು; ಪ್ರಿನ್ಸ್, ಹುಡುಗುರು, ವಿಷ್ಣುವರ್ಧನ, ಸಾರಥಿ, ಪರಮಾತ್ಮ ಮತ್ತು ಜೋಗಯ್ಯ ಚಿತ್ರಗಳು ಹರಿಕೃಷ್ಣ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟವು. == ಪ್ರಶಸ್ತಿಗಳು == ಫಿಲಂಫೇರ್ ಪ್ರಶಸ್ತಿ(ಗಾಳಿಪಟ ) ಅರ ಏನ್ ಜೆ ಪ್ರಶಸ್ತಿ ೨೦೦೯ ಸುವರ್ಣ ಫಿಲ್ಮ್ ಪ್ರಶಸ್ತಿ (ರಾಜ್ ದಿ ಶೋಮ್ಯಾನ್) ಫಿಲಂಫೇರ್ ಪ್ರಶಸ್ತಿ (ರಾಜ್ ದಿ ಶೋಮ್ಯಾನ್) == ಚಲನಚಿತ್ರಗಳ ಪಟ್ಟಿ == == ಉಲ್ಲೇಖಗಳು == == ಎಕ್ಸ್ಟರ್ನಲ್ ಲಿಂಕ್ಸ್ ==