ವಿದರ್ಭ (ಮರಾಠಿ: विदर्भ) ಮಹಾರಾಷ್ಟ್ರ ರಾಜ್ಯದ ಪೂರ್ವದಲ್ಲಿರುವ, ನಾಗಪುರ ಮತ್ತು ಅಮರಾವತಿ ವಿಭಾಗಗಳನ್ನು ಒಳಗೊಂಡ ಪ್ರದೇಶ. ಮಹಾರಾಷ್ಟ್ರ ದ 31.6%ರಷ್ಟು ವಿಸ್ತೀರ್ಣದ ವಿದರ್ಭದಲ್ಲಿ ಮಹಾರಾಷ್ಟ್ರ ಜನಸಂಖ್ಯೆಯ 21.3% ಜನಸಂಖ್ಯೆಯಿದೆ.. ಇದು ಉತ್ತರಕ್ಕೆ ಮಧ್ಯ ಪ್ರದೇಶ, ಪೂರ್ವಕ್ಕೆ ಛತ್ತಿಸ್‌ಗಢ, ದಕ್ಷಿಣಕ್ಕೆ ಆಂಧ್ರ ಪ್ರದೇಶ ಮತ್ತು ಪಶ್ಚಿಮಕ್ಕೆ ಮಹಾರಾಷ್ಟ್ರದ ಮರಾಠವಾಡಾ ಮತ್ತು ಖಾಂದೇಶ್ ಪ್ರಾಂತ್ಯಗಳ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ, ಭಾರತದ ಮಧ್ಯ ಭಾಗದಲ್ಲಿರುವ, ತನ್ನದೇ ಆದ ಶ್ರೀಮಂತ ಸಂಸ್ಕೃತಿ ಮತ್ತು ಐತಿಹಾಸಿಕ ಹಿನ್ನೆಲೆಯ ವಿದರ್ಭವು ಮಹಾರಾಷ್ಟ್ರ ಉಳಿದ ಪ್ರದೇಶಗಳಿಗಿಂತ ಭಿನ್ನವಾಗಿದೆ. ನಾಗಪುರ ವಿದರ್ಭದ ಅತಿದೊಡ್ಡ ನಗರ ಹಾಗೂ ಮಹಾರಾಷ್ಟ್ರ ದ ಎಅರಡಮನೆಯ ರಾಜಧಾನಿ. ಈ ಪ್ರದೇಶದ ಇತರ ನಗರಗಳೆಂದರೆ ಅಮರಾವತಿ,ಅಕೋಲಾ, ಯಾವತ್ಮಲ್, ಚಂದ್ರಪುರ ಮತ್ತು ಗೋಂಡಿಯಾ. ವಿದರ್ಭ ದಲ್ಲಿಯ ಹೆಚ್ಚಿನ ಜನರು ಮರಾಠಿಯ ಉಪಭಾಷೆಯಾದ ವರ್ಹಾಡಿ ಭಾಷೆಯನ್ನು ಮಾತನಾಡುತ್ತಾರೆ. ಈ ಪ್ರದೇಶವು ಕಿತ್ತಳೆ ಮತ್ತು ಹತ್ತಿ ಬೆಳೆಯಲು ಪ್ರಸಿದ್ಧವಾಗಿದೆ. ವಿದರ್ಭವು ಮಹಾರಾಷ್ಟ್ರದ ಮೂರನೆಯ ಎರಡು ಭಾಗದಷ್ಟು ಖನಿಜ ಮೂಲವನ್ನು ಹೊಂದಿದ್ದು, ಮುಕ್ಕಾಲು ಭಾಗದಷ್ಟು ಅರಣ್ಯ ಸಂಪತ್ತಿನ ಮೂಲ ಮತ್ತು ವಿದ್ಯುತ್ ಉತ್ಪಾದನೆಗೆ ಮೂಲವಾಗಿದೆ. ಇತಿಹಾಸವನ್ನು ಗಮನಿಸಿದರೆ ಇದು ಕೋಮು ಗಲಭೆಯ ಸಮಯಗಳಲ್ಲಿ ಭಾರತದ ಇತರ ಎಲ್ಲ ಭಾಗಗಳಿಗಿಂತ ಹೆಚ್ಚು ವಿದರ್ಭವು ಶಾಂತಿಯುತವಾಗಿತ್ತು. ಆದರೆ ವಿದರ್ಭದಲ್ಲಿ ಬಡತನ ಮತ್ತು ಅಪೌಷ್ಟಿಕತೆ ಯ ಕೊರತೆ ಇದೆ. ಮಹಾರಾಷ್ಟ್ರದ ಇತರೆ ಭಾಗಗಳಿಗೆ ಹೋಲಿಸಿದಾಗ ಇಲ್ಲಿ ಆರ್ಥಿಕತೆಯ ಬೆಳವಣಿಗೆಯು ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಈ ಪ್ರದೇಶದ ಕುರಿತಾಗಿ ಮಹಾರಾಷ್ಟ ಸರ್ಕಾರ ತೋರುತ್ತಿರುವ ನಿರಂತರ ನಿರ್ಲಕ್ಷ್ಯದಿಂದಾಗಿ ವಿದರ್ಭವನ್ನು ಪ್ರತ್ಯೇಕ ರಾಜ್ಯವಾಗಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಲ್ಲದೆ ಇಲ್ಲಿಯ ಕೆಲವೇ ಕೆಲವು ರಾಜಕಾರಣಿಗಳನ್ನು ಹೊರತು ಪಡಿಸಿದರೆ ಉಳಿದ ಅಸಮರ್ಥ ರಾಜಕೀಯ ನಾಯಕತ್ವ ಕೂಡ ಇಲ್ಲಿ ಅಭಿವೃದ್ಧಿ ಪ್ರಮಾಣ ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ. ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ರೈತರು ತುಂಬಾ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಈ ದಶಕದಲ್ಲಿ ಮಹಾರಾಷ್ಟ್ರದಲ್ಲಿನ 32,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 70%ರಷ್ಟು ರೈತರು ವಿದರ್ಭದ 11 ಜಿಲ್ಲೆಗೆ ಸೇರಿದವರಾಗಿದ್ದಾರೆ. ಖನಿಜ ಸಂಪತ್ತು, ಕಲ್ಲಿದ್ದಲು, ಅರಣ್ಯ ಸಂಪತ್ತು ಮತ್ತು ಪರ್ವತಗಳನ್ನು ಹೇರಳವಾಗಿ ಹೊಂದಿದ್ದರೂ ಈ ಪ್ರಾಂತ್ಯವು ಯಾವಾಗಲೂ ಹಿಂದುಳಿದಿದೆ ಏಕೆಂದರೆ ಪಶ್ಚಿಮ ಮಹಾರಾಷ್ಟ್ರದ ರಾಜಕೀಯ ನಾಯಕರ ನಿರಂತರ ಪ್ರಾಬಲ್ಯದಿಂದಾಗಿ ಇದರ ಬೆಳವಣಿಗೆ ಕುಂಠಿತವಾಗಿದೆ. ಮಹಾರಾಷ್ಟ್ರದ ಉಳಿದ ಪ್ರದೇಶಗಳಿಗಿಂತ ಸಾಂಸ್ಕೃತಿಕವಾಗಿ, ರಾಜಕೀಯ ಮತ್ತ್ತು ಆರ್ಥಿಕವಾಗಿ ವಿಭಿನ್ನವಾಗಿದ್ದರೂ, ಮಹಾರಾಷ್ಟ್ರ ಸರ್ಕಾರದಲ್ಲಿನ ಉನ್ನತಾಧಿಕಾರಿಗಳು ಈ ಪ್ರಾಂತದ ನಾಯಕರನ್ನು ಕಡೆಗಣಿಸಿದಾಗ ಮಾತ್ರ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತದೆ. ಪ್ರತ್ಯೇಕ ರಾಜ್ಯದ ಕೂಗೂ ಕೇಳಿಬರುತ್ತಿದ್ದರೂ ರಾಜ್ಯ ರಾಜಕೀಯದ ಪ್ರಮುಖ ಪಕ್ಷವಾದ ಶಿವಸೇನಾದ ವಿರೋಧದಿಂದಾಗಿ ಇದು ಕಲ್ಪನೆಯಾಗಿಯೇ ಉಳಿದಿದೆ. == ಇತಿಹಾಸ == ಬೋನ್ಸ್ಲೆ ರಾಜಾಡಳಿತದ ಸಮಯದಲ್ಲಿ ಮರಾಠಾ ಸಾಮ್ರಾಜ್ಯದ ರಾಜಧಾನಿ ನಾಗಪುರ್‌ ಆಗಿತ್ತು. ಹದಿನೆಂಟನೆಯ ಶತಮಾನದಲ್ಲಿ ಪೂರ್ವ ಭಾರತದ ಹೆಚ್ಚು ಭಾಗವನ್ನು ಆವರಿಸಿದ್ದ ಒಂದು ಸ್ವತಂತ್ರ ಹಿಂದೂ ರಾಜ್ಯವನ್ನು ಸ್ಥಾಪಿಸಿದ್ದ. 1818ರಲ್ಲಿ ನಡೆದ ಮೂರನೇಯ ಆಂಗ್ಲೋ-ಮರಾಠಯುದ್ಧದಲ್ಲಿ ಸೋತ ನಂತರ, ನಾಗಪುರ್‌‌ ಪ್ರಾಂತದ ಮೇಲೆ ಬೋನ್ಸ್ಲೆಯ ಆಧಿಪತ್ಯ ಮುಕ್ತಾಯವಾಯಿತು. 1853ರಲ್ಲಿ ನಾಗಪುರದ ಕೊನೆಯ ಮಹಾರಾಜ ಸತ್ತ ನಂತರ ಅವನಿಗೆ ಗಂಡು ಸಂತಾನವಿರದ ಕಾರಣ ನಾಗಪುರ್‌‌ ಪ್ರಾಂತವು ಬ್ರಿಟೀಷ್ ಇಂಡಿಯಾ ಕಂಪನಿಗೆ ಸೇರಿತು. 1861ರಲ್ಲಿ ನಾಗಪುರ್‌ ವಿಭಾಗವು ಬ್ರಿಟೀಷ್‌ ರಾಜ್‌'ನ ಒಂದು ಭಾಗವಾಗಿ ಕೇಂದ್ರೀಯ ಪ್ರಾಂತ್ಯವಾಯಿತು . ಅಮರಾವತಿ ವಿಭಾಗವನ್ನು, ಪೂರ್ವದಲ್ಲಿ ಬೇರಾರ್‌ ಎಂದು ಕರೆಯಲಾಗುತ್ತಿತ್ತು. 1853ರವರೆಗೂ ಹೈದರಾಬಾದ್‌ನ ನಿಜಾಮನಿಂದ ಆಳ್ವಿಕೆಗೊಳಪಟ್ಟಿತ್ತು. ಆದೇ ವರ್ಷದಲ್ಲಿ, ನಿಜಾಮನ ಆಳ್ವಿಕೆಯಲ್ಲಿನ ಅರಾಜಕತೆಯಿಂದಾಗಿ ಬ್ರಿಟೀಷರು ಈ ಪ್ರಾಂತ್ಯದ ಮೇಲೆ ನೇರ ನಿಯಂತ್ರಣ ಪಡೆದುಕೊಂಡರು. 1903ರಲ್ಲಿ ಬೇರಾರ್ ಕೂಡ ಕೇಂದ್ರೀಯ ಪ್ರಾಂತ್ಯಕ್ಕೆ ಒಳಪಟ್ಟಿತು. ಭಾರತ ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ನಾಗಪುರ್‌ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಲವಾರು ಅಧಿವೇಶನಕ್ಕೆ ಆಥಿತ್ಯ ವಹಿಸಿಕೊಂಡಿತ್ತು. ಸೇವಾಗ್ರಾಮ ಮಹಾತ್ಮಾ ಗಾಂಧೀಜಿಯ ಕಾಲದಲ್ಲಿ ರಾಷ್ಟ್ರಭಕ್ತಿಯನ್ನು ಪಸರಿಸುವ ಭಾರತದ ರಾಜಧಾನಿಯಾಗಿತ್ತು. 1947ರಲ್ಲಿ ಭಾರತ ಸ್ವಾತಂತ್ರವಾದ ನಂತರ ಕೇಂದ್ರೀಯ ಪ್ರಾಂತಗಳು ಮತ್ತು ಬೇರಾರ್‌ ಮಧ್ಯ ಪ್ರದೇಶ ರಾಜ್ಯಕ್ಕೆ ಸೇರಿದವು. 1956ರಲ್ಲಿ ಮರಾಠಿ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಸೇರಿಸಿ ಬಾಂಬೆ ರಾಜ್ಯ ಮಾಡಿದಾಗ ಈ ವಿಲಿನದಲ್ಲಿ ವಿದರ್ಭವು ಸೇರಿಕೊಂಡಿತ್ತು. 1960ರಲ್ಲಿ ಬಾಂಬೆ ರಾಜ್ಯವು ಭಾಷಾವಾರು ಆಧಾರದ ಮೇಲೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ಭಾಗವಾಯಿತು. ಈ ಸಮಯದಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆ ಹೆಚ್ಚಿರುವ ವಿದರ್ಭವು ಮಹಾರಾಷ್ಟ್ರ ರಾಜ್ಯದ ಭಾಗವಾಯಿತು. == ಭೌಗೋಳಿಕತೆ == ಭೌಗೋಳಿಕವಾಗಿ ವಿದರ್ಭವು ದಕ್ಕನ್ ಪ್ರಸ್ಥಭೂಮಿಯ ಉತ್ತರ ಭಾಗದಲ್ಲಿದೆ. ಪಶ್ಚಿಮ ಘಟ್ಟಗಳ ರೀತಿಯ ಯಾವುದೇ ಬೆಟ್ಟ ಪ್ರದೇಶಗಳು ಇಲ್ಲಿ ಕಂಡುಬರುವುದಿಲ್ಲ. ಸಾತ್ಪುರ ರೇಂಜ್ ಮಧ್ಯ ಪ್ರದೇಶದಲ್ಲಿನ ವಿದರ್ಭ ಪ್ರಾಂತದ ಉತ್ತರಕ್ಕಿದೆ. ಅಮರಾವತಿ ಜಿಲ್ಲೆಯ ಮೆಲ್ಗಾಟ್ ಪ್ರದೇಶವು ಸಾತ್ಪುರ ರೇಂಜ್‌ನ ಉತ್ತರದ ಉಪಭಾಗದಲ್ಲಿದೆ. ದಖನ್ ಲಾವಾದ್ರವದ ಕಾರಣದಿಂದಾಗಿ ವಿದರ್ಭದ ಹೆಚ್ಚಿನ ಭಾಗದಲ್ಲಿ ದೊಡ್ಡ ಪ್ರಮಾಣದ ಕಪ್ಪುಶಿಲೆ ಕಂಡುಬರುತ್ತದೆ. ಗೋಂಡಿಯಾ ಜಿಲ್ಲೆಯು ಮಹಾರಾಷ್ಟ್ರ ರಾಜ್ಯದ ವಿಶಿಷ್ಟವಾದ ಪ್ರದೇಶವಾಗಿದ್ದು ಈ ಜಿಲ್ಲೆಯ ಸಂಪೂರ್ಣ ಪ್ರದೇಶವು ರೂಪಾಂತರದ ಶಿಲೆಗಳು ಮತ್ತು ನೆರೆಮಣ್ಣನ್ನು ಹೊಂದಿದೆ.. ಬುಲ್ದನಾದಲ್ಲಿ ಉಲ್ಕಾಶಿಲೆ ಅಥವಾ ಧೂಮಕೇತುವಿನ ಢಿಕ್ಕಿಯಿಂದಾಗಿ ಲೋನಾರ್ ಪ್ರದೇಶದಲ್ಲಿ ದೊಡ್ಡ ಗುಂಡಿ ಉಂಟಾಗಿದೆ. ಗೋಂಡಿಯಾ, ಭಂಡಾರಾ, ಗಡಚಿರೋಲಿ ಮತ್ತು ನಾಗಪುರ್‌ದ ಪೂರ್ವ‌ ಜಿಲ್ಲೆಗಳು ಭೂಕಂಪ ವಲಯ 1ರಲ್ಲಿ ಬರುತ್ತದೆ, ಇದು ಭಾರತದ ಅತ್ಯಂತ ಸುರಕ್ಷಿತ ವಲಯವಾಗಿದೆ, ಹಾಗೆಯೇ ಇತರ ಜಿಲ್ಲೆಗಳು 2ನೇ ವಲಯದಲ್ಲಿ ಬರುತ್ತವೆ. ವೇನ್‌ಗಾಂಗಾ ವಿದರ್ಭದ ಎಲ್ಲಾ ನದಿಗಳಿಗಿಂತ ಅತ್ಯಂತ ದೊಡ್ಡದಾಗಿದೆ. ವಿದರ್ಭದಲ್ಲಿ ಹರಿಯುವ ಇತರೆ ಪ್ರಮುಖ ನದಿಗಳಾದ ವಾರ್ಧಾ, ಮತ್ತು ಕನ್ಹಾನ್ ನದಿಗಳು ಗೋದಾವರಿ ನದಿಯ ಉಪನದಿಗಳಾಗಿವೆ. ಉತ್ತರದಲ್ಲಿ, ಖಾಂಡು, ಕಪ್ರಾ, ಸಿಪ್ನಾ, ಗಾಡ್ಗಾ ಮತ್ತು ಡೋಲರ್ ಜೊತೆಗೆ ಪುರ್ನಾ ಎಂಬ ಐದು ಸಣ್ಣ ನದಿಗಳು, ತಪತಿ ನದಿಯ ಉಪನದಿಗಳಾಗಿವೆ. == ಆಡಳಿತ ಮತ್ತು ರಾಜಕೀಯ == ವಿದರ್ಭವು ಎರಡು ವಿಭಾಗಗಳನ್ನು ಒಳಗೊಂಡಿದೆ (ಅಮರಾವತಿ ಮತ್ತು ನಾಗಪುರ್‌). ಇದು, ಅಮರಾವತಿ, ಅಕೋಲಾ, ಭಂಡಾರ , ಬುಲ್ದನಾ , ಚಂದ್ರಾಪೂರ್, ಗಡಚಿರೋಲಿ, ಗೋಂಡಿಯಾ, ನಾಗಪುರ್‌, ವಾರ್ದ, ವಾಷಿಮ್, ಯಾವತ್ಮಲ್ ಎಂಬ 10 ಜಿಲ್ಲೆಗಳನ್ನು ಹೊಂದಿದೆ. === ಜಿಲ್ಲಾ ಆಡಳಿತ === ಪ್ರತಿಯೊಂದು ಜಿಲ್ಲೆಯ ದಿನನಿತ್ಯದ ಆಡಳಿತವು ಜಿಲ್ಲಾಧಿಕಾರಿ ಕಛೇರಿಯಿಂದ ನಿರ್ವಹಿಸಲ್ಪಡುತ್ತದೆ. ಜಿಲ್ಲಾಧಿಕಾರಿಯು ಕೇಂದ್ರ ಸರ್ಕಾರದಿಂದ ನಿಯುಕ್ತಗೊಂಡು ಆತನೇ ರಾಜ್ಯದಲ್ಲಿ ಜಿಲ್ಲೆಯ ಆಡಳಿತವನ್ನು ನೋಡಿಕೊಳ್ಳುತ್ತಾನೆ. ವಿದರ್ಭದಲ್ಲಿ ನಾಗ್ಪುರವು ಅತ್ಯಂತ ದೊಡ್ಡ ನಗರವಾಗಿದೆ, ಅಲ್ಲಿನ ವಿಶೇಷ ಪ್ರಜಾನೀತಿ, ನಾಗಪುರದ ಅಭಿವೃದ್ಧಿ ಸಂಸ್ಥೆ, ನಾಗಪುರ ಪೌರ ನಗರಪಾಲಿಕೆಯು ಕೂಡ ನಾಗಪುರದ ಅಭಿವೃದ್ಧಿ ಮತ್ತು ಯೋಜನಾ ಚಟುವಟಿಕೆಯ ಜವಾಬ್ದಾರಿಯನ್ನು ಹೊಂದಿದೆ. ಅಮರಾವತಿ ಮತ್ತು ಅಕೋಲಾ ಎಂಬ ಪ್ರಮುಖ ನಗರಗಳು ತಮ್ಮೆದೇ ಆದ ನಗರಸಭೆಯನ್ನು ಹೊಂದಿವೆ. ಇಲ್ಲಿ ಆಡಳಿತದ ನಡೆಸುವ ಕಾರ್ಪೋರೇಟರ್‌ಗಳು (ಪ್ರತಿನಿಧಿಗಳು) ಚುನಾವಣೆಯ ಮೂಲಕ ಆರಿಸಲ್ಪಡುತ್ತಾರೆ. ನಗರ ಪ್ರದೇಶಗಳನ್ನು ವಿವಿಧ ವಾರ್ಡ್‌ಗಳಾಗಿ ವಿಭಾಗಿಸಲಾಗಿದ್ದು ಪ್ರತಿಯೊಂದು ವಾರ್ಡ್‌ ಕೂಡ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತದೆ. ಹಳ್ಳಿ ಪ್ರದೇಶಗಳು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೊಂದಿವೆ. === ಲೋಕಸಭೆಯಲ್ಲಿ ಪ್ರತಿನಿಧಿತ್ವ === ವಿದರ್ಭವು ರಾಷ್ಟ್ರೀಯ ಮಟ್ಟದಲ್ಲಿ 10 ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತದೆ. ನಾಗಪುರ್‌ ಜಿಲ್ಲೆಯು ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವುದರಿಂದ ನಾಗಪುರ್‌ ಮತ್ತು ರಾಮ್ಟೆಕ್ ಎಂಬ ಎರಡು ಲೋಕಸಭಾ ಸ್ಥಾನಗಳಾಗಿ ವಿಭಾಗಿಸಲಾಗಿದೆ ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆಗಳಾದ ಚಿಮೂರ್ ಮತ್ತು ಗಡಚಿರೋಲಿ ಒಂದಾಗಿ ಪ್ರತಿನಿಧಿಸುತ್ತವೆ. ಲೋಕಸಭೆಯಲ್ಲಿ ಪ್ರಫುಲ್ ಪಟೇಲ್‌ ಗೋಂಡಿಯಾದ ಎಂಪಿ ಆಗಿರುವುದರಿಂದ ಗೋಂಡಿಯಾ-ಬಂಢಾರಾ ಸ್ಥಾನ ಪ್ರಮುಖವಾಗಿದೆ. ರಾಮ್ಟೆಕ್ ಮತ್ತು ಅಮರಾವತಿ ಸ್ಥಾನಗಳು ಪರಿಶಿಷ್ಟ ಜಾತಿಯವರಿಗೆ ಮತ್ತು ಗಡಚಿರೋಲಿ-ಚಿಮೂರ್ ಸ್ಥಾನಗಳು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಮೀಸಲಾಗಿದೆ. === ವಿಧಾನಸಭೆಯಲ್ಲಿ ಪ್ರತಿನಿಧಿತ್ವ === ವಿದರ್ಭವು ರಾಜ್ಯ ಮಟ್ಟದಲ್ಲಿ 62 ವಿಧಾನಸಭೆ ಸ್ಥಾನವನ್ನು ಪ್ರತಿನಿಧಿಸುತ್ತದೆ. ನಾಗಪುರ್‌ ನಗರವು 6 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಕೆಲವೊಂದು ಸ್ಥಾನಗಳನ್ನು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿ ಮಾತ್ರ ಮೀಸಲಿಡಲಾಗಿದ್ದು, ಉಳಿದ ಸ್ಥಾನಗಳನ್ನು ಎಲ್ಲರಿಗೂ ಮುಕ್ತವಾಗಿಡಲಾಗಿದೆ. ನಾಗಪುರ್‌ ಒಪ್ಪಂದದ ಪ್ರಕಾರ ಮಹಾರಾಷ್ಟ್ರದ ಚಳಿಗಾಲದ ಅಧಿವೇಶನವು ನಾಗಪುರ್ ವಿಧಾನ ಭವನ‌ದಲ್ಲಿ ನಡೆಯುತ್ತದೆ. == ಜನಸಂಖ್ಯಾಶಾಸ್ತ್ರ == 2001ರ ಭಾರತ ಸರ್ಕಾರದ ಜನಗಣತಿಯ ಪ್ರಕಾರ ವಿದರ್ಭದ ಒಟ್ಟು ಜನಸಂಖ್ಯೆ 20,630,987. ಹಿಂದೂಧರ್ಮವು ಈ ಪ್ರಾಂತ್ಯದಲ್ಲಿ ಅತಿ ಹೆಚ್ಚು ಪ್ರಾಭಲ್ಯವಿರುವ ಧರ್ಮವಾಗಿದೆ. ಬೌದ್ಧಧರ್ಮವು ಎರಡನೇಯ ಅತಿ ಹೆಚ್ಚು ಅನುಕರಿಸುವ ಧರ್ಮವಾಗಿದೆ. ಮಹಾರಾಷ್ಟ್ರದ ಇತರೆ ಭಾಗಗಳಿಗೆ ಹೋಲಿಸಿದರೆ ಇದು ಭಿನ್ನವಾಗಿದೆ ಮತ್ತು ಉತ್ತರ ಭಾರತದ ಹೆಚ್ಚಿನ ಎಲ್ಲಾ ರಾಜ್ಯಗಲ್ಲಿ ಸಾಮಾನ್ಯವಾಗಿ ಇಸ್ಲಾಂ ಅತಿ ಹೆಚ್ಚು ಅನುಕರಿಸುವ ಧರ್ಮವಾಗಿದೆ. ಬಿ. ಆರ್. ಅಂಬೇಡ್ಕರ್ ಅವರು ಹುಟ್ಟುಹಾಕಿರುವ ದಲಿತ ಬೌದ್ಧಧರ್ಮ ಚಳುವಳಿಯ ಅನುಕರಣೆಯಿಂದಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯ ಬೌದ್ಧ ಧರ್ಮ ಅನುಯಾಯಿಗಳು ಕಂಡುಬರುತ್ತಾರೆ. == ಪ್ರತ್ಯೇಕತಾ ಚಳುವಳಿ == 1)೧೮೫೩ :- ಮಧ್ಯ ಭಾರತದಲ್ಲಿ ಬ್ರಿಟಿಷರು ಮೊಘಲ್ ಮತ್ತು ಮರಾಠಾ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರದಲ್ಲಿ. ನಾಗಪುರವನ್ನು ರಾಜಧಾನಿಯಾಗಿರಿಸಿಕೊಂಡು ’ನಾಗಪುರ್ ಪ್ರಾಂತ್ಯ’ವನ್ನು ನಿರ್ಮಿಸಲಾಯಿತು. ಕೇಂದ್ರ ಸರ್ಕಾರದ ಅಧೀನದ ಕಮಿಷನರ್‌ಗಳು ಈ ಪ್ರಾಂತ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. 2) ೧೮೬೧ :-ಬ್ರಿಟೀಷರು “ಕೇಂದ್ರ ಪ್ರಾಂತ್ಯವನ್ನು“ ರಚಿಸಿ ನಾಗಪುರವನ್ನು ರಾಜಧಾನಿಯನ್ನಾಗಿಸಿದರು. 3)೧೯೦೩ :- 1ನೇ ಅಕ್ಟೋಬರ್‌ನಲ್ಲಿ ಬೇರಾರ್‌ನ್ನು ಕೇಂದ್ರ ಪ್ರಾಂತ್ಯದ ಕಮಿಷ‌ನರ್‌ನ ಆಡಳಿತಕ್ಕೊಳಪಡಿಸಲಾಯಿತು. ಇದನ್ನು ಈಗ “ಕೇಂದ್ರ ಪ್ರಾಂತ್ಯ ಮತ್ತು ಬೇರಾರ್” ಎನ್ನಲಾಗುತ್ತದೆ. 4) ೧೯೩೫ :- ಬ್ರಿಟೀಷ್ ಸಂಸತ್ತಿನ ಭಾರತ ಸರ್ಕಾರದ ಕಾಯಿದೆಯನ್ವಯ ಚುನಾವಣೆಯ ಮೂಲಕ ಸಂಸ್ಥಾನಿಕ ಸಭೆಯನ್ನು ರಚಿಸಲಾಯಿತು. “ಕೇಂದ್ರ ಪ್ರಾಂತ್ಯ ಮತ್ತು ಬೇರಾರ್”ನ್ನು ಬೇರ್ಪಡಿಸಿ ನಾಗಪುರ್‌‌ವನ್ನು ರಾಜಧಾನಿಯನ್ನಾಗಿಸಿದರು. 5) ೧೯೫೦ :- ಭಾರತದ ಸಂವಿಧಾನವನ್ನು 1950ರಲ್ಲಿ ಜಾರಿಗೊಳಿಸಿದಾಗ; "ಕೇಂದ್ರ ಪ್ರಾಂತ್ಯ ಮತ್ತು ಬೇರಾರ್" ಸೇರಿಕೊಂಡು ಮಧ್ಯ ಪ್ರದೇಶ ಎಂದು ನಾಮಕರಣ ಮಾಡಲಾಯಿತು. ಇದಕ್ಕೆ ನಾಗ್‌ಪುರ್‌‌ ರಾಜಧಾನಿಯಾಯಿತು. 6) ೧೯೫೬ :- ಭಾರತದ ರಾಜ್ಯಗಳ ಪುನರಚನೆಯ ಸಂದರ್ಭದಲ್ಲಿ ಫಜಲ್ ಅಲಿ ಸಮಿತಿಯು (1953ರಲ್ಲಿ ನೇಮಕಗೊಂಡ) “ವಿದರ್ಭ” ಪ್ರತ್ಯೇಕ ರಾಜ್ಯವನ್ನಾಗಿಸಿ ಇದಕ್ಕೆ ನಾಗಪುರ್ ಅನ್ನು ರಾಜಧಾನಿಯನ್ನಾಗಿ ಶಿಫಾರಸ್ಸು ಮಾಡಿದರು. 7) ೧೯೬೦ :-೧ನೇ ಮೇ, ಫಜಲ್ ಅಲಿ ಸಮಿತಿಯ ರಾಜ್ಯಗಳ ಪುನರ್ರಚನಾ ಶಿಫಾರಸ್ಸಿನ ಪ್ರಕಾರ ಮಹಾರಾಷ್ಟ್ರ ವು ನಿರ್ಮಾಣವಾಗಿ , ಅದರಲ್ಲಿ "ವಿದರ್ಭ ರಾಜ್ಯ"ವು ವಿಲೀನವಾಯಿತು. ಇತ್ತೀಚಿನ ವರ್ಷಗಳಲ್ಲಿ ವಿದರ್ಭದ ಹೆಚ್ಚಿನ ಜನರಿಂದ ಮಹಾರಾಷ್ಟ್ರದಿಂದ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಈ ಪ್ರದೇಶವನ್ನು ನಿರ್ಲಕ್ಷಿಸುತ್ತಿದೆ ಎಂಬ ಕಾರಣದಿಂದಾಗಿ ಮತ್ತು ಇಲ್ಲಿ ಕಂಡುಬರುವ ಪ್ರತ್ಯೇಕ ರಾಜಕೀಯ ಧೋರಣೆಯ ಕಾರಣದಿಂದಾಗಿ ಈ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಪ್ರದೇಶವು ಉಳಿದ ಪ್ರದೇಶಗಳಿಗಿಂತ ಬಂಡವಾಳವನ್ನು ಆಕರ್ಷಿಸುವಲ್ಲಿ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ಆರೋಪಿಸುತ್ತಾರೆ. ಬೇರೆ ಪ್ರದೇಶಗಳಿಗೆ ಹೋಲಿಸಿದಾಗ ಈ ಪ್ರದೇಶದ ರಸ್ತೆಗಳು, ನೀರಾವರಿ ಸೌಲಭ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಕಡಿಮೆ ಒತ್ತು ನೀಡಲಾಗಿದೆ. ಹಾಗಿದ್ದಗ್ಯೂ ರಾಜ್ಯತ್ವಕ್ಕಾಗಿರುವ ರಾಜಕೀಯ ಚಳುವಳಿಗಳು ತಮ್ಮ ಅವಕಾಶವಾದೀ ನಾಯಕರ ಮೇಲೆ ಪ್ರಭಾವಬೀರಲು ಸೋತಿವೆ. ವಿದರ್ಭ ರಾಜ್ಯ ಪಕ್ಷ ಮತ್ತು ವಿದರ್ಭ ರಾಜ್ಯ ನಿರ್ಮಾನ್ ಕಾಂಗ್ರೆಸ್‌ಗಳ ಅತ್ಯಂತ ಚಿಕ್ಕ ಪಕ್ಷಗಳಾಗಿದ್ದು ರಾಷ್ಟ್ರೀಯ ಪಕ್ಷಗಳಾದ ಐಎನ್‌‍ಸಿಯಿಂದ ಬೇರ್ಪಟ್ಟ ನಾಯಕರುಗಳಿಂದಾಗಿದೆ. ರಾಷ್ಟ್ರೀಯ ಪಕ್ಷವಾದ - ಬಿಜೆಪಿ ಮಾತ್ರ ತನ್ನ ರಾಷ್ಟ್ರೀಯ ಘೋಷಣೆಯಲ್ಲಿ ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ವ್ಯವಹಾರಿಕವಾಗಿ ಬೇಡಿಕೆಯನ್ನಿತ್ತಿದೆ. 2001ರ ಭಾರತ ಸರ್ಕಾರದ ಜನಗಣತಿಯ ಪ್ರಕಾರ ವಿದರ್ಭದ ಒಟ್ಟು ಜನಸಂಖ್ಯೆ 20,630,987ರಷ್ಟಿದೆ. ಖನಿಜಗಳು, ಕಲ್ಲಿದ್ದಿಲು, ಅರಣ್ಯ ಮತ್ತು ಪರ್ವತಗಳು ಹೆಚ್ಚಾಗಿರುವುದರಿಂದ ಮತ್ತು ಕೃಷಿಯು ಕಡಿಮೆಯಿರುವುದರಿಂದ ಈ ಪ್ರದೇಶವು ಹಿಂದುಳಿದಿದೆ. ಟಾಟ ಸಮೂಹವು ಭಾರತದ ಮೊದಲ ಬಟ್ಟೆ ತಯಾರಿಕಾ ಉದ್ದಿಮೆಯನ್ನು ನಾಗಪುರ್‌‌ನಲ್ಲಿ ತೆರೆದರು, ಮೊದಲು ಸೆಂಟ್ರಲ್ ಇಂಡಿಯಾ ಸ್ಪಿನ್ನಿಂಗ್ ಆ‍ಯ್‌೦ಡ್‌ ವೀವಿಂಗ್ ಕಂಪನಿ ಲಿಮಿಟೆಡ್ ಎಂದು ಕರೆಯಲಾಗುತ್ತಿದ್ದ ಇದು "ಎಂಪ್ರೆಸ್ ಮಿಲ್ಸ್" ಎಂದೇ ಪ್ರಖ್ಯಾತವಾಗಿತ್ತು, 1 ಜನವರಿ 1877ರಂದು ಪ್ರಾರಂಭಿಸಿದ ಇದನ್ನು ರಾಣಿ ವಿಕ್ಟೋರಿಯಾ ಎಂಪ್ರೆಸ್ ಆಫ್ ಇಂಡಿಯಾ ಎಂದು ಘೋಷಿಸಿದರು. == ಆರ್ಥಿಕತೆ == ವಿದರ್ಭದ ಆರ್ಥಿಕತೆಯು ಪ್ರಮುಖವಾಗಿ ಕೃಷಿಯನ್ನಾಧರಿಸಿದ್ದು ಈ ಪ್ರದೇಶದಲ್ಲಿ ಅರಣ್ಯ ಮತ್ತು ಖನಿಜವು ಹೇರಳವಾಗಿದೆ. ವ್ಯವಹಾರಿಕ ದೃಷ್ಟಿಯಿಂದ ವಿದರ್ಭದಲ್ಲಿಯ ಪ್ರಮುಖವಾದ ಪಟ್ಟಣಗಳೆಂದರೆ ಚಂದ್ರಾಪೂರ್ ಅಮರಾವತಿ ಮತ್ತು ನಾಗಪುರ್‌. ನಾಗಪುರ್‌ ಇದು ವ್ಯವಹಾರಿಕ ದೃಷ್ಟಿಯಿಂದ ಮುಖ್ಯಕೇಂದ್ರವಾಗಿದೆ. ಅಮರಾವತಿಯು ಸಿನಿಮಾ ವಿತರಕರು ಮತ್ತು ಇಲ್ಲಿಯ ಬಟ್ಟೆ ಮಾರುಕಟ್ಟೆಗೆ ಪ್ರಸಿದ್ಧವಾಗಿದೆ. ಚಂದ್ರಾಪೂರ್ ಭಾರತದಲ್ಲೇ ದೊಡ್ಡ ಶಾಖೋತ್ಪನ್ನ ಕೇಂದ್ರವನ್ನು ಹೊಂದಿದೆ. ಬಿಐಎಲ್‌ಟಿ (ಕಾಗದ ಕೈಗಾರಿಕೆ) ಎಮ್‌ಇಎಲ್‌, ಉಕ್ಕಿನ ಕಾರ್ಖಾನೆಗಳು, ಸಿಮೆಂಟ್ ಕೈಗಾರಿಕೆಗಳು ಮತ್ತು ಕಲ್ಲಿದ್ದಲು ಗಣಿಯಂತಹ ಕೆಲವು ಭಾರಿ ಕೈಗಾರಿಕೆಗಳನ್ನು ಹೊಂದಿದೆ. ಅಂತರಾಷ್ಟ್ರೀಯ ಸರಕು ಜಾಲ, (ಮಿಹಾನ್) ನಾಗಪುರ್‌‌ನಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ. ಮಿಹಾನ್‌ನನ್ನು ಆಗ್ನೇಯ ಎಷ್ಯಾದಿಂದ ಮತ್ತು ಮದ್ಯ ಪೂರ್ವ ಎಷ್ಯಾ ದೇಶಗಳಿಂದ ಬರುವ ಭಾರಿ ಸರಕನ್ನು ಸಾಗಣೆಗೆ ಮುಖ್ಯಕೇಂದ್ರವಾಗಿ ಬಳಸಲಾಗುತ್ತದೆ. ಈ ಯೋಜನೆಯು ₹೧೦,೦೦೦ ಕೋಟಿ (ಯುಎಸ್$೨.೨೨ ಶತಕೋಟಿ) ಮಾಹಿತಿ ತಂತ್ರಜ್ಞಾನ () ಕಂಪನಿಗಳ ವಿಶೇಷ ಆರ್ಥಿಕ ವಲಯ () ವನ್ನೊಳಗೊಳ್ಳುತ್ತದೆ. ಇದುವರೆಗೂ ಭಾರತದಲ್ಲಾದ ಅತ್ಯಂತ ದೊಡ್ಡ ಅಭಿವೃದ್ಧಿ ಯೋಜನೆಯಾಗಿದೆ. === ಕೃಷಿ === ಈ ಪ್ರದೇಶದಲ್ಲಿ ಬೆಳೆಯುವ ಪ್ರಮುಖವಾದ ವಾಣಿಜ್ಯ ಬೆಳೆಗಳೆಂದರೆ ಹತ್ತಿ, ಕಿತ್ತಳೆಗಳು ಮತ್ತು ಸೋಯಾಬೀನ್‌ಗಳು. ಅಮರಾವತಿಯು ಅತ್ಯಂತ ಹೆಚ್ಚು ಕಿತ್ತಳೆ ಬೆಳೆಯುವ ಜಿಲ್ಲೆಯಾಗಿದೆ. ಸಾಂಪ್ರದಾಯಿಕ ಬೆಳೆಗಳೆಂದರೆ ಜೊವರ್, ಬಾಜ್ರ( ಮುಸುಕಿನ ಜೋಳ) ಮತ್ತು ಭತ್ತ. ಯಾವತ್ಮಲ್ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುವ ಜಿಲ್ಲೆಯಾಗಿದೆ. ಗೋಂಡಿಯಾ ಎಂಬುದು ಅತಿಹೆಚ್ಚು ಭತ್ತ ಬೆಳೆಯುವ ಜಿಲ್ಲೆಯಾಗಿದೆ.ಗೋಂಡಿಯಾವನ್ನು ಭತ್ತದ ನಗರ ಎಂದು ಕರೆಯಲಾಗುತ್ತದೆ. ಪ್ರಸ್ತುತ ವಿದರ್ಭ ಪ್ರದೇಶವು ಅತ್ಯಂತ ಹೆಚ್ಚು ರೈತರ ಆತ್ಮಹತ್ಯೆ ಕಂಡದ್ದರಿಂದ ಕುಖ್ಯಾತಿ ಪಡೆದಿದೆ. 1 ಜುಲೈ 2006ರಲ್ಲಿ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ ‍3,750-ಕೋಟಿ ರೂ (37.5 ಬಿಲಿಯನ್ ರೂ) ವಿದರ್ಭಗಾಗಿ ಪರಿಹಾರ ಧನ ವನ್ನು ಬಿಡುಗಡೆ ಮಾಡಿದರು. ಆ ಪ್ರದೇಶದ ಆರು ಜಿಲ್ಲೆಯ ರೈತರಿಗೆ ಇದು ಸಹಕಾರಿಯಾಯಿತು. ಈ ಯೋಜನೆಯನ್ನು ಹೆಚ್ಚಿನ ಆರ್ಥಿಕ ತಜ್ಞರು ಸ್ವಾಗತಿಸಲಿಲ್ಲ ಮತ್ತು ಪತ್ರಕರ್ತ ಪಿ.ಸಾಯಿನಾಥ್ ದಿ ಹಿಂದೂ ದಿನ ಪತ್ರಿಕೆಯಲ್ಲಿ ಇದು ವಿಫಲವಾದ ಯತ್ನವೆಂದು ಟೀಕಿಸಿದ್ದರು. === ಖನಿಜ ಸಂಪತ್ತು === ಚಂದ್ರಾಪೂರ್, ಗೋಂಡಿಯಾ, ಗಡಚಿರೋಲಿ, ಭಂಡಾರಾ ಮತ್ತು ನಾಗಪುರ್‌ ಜಿಲ್ಲೆಗಳು ಪ್ರಮುಖವಾದ ಖನಿಜ ಪ್ರದೇಶಗಳನ್ನು ಮತ್ತು ಕಲ್ಲಿದ್ದಲು ಮತ್ತು ಪ್ರಮುಖವಾದ ಮ್ಯಾಂಗನೀಸ್ ಅದಿರನ್ನು ಹೊಂದಿದೆ. ಮಹಾರಾಷ್ಟ್ರದ ಚಂದ್ರಾಪೂರ್ ಜಿಲ್ಲೆಯೊಂದೇ 29 ಪ್ರತಿಶತದಷ್ಟು ಖನಿಜ ಸಂಪತ್ತನ್ನೊದಗಿಸುತ್ತದೆ. ಕಬ್ಬಿಣದ ಅದಿರು ಮತ್ತು ಸುಣ್ಣದ ಕಲ್ಲನ್ನು ಸಂಭವನೀಯ ಗಣಿಗಾರಿಕಾ ಮೂಲವೆಂದು ಪರಿಗಣಿಸಲಾಯಿತು.. === ಉದ್ಯಮ === ವಿದರ್ಭ ಪ್ರದೇಶವು ಪಶ್ಚಿಮ ಮಹಾರಾಷ್ಟ್ರದ ಇತರ ರಾಜ್ಯಗಳಿಗಿಂತ ಕೈಗಾರಿಕಾ ಉನ್ನತಿಯಲ್ಲಿ ಹಿಂದುಳಿದಿದೆ. ಉತ್ತೇಜನವನ್ನು ನೀಡುವ ವಿಶೇಷ ಸೌಲಭ್ಯವನ್ನು ನೀಡಿದರೂ ಕೂಡ ಈ ಪ್ರದೇಶಕ್ಕೆ ಕೈಗಾರಿಕೆಗಳನ್ನು ಆಕರ್ಷಿಸುವಲ್ಲಿ ಸಫಲವಾಗಲಿಲ್ಲ. ನಾಗಪುರ್‌ನ ಹೊರಭಾಗದಲ್ಲಿರುವ ಬುಟಿಬೊರಿ ಕೈಗಾರಿಕಾ ಪ್ರದೇಶ ಎಮ್‌ಐಡಿಸಿವು ದೇಶದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವಾಗಿದ್ದು ಕೆಲವು ಕೈಗಾರಿಕೆಗಳು ಮಾತ್ರ ನೆಲೆಗೊಂಡಿವೆ. ಮಿಹಾನ್ ಒಂದು ಅಂತರಾಷ್ಟ್ರೀಯ ಸರಕು ಜಾಲವಾಗಿದ್ದು ಪ್ರಸ್ತುತ ನಾಗಪುರ್‌‌ದಲ್ಲಿದೆ. ಈ ಯೋಜನೆಯು ನಾಗಪುರ್‌ನ್ನು ಯಶಸ್ವಿ‌ಯಾಗಿಸುವುದು ಮತ್ತು ಪ್ರಸ್ತುತ ಇರುವ ವಿಮಾನ ನಿಲ್ದಾಣವನ್ನು ವಿಶೇಷ ಆರ್ಥಿಕ ವಲಯದೊಂದಿಗೆ ರಸ್ತೆ ಮತ್ತು ರೈಲಿನ ಮೂಲಕ ಸಂಪರ್ಕಿಸಿ ಪ್ರಮುಖವಾದ ಸಾಗಣೆ ಸರಕನ್ನು ಸಾಗಿಸುವ ಪ್ರದೇಶವನ್ನಾಗಸುವರ ಗುರಿಯನ್ನು ಹೊಂದಿದೆ. ಬಲ್ಲಾರ್‌ಪುರ್ ಕೈಗಾರಿಕೆಗಳು, ಚಂದ್ರಾಪೂರ್ ಜಿಲ್ಲೆಯಲ್ಲಿರುವ ಭಾರತದ ದೊಡ್ಡ ಕಾಗದದ ತಯಾರಿಕಾ ಮತ್ತು ರಫ್ತು ಘಟಕವಾಗಿದೆ. == ರೈತರ ಆತ್ಮಹತ್ಯೆಗಳು == ಮಹಾರಾಷ್ಟ್ರದಲ್ಲಿ ಕಳೆದ ದಶಕದಲ್ಲಿ 30,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆಯನ್ನು ಮಾಡಿಕೊಂಡರು ಅದರಲ್ಲಿ 70%ರಷ್ಟು ವಿದರ್ಭದ 11 ಜಿಲ್ಲೆಯವರಾಗಿದ್ದಾರೆ. ಇದು ಪ್ರಮುಖವಾಗಿ ಭೂಮಿಯಲ್ಲಿ ಫಲವತ್ತತೆಯಿಲ್ಲದಿರುವುದು ಮತ್ತು ನೀರಿನ ಮೂಲದ ಕೊರತೆ, ಹೊಸ ತಂತ್ರಜ್ಞಾನದ ಕೊರತೆ ಮತ್ತು ರೈತರ ಅಗತ್ಯಗಳೆಡೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿದೆ. ವಿದರ್ಭ ಪದೇಶದ ಮುಖ್ಯ ಬೆಳೆಯೆಂದರೆ ಹತ್ತಿ, ಆದರೆ ಬೆಳೆದ ಬೆಳೆಯು ಕೈಸೇರದಿದ್ದರೆ ಸರ್ಕಾರವು ನಷ್ಟವನ್ನು ಭರಿಸುವುದಿಲ್ಲ, ಇದು ಅವರನ್ನು ತೀವೃ ಹತಾಶೆಗೆ ತಳ್ಳುವ ಮೂಲಕ ಸಾಮೂಹಿಕ ಆತ್ಮಹತ್ಯೆಗೆ ಕಾರಣವಾಯಿತು. ಸರ್ಕಾರದ ಮತ್ತು ಸಾಮಾಜಿಕ ಜವಾಬ್ಧಾರಿಯುತ ವ್ಯಕ್ತಿಗಳ ಸಮಾಲೋಚನೆಯ ಕೊರತೆಯಿಂದಾಗಿ ಹೆಚ್ಚಿನ ರೈತರಿಗೆ ಬದಲಾದ ಆರ್ಥಿಕತೆಯನ್ನು ಎದುರಿಸಲು ತಿಳಿಯಲಿಲ್ಲ. ಇಂತಹ ಖಿನ್ನತೆಯು ಅವರನ್ನು ಆತ್ಮಹತ್ಯೆಯನ್ನು ಆಯ್ದುಕೊಳ್ಳುವಂತೆ ಮಾಡಿತು. ಇದೂ ಸಹ ರೈತರು ಮತ್ತು ಆ ಪ್ರದೇಶದ ಮತ್ತಿತರರನ್ನು ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಮೊರೆಹೋಗುವಂತೆ ಮಾಡಿತು. == ಪ್ರವಾಸೋದ್ಯಮ == ವಿವಿಧ ರೀತಿಯ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳಿಗೆ ತವರೂರಾದ ಎಲೆ ಉದುರುವ ಹಸಿರಾದ ಸಮೃದ್ಧ ಕಾಡುಗಳನ್ನು ವಿದರ್ಭ ಹೊಂದಿದೆ. ಇವುಗಳು ಪ್ರತಿ ವರ್ಷ ಹೆಚ್ಚು ಪ್ರಮಾಣದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಹಾರಾಷ್ಟ್ರದ ಹುಲಿಗಳ ಎಲ್ಲಾ ಮೀಸಲು ಪ್ರದೇಶಗಳು ವಿದರ್ಭದಲ್ಲೇ ಇವೆ. ಅವು ಯಾವುವೆಂದರೆ, ಅಮರಾವತಿ ಜಿಲ್ಲೆಯಲ್ಲಿರುವ ಮಲ್ಘಾಟ್ ಹುಲಿಗಳ ಮೀಸಲು ಪ್ರದೇಶ, ಚಂದ್ರಾಪುರ ಜಿಲ್ಲೆಯಲ್ಲಿರುವ ತಡೋಬ ಅಂಧಾರಿ ಹುಲಿಗಳ ಮೀಸಲು ಪ್ರದೇಶ ಮತ್ತು ನಾಗಪುರ್‌‌ ಜಿಲ್ಲೆಯಲ್ಲಿರುವ ಪೆಂಚ್ ಹುಲಿಗಳ ಮೀಸಲು ಪ್ರದೇಶ.ಗೊಂಡಿಯಾ ಜಿಲ್ಲೆಯ ನಗ್ಜಿರಾ ವನ್ಯ ಜೀವಿ ಧಾಮ ಮತ್ತು ನವೆಗೊನ್ ಬಾಂದ್‌‍ ರಾಷ್ಟ್ರೀಯ ಉದ್ಯಾನ (ಪಕ್ಷಿಧಾಮ) ಸಹ ಹೆಚ್ಚು ಜನಪ್ರಿಯವಾಗಿವೆ. ಆದಾಗ್ಯೂ ನೈಸರ್ಗಿಕ ಸಂಪನ್ಮೂಲಗಳಲ್ಲಿ ಪಶ್ಚಿಮ ಭಾಗದ ಪ್ರದೇಶಗಳಿಗೆ ಹೋಲಿಸಿದರೆ ವಿದರ್ಭದ ಪೂರ್ವ ಭಾಗದ ಪ್ರದೇಶಗಳು ಅಷ್ಟು ಸಂಪತ್ಭರಿತವಾಗಿಲ್ಲ, ಇದು 1955ರಲ್ಲಿ ನಿರ್ಮಿಸಿದ ಮಹಾರಾಷ್ಟ್ರದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನ್ನು ಒಳಗೊಂಡಿದೆ, 575.78 ಕಿಲೋಮೀಟರ್2 ವಿಸ್ತಾರವಾಗಿರುವ ತಡೋಬ ಹುಲಿಗಳ ಮೀಸಲು ಪ್ರದೇಶ, ಭಾರತದ 25 ಹುಲಿಗಳ ಮೀಸಲು ಪ್ರದೇಶಗಳ ಯೋಜನೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಉಧ್ಯಾನ ತಡೋಬ ಮತ್ತು ಅಂಧಾರಿ ಪ್ರಮಾಣದ ಎರಡು ಕಾಡುಗಳಿರುವ ಆಯತಗಳನ್ನು ಒಳಗೊಂಡಿದೆ. ತಡೋಬ ಹುಲಿಗಳ ಮೀಸಲು ಪ್ರದೇಶ ಸುಮಾರು 50 ಹುಲಿಗಳ ಹೊರತಾಗಿ ಭಾರತದ ವಿರಳ ವನ್ಯಜೀವಿಗಳಾದ ಚಿರತೆಗಳು, ಕಪ್ಪು ಕರಡಿಗಳು, ವನವೃಷಭ, ಕಾಡು ನಾಯಿಗಳು, ಕತ್ತೆಕಿರುಬಗಳು, ಪುಣುಗು ಬೆಕ್ಕು ಮತ್ತು ಕಾಡು ಬೆಕ್ಕುಗಳು, ಮತ್ತು ಸಂಬಾರ್, ಚೀತಲ್, ನೀಲ್ಗೈ, ಮತ್ತು ಬಾರ್ಕಿಂಗ್ ಜಿಂಕೆಯಂತಹ ಭಾರತೀಯ ಜಿಂಕೆಗಳ ಬಹಳ ವಿಧಗಳಿಗೆ ತವರೂರಾಗಿದೆ. ಒಂದು ಕಾಲದಲ್ಲಿ ಮಹಾರಾಷ್ಟ್ರದ ತುಂಬೆಲ್ಲ ಸಾಮಾನ್ಯವಾಗಿ ಕಂಡುಬರುತ್ತಿದ್ದ ಮಾರ್ಷ್ ಮೊಸಳೆಗಳನ್ನು ತಡೋಬ ಸರೋವರ ಜೀವಂತವಾಗಿರಿಸಿದೆ. ವೈವಿಧ್ಯವುಳ್ಳ ಜಲವಾಸಿ ಪಕ್ಷಿಸಂಕುಲದ ವಿವಿಧತೆಯಿಂದ ತಡೋಬ ಪಕ್ಷಿವಿಜ್ಞಾನಿಗಳ ಸ್ವರ್ಗ ಸಹ ಆಗಿದೆ. ಹುಲಿ ಮೀಸಲು ಪ್ರದೇಶದ ಉತ್ತರ ಮತ್ತು ಪಶ್ಚಿಮ ಭಾಗದ ಗಡಿ ಪ್ರದೇಶದಿಂದ ದಟ್ಟವಾದ ಬೆಟ್ಟಗಳಿವೆ. ದಕ್ಷಿಣ ಪಶ್ಚಿಮ ಭಾಗ ಒಂದು ದೊಡ್ಡ ಸರೋವರವಾಗಿದೆ ಇದು ಉದ್ಯಾನದ ಕಾಡು ಮತ್ತು ಇರಾಯಿ ಸರೋವರದವರೆಗೆ ಹಬ್ಬಿರುವ ಹೊಲಗದ್ದೆಗಳ ನಡುವೆ ಒಂದು ನಡುಗಡ್ಡೆಯಂತೆ ಕಾಣಿಸುತ್ತದೆ. ಮಧ್ಯ ಭಾಗ ಕಾಡುಗಳಿರುವ ಬೆಟ್ಟಗಳ ಪಕ್ಕದಲ್ಲಿರುವ ಚಿಂಚ್‌ಘಾಟ್ ಕಣಿವೆಯಲ್ಲಿ ಅರಣ್ಯದ ವಸತಿ ಗೃಹಗಳಿವೆ. ತಡೋಬ ಹುಲಿಗಳ ಮೀಸಲು ಪ್ರದೇಶ ಬಹಳ ಪ್ರವಾಸಿಗರ ಗುಂಪುಗದ್ದಲಗಳಿಲ್ಲದ ಒಂದು ಶಾಂತ ವನವಾಗಿದೆ. ತಡೋಬ ಹುಲಿಗಳ ಮೀಸಲು ಪ್ರದೇಶ ವರ್ಷದ ತುಂಬೆಲ್ಲ ತೆರೆದಿರುತ್ತದೆ ಮತ್ತು ಇದು ನಾಗಪುರ್‌‌ ನಗರದಿಂದ ಮೂರು-ತಾಸಿನ ಪ್ರಯಾಣವಾಗಿದೆ. == ಉಲ್ಲೇಖಗಳ ಪ್ರಾಮುಖ್ಯತೆ == ಮಹಾರಾಷ್ಟ್ರದ ಉಳಿದ ಭಾಗಗಳಿಂದ ಸಾಂಸ್ಕೃತಿಕ ಭಿನ್ನತೆಯ ಹೊರತಾಗಿ, ವಿದರ್ಭ ಐತಿಹಾಸಿಕವಾಗಿ ಒಂದು ಭಿನ್ನ ರೂಪದಲ್ಲಿ ಹೊರಹೊಮ್ಮಿದೆ. ವಿದರ್ಭ ಕೆಳಕಂಡವುಗಳ ಸ್ಥಳವಾಗಿದೆ ಎಂದು ಬಹಳ ಗ್ರಂಥಗಳು ನಮೂದಿಸಿವೆ: ಅಗಸ್ತ್ಯ ಮತ್ತು ಲೋಪಮುದ್ರರ ಮದುವೆ. ಭಗವಾನ್ ಕೃಷ್ಣ ರುಕ್ಮಿಣಿ-ಹರಣ ಮಾಡಿದ್ದು (ರುಕ್ಮಿಣಿಯ ಅಪಹರಣ). ರುಕ್ಮಿಣಿ ವಿದರ್ಭ ಸಾಮ್ರಾಜ್ಯದ ರಾಜಕುಮಾರಿ ಎಂದು ವರ್ಣಿಸಲಾಗಿದೆ. ನಂತರ ರುಕ್ಮಿಣಿ ಕೃಷ್ಣನ ಮುಖ್ಯ ರಾಣಿಯಾಗುತ್ತಾಳೆ. ವಿದರ್ಭದ ಪೌರಾಣಿಕ ರಾಜಧಾನಿ ಕುಂದಿನ್‌ಪುರ/ಕುಂದಿನ್‌ಯಪುರ/ಕುಂದಿನಾಪುರಿಯನ್ನು ಮಹಾಭಾರತದಲ್ಲಿ ನಮೂದಿಸಲಾಗಿದೆ. ಮಹಾಭಾರತದಲ್ಲಿ ನಳ ರಾಜ ಮತ್ತು ದಮಯಂತಿಯರ ಕಥೆ ಸಹ ಇದೆ. ವಿದರ್ಭ ಆ ಕಾಲದಲ್ಲಿ ಒಂದು ಜನಪದಗಳಂತೆ ಎಂದು ರಾಮಾಯಣದಲ್ಲಿ ವಿದರ್ಭದ ಉಲ್ಲೇಖವಿದೆ. ವಿದರ್ಭ ಯಕ್ಷ ಗಂಧರ್ವರ ಉಚ್ಚಾಟನೆಯ ಸ್ಥಳ ಎಂದು ಕಾಳಿದಾಸನ "ಮೇಘದೂತ" ಮಹಾಕಾವ್ಯದಲ್ಲಿ ಸಹ ಹೇಳಲಾಗಿದೆ. == ಸಂಸ್ಕೃತಿ ಮತ್ತು ಜನರು == ಭಾರತದ ಕೇಂದ್ರ ಭಾಗದಲ್ಲಿರುವ ವಿದರ್ಭ, ಮಹಾರಾಷ್ಟ್ರದ ಉಳಿದ ಭಾಗಗಳಿಗಿಂತ ಭಿನ್ನವಾಗಿ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಆದರೂ ಮರಾಠಿ ಸಂಸ್ಕೃತಿ ಪ್ರಧಾನವಾಗಿದೆ, ವಿದರ್ಭ, ದಕ್ಷಿಣ ಭಾಗದಿಂದ ತೆಲಗು ಮಾತನಾಡುವ ಜನರ, ಭಾರತದ ಮಧ್ಯಭಾಗ ಹಿಂದಿ ಮಾತನಾಡುವ ಜನರ ಮತ್ತು ಛತ್ತೀಸ್‌ಗಡದ ಬುಡಕಟ್ಟು ಜನರ ಸಮ್ಮಿಳನಸ್ಥಾನವಾಗಿದೆ. ಮಹಾರಾಷ್ಟ್ರದ ಉಳಿದ ಕಡೆಗಳಲ್ಲಿ ಮಾತನಾಡುವ ಮರಾಠಿ ಭಾಷೆಯ ಉಪಭಾಷೆ ವರ್ಹಾದಿ ಭಾಷೆಗೆ ವಿದರ್ಭ ಜನಪ್ರಿಯವಾಗಿದೆ. ವಿದರ್ಭದ ಗಡ್ಚಿರೋಲಿ ಜಿಲ್ಲೆ ಹೆಚ್ಚು ಬುಡಕಟ್ಟು ಜನರ ಜನಸಂಖ್ಯೆಯನ್ನು ಹೊಂದಿದೆ. ಹೋಳಿ, ದೀಪಾವಳಿ ಮತ್ತು ದಸರಾದಂತಹ ಹಿಂದೂ ಹಬ್ಬಗಳನ್ನು ಈ ಪ್ರದೇಶದ ತುಂಬೆಲ್ಲಾ ಆಚರಿಸಲಾಗಿದೆ. . ವಿದರ್ಭದಲ್ಲಿ ಹಲವಾರು ಪ್ರಮುಖ ಸಾಂಸ್ಕೃತಿಕ ಮತ್ತು ಸಾಹಿತ್ಯದ ಸಂಸ್ಥೆಗಳು ಕೆಲಸ ಮಾಡುತ್ತಿವೆ. ವಿದರ್ಭ ಸಾಹಿತ್ಯ ಸಂಘ (ಮರಾಠಿ ಭಾಷೆಯನ್ನು ಅಭಿವೃದ್ಧಿಗೊಳಿಸಲು), ವಿದರ್ಭ ರಾಷ್ಟ್ರಭಾಷೆ ಪ್ರಚಾರ ಸಮಿತಿ (ಹಿಂದಿ ಭಾಷೆಯನ್ನು ಪ್ರಸರಿಸಲು ಮತ್ತು ಬೆಂಬಲಿಸಲು) ಮತ್ತು ವಿದರ್ಭ ಹಿಂದಿ ಸಾಹಿತ್ಯ ಸಮ್ಮೇಳನ (ಹಿಂದಿಯನ್ನು ಪ್ರಚಾರ ಮಾಡಲು). ನಾಗಪುರ್‌‌ದ ಕೇಂದ್ರ ಸಂಗ್ರಹಾಲಯ (1863ರಲ್ಲಿ ಪ್ರಾರಂಭಗೊಂಡ) ಮುಖ್ಯವಾಗಿ ವಿದರ್ಭದ ಸಂಗ್ರಹಗಳನ್ನು ಕಾಯ್ದಿರಿಸುತ್ತದೆ. ಭಾರತದ ಇತರ ಭಾಗಗಳಂತೆ ಕ್ರಿಕೆಟ್ ನೆಚ್ಚಿನ ಕ್ರೀಡೆಯಾಗಿದೆ ಮತ್ತು ನಾಗಪುರ್‌‌ದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಮೈದಾನ (ವಿಸಿಎ) ಅಂತರಾಷ್ಟ್ರೀಯ ಪಂದ್ಯಗಳನ್ನು ನಡೆಸುತ್ತದೆ. ಗುರುತಿಸಬಹುದಾದ ಭಾರತದ ಪ್ರಸಿದ್ಧ ವ್ಯಕ್ತಿಗಳಲ್ಲಿ ವಿದರ್ಭದವರೆಂದರೆ, ಜಮ್ನಾಲಾಲ್ ಬಜಾಜ್, ಕೆ. ಬಿ. ಹೆಡ್ಗೆವಾರ್, ಮಾಧವ್ ಸದಾಶಿವ್ ಗೋಲ್ವಾಲ್ಕರ್, ವಿನೋಬಾ ಬಾವೆ, ಬಾಬಾ ಅಮ್ತೆ, ರಾಮ್ ಗಣೇಶ್ ಗಡ್ಕರಿ, ಪ್ರತಿಭಾ ಪಾಟಿಲ್, ಎಸ್. ಕೆ. ವಾಂಖೆಡೆ ಮತ್ತು ಸಿ. ಕೆ. ನಾಯ್ಡು. ವಿಕ್ರಮ್ ಪಂಡಿತ್ ಮತ್ತು ಸುಬ್ರಮಣ್ಯಮ್ ರಾಮದೊರೈರಂತಹ ಇತರ ಪ್ರಸಿದ್ಧ ವ್ಯಕ್ತಿಗಳು ನಾಗಪುರದಲ್ಲಿ ಹುಟ್ಟಿದವರು. ನಾಗಪುರ್‌‌ದ ಒಬ್ಬ ಮುಖ್ಯಸ್ಥ ನಿತಿನ್ ಗಡ್ಕರಿಯವರು ಭಾರತೀಯ ಜನತಾ ಪಕ್ಷದ 'ರಾಷ್ಟ್ರೀಯ ಅಧ್ಯಕ್ಷ'ರಾಗಿದ್ದಾರೆ. ಭಾರತದ ಈಗಿನ ಅಧ್ಯಕ್ಷೆ ಶ್ರೀಮತಿ ಪ್ರತಿಭಾ ತೈ ಪಾಟಿಲ್ ಅವರು ವಿದರ್ಭದ ಅಮರಾವತಿ ಜಿಲ್ಲೆಯವರಾಗಿದ್ದಾರೆ. ಅಕೋಲಾದ [ಡಾಕ್ಟರ್ ವಿಜಯ್ ಭಾಟ್ಕರ್] ಐಟಿ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿದ್ದಾರೆ. ಭಾರತದ ಮೊದಲ ಸುಪರ್‌ಕಂಪ್ಯೂಟರ್‌ನ್ನು ಸೃಷ್ಟಿಸುವಲ್ಲಿ ಇವರು ಮಹತ್ವಪೂರ್ಣ ಪಾತ್ರವಹಿಸಿದ್ದಾರೆ ಮತ್ತು ಆಧುನಿಕ ಗಣನೆಯ ಅಭಿವೃದ್ಧಿ ಕೇಂದ್ರ ಮತ್ತು ಇಂಡಿಯಾ ಇಂಟರ್‌ನ್ಯಾಷನಲ್ ಮಲ್ಟಿವರ್ಸಿಟಿ (ಆಯ್‌ಆಯ್‌ಎಮ್‌ವಿ) ಯಂತಹ ಹಲವಾರು ಸಂಸ್ಥೆಗಳನ್ನು ಸಹ ಪ್ರಾರಂಭಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಹುಲಿಜಾಡು