ಶಂಕರನಾರಾಯಣವು ಕುಂದಾಪುರ ತಾಲೂಕಿನಲ್ಲಿ , ತಾಲೂಕು ಕೇಂದ್ರದಿಂದ ಸುಮಾರು ೨೫ ಕಿ.ಮೀ.ದೂರದಲ್ಲಿರುವ ಒಂದು ಹಳ್ಳಿ. ಅದೇ ಊರಿನ ಹೆಸರಿನಲ್ಲಿರುವ ದೇವಾಲಯವು ತುಂಬಾ ಪುರಾತನವಾಗಿದ್ದು, ಕ್ರೋಡ ಕ್ಷೇತ್ರವೆಂದು ಪ್ರಸಿದ್ದವಾಗಿದ್ದು, ಪುರಾತನ ಸಪ್ತ ಕ್ಷೇತ್ರಗಳಲ್ಲಿ ಒಂದು. ಈ ಊರು ಬ್ರಿಟಿಷರ ಕಾಲದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿತ್ತು. ಬಹು ಹಿಂದಿನಿಂದ ಇರುವ ಸಬ್ ರಿಜಿಸ್ತ್ರಾರ್ ಕಛೇರಿ, ಪೋಲಿಸ್ ಠಾಣೆ ಮತ್ತಿತರ ಸರಕಾರಿ ಕಛೇರಿಗಳು ಇದರ ಪ್ರಾಮುಖ್ಯತೆಯನ್ನು ಸಾರಿದರೂ, ಇಂದು ಇದರ ಬೆಳವಣಿಗೆ ಕಡಿಮೆ ಎಂದೇ ಹೇಳಬಹುದು. ಉಡುಪಿಯಿಂದ ಕೊಲ್ಲೂರಿಗೆ ಹೋಗುವ ಹೆದ್ದಾರಿಯಲ್ಲಿರುವುದರಿಂದ, ಪ್ರವಾಸಿಗರು ಈ ಊರನ್ನು ಮತ್ತು ಇಲ್ಲಿನ ದೇವಾಲಯವನ್ನು ಸಂದರ್ಶಿಸುವರು. == ಇತಿಹಾಸ == ಶಂಕರನಾರಯಣದ ಇತಿಹಾಸವು ಇಲ್ಲಿರುವ ಪುರಾತನ ದೇವಾಲಯದೊಂದಿಗೇ ತಳುಕುಹಾಕಿಕೊಂಡಿರುವುದರಲ್ಲಿ ಅಚ್ಚರಿಯೇನಿಲ್ಲ. ಕೆರೆಯ ಮೇಲೆ ಇಲ್ಲಿನ ದೇವಾಲಯವನ್ನು ದೇವತೆಗಳು ನಿರ್ಮಿಸಿದರೆಂಬ ದಂತಕತೆಯ ಜೊತೆಗೇ ಇತರ ದಂತಕತೆಗಳಿದ್ದರೂ, ಕನಿಷ್ಟ ಎರಡುಸಾವಿರ ವರುಷಗಳ ಇತಿಹಾಸ ಈ ದೇವಾಲಯಕ್ಕೆ ಇರಬಹುದು ಎನ್ನಲಾಗಿದೆ. ಇತ್ತೀಚೆಗಿನ ಇತಿಹಾಸಕ್ಕೆ ಬಂದರೆ, ಟಿಪ್ಪು ಸುಲ್ತಾನನು ದಾನ ನೀಡಿದ ದೊಡ್ಡ ಗಾತ್ರದ ಗಂಟೆ ದೇವಾಲಯದ ಪ್ರಾಂಗಣದಲ್ಲಿದ್ದು ಕುತೂಹಲ ಕೆರಳಿಸುತ್ತದೆ. == ವಿದ್ಯಾ ಕೇಂದ್ರ == ಬಹು ಹಿಂದಿನಿಂದಲೂ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಶಂಕರನಾರಯಣದಲ್ಲಿ ಓದಲು ಬರುವ ಪರಿಪಾಠವಿರುವುದು ಕಂಡುಬರುತ್ತದೆ. ಸ್ವಾತಂತ್ರ್ಯಪೂರ್ವದಲ್ಲೇ ಇಲ್ಲಿ ಇದ್ದ ಪ್ರಾಥಮಿಕ ಶಾಲೆಯು ಈ ಸುತ್ತಲಿನ ಪ್ರದೇಶದಲ್ಲಿ ಸಾಕ್ಷರತೆಯನ್ನು ಬೆಳೆಸುವಲ್ಲಿ ಸಹಕಾರಿಯಾಯಿತು. ಈಗ ಇಲ್ಲಿ, ಕಾಲೇಜು,ಟೈಪಿಂಗ ಶಾಲೆಗಳು, ಕಂಪ್ಯೂಟರ್ ಶಿಕ್ಷಣ ಮೊದಲಾದ ಅವಕಾಶಗಳಿವೆ. == ತಂಗುವುದು ಎಲ್ಲಿ? == ಈ ಊರಿನಲ್ಲಿ ವಸತಿಗೃಹಗಳಿಲ್ಲ. ಊರಿನವರ ಮನೆಗಳಲ್ಲಿ ತಂಗಲೂಬಹುದು ಅಥವಾ ತಾಲೂಕು ಕೇಂದ್ರವಾದ ಕುಂದಾಪುರದಲ್ಲಿ ತಂಗಬಹುದು.