ಶಿಖಂಡಿಯು ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿನ ಒಂದು ಪಾತ್ರವಾಗಿದೆ . ಇವಳು ಪಾಂಚಾಲದ ರಾಜ ದ್ರುಪದನ ಮಗಳು. ಶಿಖಂಡಿನಿಯಾಗಿ ಜನಿಸಿದ ಶಿಖಂಡಿ ಯಕ್ಷನೊಂದಿಗೆ ಲೈಂಗಿಕ ವಿನಿಮಯಕ್ಕೆ ಒಪ್ಪಿಕೊಂಡ ನಂತರ ಜೈವಿಕ ಪುರುಷನಾಗುತ್ತಾಳೆ. ಸ್ವಯಂವರದಲ್ಲಿ ಭೀಷ್ಮನಿಂದ ಅಪಹರಣಕ್ಕೊಳಗಾದ ಮತ್ತು ನಂತರ ಅವನಿಂದ ತಿರಸ್ಕರಿಸಲ್ಪಟ್ಟ ರಾಜಕುಮಾರಿ ಅಂಬಾಳ ಪುನರ್ಜನ್ಮವೇ ಶಿಖಂಡಿ. == ಹಿನ್ನೆಲೆ == ಭೀಷ್ಮ ತನ್ನ ತಮ್ಮನಾದ ವಿಚಿತ್ರವೀರ್ಯನ ಮದುವೆಗೆಂದು ಅಂಬೆ, ಅಂಬಿಕಾ, ಅಂಬಾಲಿಕ ಎಂಬ ಮೂವರು ರಾಜಕುಮಾರಿಯನ್ನು ಅಪಹರಿಸುತ್ತಾನೆ. ಅವರಲ್ಲಿ ಅಂಬೆ (ಅಂಬಾ) ತಾನು ಮತ್ತೊಬ್ಬ ವ್ಯಕ್ತಿಯನ್ನು ಈಗಾಗಲೇ ಪ್ರೀತಿಸಿರುವದಾಗಿಯೂ, ತನ್ನನ್ನು ಬಿಟ್ಟು ಬಿಡಬೇಕೆಂದೂ ಭೀಷ್ಮನಲ್ಲಿ ವಿನಂತಿಸಿಕೊಳ್ಳುತ್ತಾಳೆ. ಮನ ಕರಗಿದ ಭೀಷ್ಮ ಅಂಬೆಯನ್ನು ಆಕೆಯ ಪ್ರಿಯಕರನಿಗೋಸ್ಕರ ಕಳಿಸಿಕೊಡುತ್ತಾನೆ. ಆದರೆ ಪ್ರಿಯಕರ ಅಂಬೆಯನ್ನು ತಿರಸ್ಕರಿಸುತ್ತಾನೆ. ಈಗ ಅಂಬೆಯದು ವಿಚಿತ್ರ ಪರಿಸ್ಥಿತಿ. ಇತ್ತ ಪ್ರಿಯಕರನಿಂದಲೂ ತಿರಸ್ಕೃತಗೊಂಡು ಅತ್ತ ವಿಚಿತ್ರವೀರ್ಯನನ್ನೂ ಮದುವೆಯಾಗದೇ ಕಂಗೆಡುತ್ತಾಳೆ. ಹತಾಶೆಗೊಂಡ ಅಂಬೆ ತೀರ ಕೊನೆಗೆ ಭೀಷ್ಮನನ್ನೇ ಮದುವೆಯಾಗುವಂತೆ ಒತ್ತಾಯಿಸು ತ್ತಾಳೆ. ಭೀಷ್ಮ ಒಪ್ಪುವುದಿಲ್ಲ. ಹೀಗೆ ಎಲ್ಲ ಕಡೆಗಳಿಂದಲೂ ತಿರಸ್ಕೃತಗೊಂಡ ಅಂಬೆ ಆಗ ಕೋಪದಿಂದ ಭೀಷ್ಮನೆದುರು ಶಪಥಗೈಯುತ್ತಾಳೆ. == ಅಂಬೆಯ ಶಪಥ == ಮುಂದಿನ ಜನ್ಮದಲ್ಲಿ ನಾನೇ ನಿನ್ನ ಸಾವಿಗೆ ಕಾರಣಳಾಗುವೆ ಎಂದು ಭೀಷ್ಮನೆಡೆಗೆ ಕೋಪದಿಂದ ಗರ್ಜಿಸುತ್ತ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಹಾಗೆ ಆತ್ಮಾಹುತಿ ಮಾಡಿಕೊಂಡ ಅಂಬೆ ದ್ರುಪದನ ಮಗಳಾಗಿ ಜನಿಸುತ್ತಾಳೆ. ಆಕೆಯ ಹುಟ್ಟಿನ ಸಮಯದಲ್ಲಿ ಅಶರೀರ ವಾಣಿ ಯೊಂದು ಈಕೆಯ ಹಿನ್ನೆಲೆಯನ್ನು ತಂದೆ ದ್ರುಪದನಿಗೆ ತಿಳಿಸುತ್ತದೆ. == ಭೀಷ್ಮನಿಗೆದುರಾಗಿ == ಅಶರೀರವಾಣಿಯು ಹೆಣ್ಣು ಮಗುವನ್ನು ಗಂಡಸಿನಂತೆ ಬೆಳೆಸುವಂತೆ ಸೂಚಿಸುತ್ತದೆ. ಹಾಗಾಗಿ ಶಿಖಂಡಿ ಹೆಣ್ಣಾದರೂ ಗಂಡಸಿನಂತೆ ಬೆಳೆಯುತ್ತಾಳೆ. ಮುಂದೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಭೀಷ್ಮನಿಗೆದುರಾಗಿ ಶಿಖಂಡಿಯನ್ನೇ ತಂದು ನಿಲ್ಲಿಸುತ್ತಾನೆ. ಭೀಷ್ಮ ಹೆಣ್ಣಿನ ಎದುರು ಯುದ್ಧ ಮಾಡಲಾರೆ ಎಂದು ಶಸ್ತ್ರ ಕೆಳಗಿಡುತ್ತಾನೆ. ಆಗ ಕೃಷ್ಣ ಅರ್ಜುನನಿಗೆ ಮೋಸದಿಂದ ಭೀಷ್ಮನೊಂದಿಗೆ ಹೋರಾಡುವಂತೆ ಪ್ರೆರೇಪಿಸಿ ಭೀಷ್ಮನನ್ನು ಹೊಡೆದುರುಳಿಸುತ್ತಾನೆ. ಹೀಗೆ ಭೀಷ್ಮನ ಸಾವಿಗೆ ಕಾರಣವಾಗುವುದರ ಮೂಲಕ ಅಂಬೆಯು ಶಿಖಂಡಿಯಾಗಿ ತನ್ನ ಶಪಥ ಪೂರೈಸಿಕೊಳ್ಳುತ್ತಾಳೆ. ಶಿಖಂಡಿ ಎಂದರೆ 'ಉಭಯ ಲಿಂಗಿ'ಗಳು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು ==