ಶಿವನೆ (ಗಮಾರಿ) ಮಧ್ಯಮ ಪ್ರಮಾಣದ ಮರ. ಇದು ಭಾರತದಾದ್ಯಂತ ಬೆಳೆಯುತ್ತದೆ. ದಕ್ಷಿಣ ಎಷಿಯಾದ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕಂಡುಬರುತ್ತದೆ. ಇದು ಒಂದು ಔಷಧೀಯ ಮರ. ಈ ಮರವು ಅತೀ ವೇಗವಾಗಿ ಬೆಳೆಯುವ ಮರವಾಗಿದ್ದು ಹೆಚ್ಚು ಮಳೆ ಬೀಳುವ ಕಣಿವೆಗಳಲ್ಲಿ ಸುಮಾರು 30 ಮೀ ಎತ್ತರ ಬೆಳೆಯುತ್ತದೆ. == ಸಸ್ಯ ಶಾಸ್ತ್ರೀಯ ವರ್ಗೀಕರಣ == ಇದು ವರ್ಬೆನಾಸಿ ಕುಟುಂಬಕ್ಕೆ ಸೇರಿದ್ದು ಗ್ಮೆಲಿನ ಅರ್ಬೊರಿಯ ಎಂದು ಸಸ್ಯಶಾಸ್ತ್ರೀಯ ಹೆಸರು. == ಕನ್ನಡದ ಇತರ ಹೆಸರುಗಳು == ಕಾಶ್ಮಿರಿ ಕುಂಬಲ್ ಕುಂಭುದಿ ಕುಮುಲು ಕುಸ ಕೂಲೆ ಗಾಂಧಾರಿಗಿಡ ಗುಪ್ಸಿ ಗುಂಭಾರಿ ಗುಮ್ಮಿ == ಇತರ ಭಾಷೆಯ ಹೆಸರುಗಳು == ಸಂ.-ಶ್ರೀಪರ್ಣಿ ಕಾಸ್ಮಾರಿ ಗಂಭಾರಿ ಗುಂಭಾರಿ ಭದ್ರಪರ್ಣೆ ಮಧುಪರ್ಣಿಕ ಹಿಂ.-ಗುಮಾರಿ ಗುಂಭಾರ್ ತ.-ಕುಂಪ್ಲಿ ಪೆರುಂಗುಂಪ್ಲಿ ಕಟ್ಟಾನಂ ಗುಮ್ಮಡಿಟೇಕು ಇಂ.-ಮೆಲೈನ ಟ್ರೀ == ಸಸ್ಯದ ಗುಣಲಕ್ಷಣಗಳು == ಕಾಂಡದ ಸುತ್ತಳತೆ 1-5 ಮೀಟರ್ ದಪ್ಪ ಇರುತ್ತದೆ. ಇದರ ದಪ್ಪಗಿನ ಕಂದು ಬಣ್ಣದ ತೊಗಟೆಯ ಮೇಲೆ ಬಿಳಿಯ ಬಣ್ಣದ ಮಚ್ಚೆಗಳು ಕಾಣುತ್ತದೆ. ಬೇಸಿಗೆ ಕಾಲದಲ್ಲಿ ಎಲೆಗಳು ಉದುರಿದಾಗ ರೆಂಬೆಗಳ ಕೊನೆಯಲ್ಲಿ ಕಿರಿದಾದ ಕೊಂಬೆಗಳಲ್ಲಿ ಎರಡು ದಳಗಳಿರುವ ಕಂದು ಬಣ್ಣ ಲೇಪಿತ ಹಳದಿ ಬಣ್ಣದ ಹೂವುಗಳ ಗೊಂಚಲು ಕಾಣಸಿಗುತ್ತದೆ. ಹೃದಯಾಕಾರದ ಎಲೆಗಳು (ಚಿತ್ರ ನೋಡಿ). ಎಲೆಗಳು ಪರಸ್ಪರ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ತೊಗಟೆ ನಯವಾಗಿರುತ್ತದೆ. ಹೊಪ್ಪಳಿಕೆ ಕಳಚುತ್ತದೆ. ದಾರುವು ಹಳದಿ ಛಾಯೆ ಹೊಂದಿದ್ದು, ಮೃದುವಾಗಿರುತ್ತದೆ. ಹಗುರವಾದರೂ ಸಮಾನ ಕಣ ರಚನೆ ಹೊಂದಿರುತ್ತದೆ. ಬಲಯುತವಾಗಿದ್ದು ಸೀಳಿಕೆ, ಸುರುಟುವಿಕೆ ಇರುವುದಿಲ್ಲ. ಈ ಮರ ಬೆಸಿಗೆಯಲ್ಲಿ ಎಲೆಯುದುರುವ ಮಲೆನಾಡಿನ ಮತ್ತು ಮೈದಾನ ಸೀಮೆಯ ಒಣ ಸಸ್ಯಾವರಣ ಹಾಗೂ ಕಳ್ಳಿ ಕುರುಚಲು ಗಿಡಗಳನ್ನು ಒಳಗೊಂಡ ಸಸ್ಯ. ಉದ್ದತೊಟ್ಟಿನ ಎಲೆ ಆಗಿರುತ್ತದೆ. ಬಲಿತ ಮೇಲೆ ಅವುಗಳ ಮೇಲಿನ ತುಪ್ಪಳ ಉದುರಿಹೋಗಿ ಹೊಳಪಾಗುತ್ತದೆ ಎಲೆಯ ಉದ್ದ ೧೮-೨೫ ಸೆ.ಮೀ. ಇರುತ್ತದೆ. ಜೂನ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಈ ಮರ ಹೂ ಬಿಡುತ್ತದೆ. ಒಳಭಾಗವು ಹಳದಿಯಾಗಿರುತ್ತದೆ. ಹಣ್ಣುಗಳು ಗೋಳಾಕಾರ. ಬಲಿತಾಗ ಹಳದಿ ಬಣ್ಣ. ಪ್ರತಿ ಹಣ್ಣಿನಲ್ಲಿ ೧-೨ ಬೀಜಗಳಿರುತ್ತದೆ. == ಕೃಷಿ == ಬಿಸಿಲನ್ನು ಇಷ್ಟಪಡುವ ಮರ. ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಎಳೆಯ ಗಿಡಗಳಿಗೆ ಜಿಂಕೆ ದನಜಾನುವಾರುಗಳಿಂದ ಹಾನಿ. ಸ್ವಾಭಾವಿಕ ಪುನರುತ್ಪತ್ತಿ ವಿರಳ. ಬೀಜ ಬಿತ್ತಿ, ಇಲ್ಲವೆ ಪಾತಿಯ ಸಸಿಗಳನ್ನು ನೆಟ್ಟು ಬೆಳೆಸಬಹುದು. ನೆಡುಕಡ್ಡಿಗಳಿಂದಲೂ ಬೆಳೆಸಲು ಸಾಧ್ಯ. == ಉಪಯೋಗಗಳು == ಇದು ಉತ್ತಮ ಜಾತಿಯ ಮರವಾಗಿದ್ದು ಹಲವಾರು ಉಪಯೋಗಗಳನ್ನು ಹೊಂದಿದೆ. ಹಲಗೆ, ಪೀಠೋಪಕರಣ, ದೋಣಿ ನಿರ್ಮಾಣ, ಪೆಟ್ಟಿಗೆ, ಬಾಚಣಿಗೆ ಮುಂತಾದ ಮರ ಕೆಲಸಗಳಿಗೆ ಯೋಗ್ಯ ಮರವಾಗಿದೆ. ಕೃತಕ ಅವಯವಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಪದರಹಲಗೆಗಳ ತಯಾರಿಕೆಯಲ್ಲಿ ಉಪಯುಕ್ತ. ಜ್ವರದಿಂದ ತಲೆನೊವು ಬಂದಾಗ ಎಲೆಗಳನ್ನು ಅರೆದು ಹಣೆಗೆ ಪಟ್ಟಿ ಹಾಕುವುದರಿಂದ ತಲೆನೋವು ಗುಣವಾಗುತ್ತದೆ. ಬೇರಿನ ಗಂಧ, ಕಷಾಯ ಅಥವಾ ಚೂರ್ಣ ಸೇವನೆಯಿಂದ ಅಜೀರ್ಣ ಮತ್ತು ಮೂಲವ್ಯಾಧಿ ಗುಣವಾಗುತ್ತವೆ. ಈ ಮರದ ಫಲಸೇವನೆಯಿಂದ ಅತಿಯಾದ ದಾಹ, ಹೃದಯಸಂಬಂಧದ ರೋಗ ಮತ್ತು ಕ್ಷಯರೋಗಗಳು ಗುಣವಾಗುತ್ತವೆ. ಎಲೆಯ ರಸವನ್ನು ಹಾಲು ಸಕ್ಕರೆಯೊಡನೆ ಸೇವಿಸುವುದರಿಂದ ಮೂತ್ರಾಂಗದ ಉರಿ, ಊತ ಮತ್ತು ಪ್ರಮೇಹ ವ್ಯಾಧಿ ಗುಣವಾಗುತ್ತದೆ. ಈ ಮರದ ಫಲಸೇವನೆಯಿಂದ ಎದೆಹಾಲು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಬೇರು ಮತ್ತು ತೊಗಟೆಯ ಕಷಾಯವು ಹಾವು ಕಚ್ಚಿರುವ ವ್ಯಕ್ತಿಯು ಸೇವಿಸಿದರೆ ವಿಷದಿಂದ ಆಗುವ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಎಳೆಯ ಎಲೆಗಳ ರಸವನ್ನು ಕೆಮ್ಮಿನ ತೊಂದರೆ ಇರುವವರು ಉಪಯೋಗಿಸಬಹುದು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == - .