ಶೂರ್ಪನಖಿ ರಾವಣನ ಸಹೋದರಿ. ವಾಲ್ಮೀಕಿ ಯ ಅನುಸಾರ ರಾಮಾಯಣದ ಎಲ್ಲಾ ಘಟನೆಗಳಗೆ ಮೂಲ ಪ್ರೇರಣೆಯ ಎರಡು ಪಾತ್ರಗಳಲ್ಲಿ ಒಬ್ಬಳು. ಇನ್ನೊಬ್ಬಳು ಕೈಕೇಯಿ ರಾಮಾಯಣದ ಅನುಸಾರ ಶೂರ್ಪನಖಿಯನ್ನು ದುಷ್ಟಬುದ್ಧಿ ಎಂಬ ರಾಕ್ಷಸನಿಗೆ ಮದುವೆ ಮಾಡಿಕೊಡಲಾಗಿತ್ತು. ದುಷ್ಟಬುದ್ದಿಯನ್ನು ರಾವಣ ಕೊಲ್ಲಿಸಿದ ನಂತರ ಅಣ್ಣನ ಮೇಲೆ ಸಿಟ್ಟಾಗಿ ಶೂರ್ಪನಖಿ ದಂಡಕಾರಣ್ಯ ದ ಕಾಡುಗಳಲ್ಲಿ ತಿರುಗಾಡುತ್ತಿದ್ದಳು. ಹೀಗೆ ತಿರುಗಾಡುತ್ತಿದ್ದಾಗ ರಾಮನನ್ನು ಕಂಡು ಮೋಹಿಸಿ ಮದುವೆಯಾಗಲು ಪೀಡಿಸುತ್ತಾಳೆ.ರಾಮನು ಮದುವೆಯಾಗಲು ಒಪ್ಪದೆ ತಮ್ಮ ಲಕ್ಷ್ಮಣನಲ್ಲಿಗೆ ಕಳುಹಿಸುತ್ತಾನೆ.ಅವನೂ ಒಪ್ಪದಿದ್ದಾಗ ಸಿಟ್ಟಾಗಿ ಸೀತೆಯ ಮೇಲೆ ಏರಿ ಹೋಗುತ್ತಾಳೆ. ಇದನ್ನು ತಡೆದ ಲಕ್ಷಣ ಶೂರ್ಪನಖಿಯ ಮೂಗು ಕತ್ತರಿಸುತ್ತಾನೆ. ಆಪಮಾನ ತಾಳಲಾಗದ ಶೂರ್ಪನಖಿ ಅಣ್ಣ ಖರಾಸುರನಲ್ಲಿಗೆ ಹೋಗಿ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ದಮಾಡಿ ಮಡಿಯುತ್ತಾನೆ. ಅಲ್ಲಿಂದ ನೇರ ಶೂರ್ಪನಖಿ ತನ್ನ ಅಣ್ಣ ರಾವಣನಲ್ಲಿ ದೂರು ಕೊಡಲು ಲಂಕೆಗೆ ಹೋಗುತ್ತಾಳೆ.ರಾವಣನಲ್ಲಿ ತನ್ನ ಬವಣೆಯನ್ನು ಹೇಳಿಕೊಂಡು ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ ರಾವಣರ ಯುದ್ಧದಲ್ಲಿ ಕೊನೆಗೊಳ್ಳುತ್ತದೆ.