ಶ್ರೀನಿವಾಸ.ಜಿ.ಕಪ್ಪಣ್ಣ ನೆಂದು ಪ್ರಸಿದ್ಧರಾಗಿರುವ ರಂಗ ಕಲಾವಿದರ ತಂದೆ-ತಾಯಿಯವರು ಇಟ್ಟ, ಬಾಲ್ಯದ ಹೆಸರು, ಶ್ರೀನಿವಾಸ ಗಿರಿಯಪ್ಪ ಕಪ್ಪಣ್ಣನೆಂದು. , ಜಗತ್ತಿನಾದ್ಯಾಂತ, ರಂಗಭೂಮಿಯ ಜನ ಈ ಸಾಂಸ್ಕೃತಿಕ ರಾಯಭಾರಿಯನ್ನು ಕಪ್ಪಣ್ಣ ನೆಂದೇ ಗುರುತಿಸುತ್ತಾರೆ. ಕನ್ನಡ ರಂಗಭೂಮಿ ಗೆ ಇವರ ಕೊಡುಗೆ ಅನನ್ಯ. == ಜನನ == ೧೯೪೮, ಫೆಬ್ರುವರಿ ೧೩ ರಂದು ಕಪ್ಪಣ್ಣನವರ ಜನನ ಬೆಂಗಳೂರಿನಲ್ಲಿ ಆಯಿತು. ರಂಗ ಚಳವಳಿ, ಶ್ರೀನಿವಾಸ್‌ರ ತಂದೆ ಗಿರಿಯಪ್ಪ, ತಾಯಿ ಶ್ರೀಮತಿ ಜಯಮ್ಮ. == ಸಾಧನೆ == ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಿನಿಂದಲೇ ರಂಗಭೂಮಿಗೆ ಕಾಲಿಟ್ಟ ಕಪ್ಪಣ್ಣನವರಿಗೆ ಆಗ ಮಾರ್ಗದರ್ಶಕರಾಗಿದ್ದವರು ಪದ್ಮಭೂಷಣ ಡಾ. ಹೆಚ್.ನರಸಿಂಹಯ್ಯನವರು ಮತ್ತು ಮೇಕಪ್ ನಾಣಿಯವರು. ಅಂದಿನಿಂದ ಅವಿರತವಾಗಿ ರಂಗದ ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ನಾಟಕದ ಉಸ್ತುವಾರಿಗಳನ್ನು ನಿರ್ವಹಿಸುತ್ತಾ ಮತ್ತು ವಿವಿಧ ಜಾನಪದ ಹಾಗೂ ಶಾಸ್ತ್ರೀಯ ಕಲೆಗಳನ್ನು ಆಯೋಜಿಸುತ್ತಾ, ಪ್ರೋತ್ಸಾಹಿಸುತ್ತಾ ರಂಗಭೂಮಿಗೆ ತಮ್ಮದೇ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಕಪ್ಪಣ್ಣನವರು ಭಾರತೀಯ ಸಂಸ್ಕೃತಿಯನ್ನು ಅದರಲ್ಲೂ ವಿಶೇಷವಾಗಿ ಕರ್ನಾಟಕ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪರಿಚಯಿಸುತ್ತಿರುವುದು ತುಂಬಾ ಮುಖ್ಯವಾಗಿದೆ. ಅವರು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರೂ ಆಗಿದ್ದರು. === ರಂಗಭೂಮಿ === ಅಸಂಖ್ಯಾತ ನಾಟಕಗಳಿಗಾಗಿ, ತಂಡಗಳಿಗಾಗಿ ಮತ್ತು ಕನ್ನಡದ ಶ್ರೇಷ್ಠ ನಿರ್ದೇಶಕರುಗಳಾದ ಪ್ರೊ. ಬಿ.ಚಂದ್ರಶೇಖರ, ಬಿ.ವಿ.ಕಾರಂತ, ಎಮ್.ಎಸ್.ಸತ್ಯು, ಸಿ.ಆರ್.ಸಿಂಹ ಮುಂತಾದವರೊಂದಿಗೆ ಕೆಲಸ ಮಾಡಿದ ಕಪ್ಪಣ್ಣನವರು ನಟರಂಗ ತಂಡದ ಸ್ಥಾಪಕ ಕಾರ್ಯದರ್ಶಿಗಳು ಎನ್ನುವುದು ಆ ತಂಡದ ಹೆಮ್ಮೆ. ಕಪ್ಪಣ್ಣನವರು ನಟರಂಗ ತಂಡದ, ‘ಎಲ್ಲಾ ನನ್‌ಮಕ್ಕಳೇ’, ‘ಅಧಃಪಾತಾಳ’, ‘ಚಿಕ್ಕವೀರ ರಾಜೇಂದ್ರ’ ಮತ್ತು ‘ಕುರುಡು ಕಾಂಚಾಣ’ ನಾಟಕಗಳಿಗಾಗಿ ೧೦೦೦ಕ್ಕೂ ಹೆಚ್ಚು ಬಾರಿ ಬೆಳಕು ಸಂಯೋಜನೆ ಮಾಡಿದ್ದೊಂದು ವಿಶೇಷ ದಾಖಲೆ. ಖ್ಯಾತ ನಿರ್ದೇಶಕ ಪೀಟರ್ ಬ್ರೂಕ್ ಅವರ "ಅಂತಾರಾಷ್ಟ್ರೀಯ ಮಹಾಭಾರತ ಕಾರ್ಯಾಗಾರ"ದ ಮುಖ್ಯ ಸಂಚಾಲಕರಾಗಿ ಯಶಸ್ಸು ಸಾಧಿಸಿದ್ದಾರೆ.. === ನೃತ್ಯ === ಪ್ರತಿಭಾ ಪ್ರಹ್ಲಾದ್, ಮಾಧವಿ ಮುದ್ಗಲ್, ಸೋನಲ್ ಮಾನ್‌ಸಿಂಗ್, ಮೃಣಾಲಿನಿ ಸಾರಾಭಾಯ್, ಚಿತ್ರಾ ವಿಶ್ವೇಶ್ವರನ್, ಸುಧಾರಾಣಿ ರಘುಪತಿ, ಪದ್ಮಾ ಸುಬ್ರಮಣ್ಯಂ, ಮಾಯಾ ರಾವ್, ನಿರುಪಮಾ-ರಾಜೇಂದ್ರ ಹಾಗೂ ಇನ್ನಿತರ ಪ್ರಖ್ಯಾತ ನೃತ್ಯಪಟುಗಳ ಕಾರ್ಯಕ್ರಮಗಳಿಗಾಗಿ ಬೆಳಕು ಸಂಯೋಜನೆ ಮಾಡಿಕೊಟ್ಟವರು ಶ್ರೀನಿವಾಸ.ಜಿ.ಕಪ್ಪಣ್ಣ. ಸಿನಿಮಾ : ಸುಪ್ರಸಿದ್ಧ ಸಾಹಿತಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ನಾಟಕ ಆಧಾರಿತ ಚಲನಚಿತ್ರ ಕಾಕನ ಕೋಟೆಯ ಕಾರ್ಯಾಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. === ದೂರದರ್ಶನ ಮತ್ತು ಸಾಕ್ಷ್ಯಚಿತ್ರಗಳು === ಸತತ ಮೂರು ವರ್ಷಗಳ ಕಾಲ ನಡೆದ, ಸಂಗೀತ ಪ್ರತಿಭೆಗಳ ಶೋಧದ ಜನಪ್ರಿಯ ಕಾರ್ಯಕ್ರಮ ನಿತ್ಯೋತ್ಸವದ ಪರಿಕಲ್ಪನೆ ಮತ್ತು ನಿರ್ದೇಶನ ಕಪ್ಪಣ್ಣನವರದು. ಜನಪ್ರಿಯ ಟಿವಿ ಧಾರಾವಾಹಿಗಳಾದ ಮಾಲ್ಗುಡಿ ಡೇಸ್, ಮುಕ್ತ ಹಾಗೂ ಮುಕ್ತ ಮುಕ್ತ ಗಳಲ್ಲಿ ಅಭಿನಯಿಸಿದ್ದಾರೆ. ಬಿ.ವಿ.ಕಾರಂತ, ಡಾ.ಚಂದ್ರಶೇಖರ ಕಂಬಾರ, ಸಿ ಅಶ್ವತ್ಥ್, ಮಾಯಾ ರಾವ್, ಆರ್.ಕೆ.ಸೂರ್ಯನಾರಾಯಣ ಮುಂತಾದವರ ಜೀವನಾಧಾರಿತ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬೇರೆ ಬೇರೆ ಟಿವಿ ವಾಹಿನಿಗಳಿಗಾಗಿ ಡಾ.ರಾಜ್‍ಕುಮಾರ್, ಹೆಚ್.ಡಿ.ದೇವೇಗೌಡ, ಎಸ್.ಎಮ್.ಕೃಷ್ಣ, ಜೆ.ಹೆಚ್.ಪಟೇಲ್ ಅವರಂಥ ಪ್ರಖ್ಯಾತ ವ್ಯಕ್ತಿಗಳ ಸಂದರ್ಶನ ಮಾಡಿದ್ದಾರೆ. ಕರ್ನಾಟಕದಾದ್ಯಂತ ಮತ್ತು ಅಮೇರಿಕದಲ್ಲಿ ನಡೆದ ಜನಪ್ರಿಯ ಧಾರಾವಾಹಿಗಳಾದ ಮುಕ್ತ ಹಾಗೂ ಮುಕ್ತ ಮುಕ್ತಗಳ ಸಂವಾದ ಕಾರ್ಯಕ್ರಮಗಳ ನಿರೂಪಕರಾಗಿ ಸಂವಾದಗಳು ಕಳೆಗಟ್ಟುವಂತೆ ಮಾಡಿದವರು ಕಪ್ಪಣ್ಣ. === ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು === ಎಂಟು ವರ್ಷಗಳ ಕಾಲ ದೇಶದ ರಾಜಧಾನಿಯಲ್ಲಿ, ಗಣರಾಜ್ಯೋತ್ಸವದಂದು ಕರ್ನಾಟಕವನ್ನು ಪ್ರತಿನಿಧಿಸುವ ಜಾನಪದ ತಂಡಗಳಿಗೆ ನೃತ್ಯ ಸಂಯೋಜನೆ ಮಾಡಿ ಮತ್ತು ಮುಂದಾಳತ್ವ ವಹಿಸಿದ್ದಾರೆ. ದೆಹಲಿಯಲ್ಲಿ ನಡೆದ -84 ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ತಂಡದ ಮುಂದಾಳತ್ವ ಮತ್ತು ನೃತ್ಯ ಸಂಯೋಜನೆ. ಮೈಸೂರು ದಸರಾ ಉತ್ಸವ -೨೦೦೦ಕ್ಕಾಗಿ ಟಾರ್ಚ್ ಲೈಟಿನ ವಿನ್ಯಾಸ ಮಾಡಿದ್ದಾರೆ. ರಶಿಯನ್ ಉತ್ಸವ, ಸಾರ್ಕ್ ()ಉತ್ಸವ, ಹಂಪಿ ಉತ್ಸವ, ರಾಜ್ಯೋತ್ಸವ ಮತ್ತು ಅನೇಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಗಳ ವಿನ್ಯಾಸ ಮತ್ತು ಸಂಘಟನೆ ಮಾಡಿದ್ದಾರೆ. ೧೯೯೭ರ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮರಂಭ ಮತ್ತು ಮುಕ್ತಾಯ ಸಮಾರಂಭಗಳ ಸಂಘಟನೆ. ಬೆಂಗಳೂರಿನಲ್ಲಿ ನಡೆದ ಕುವೆಂಪು ಕಲಾಕ್ಷೇತ್ರ- ಒಂದು ಪ್ರದರ್ಶನ ರಂಗಭೂಮಿ( - ) ಕಾರ್ಯಕ್ರಮದ ವಿನ್ಯಾಸಕಾರ. ಕಪ್ಪಣ್ಣನವರ ಇತ್ತೀಚಿನ ಸಾಧನೆಯ ಮೈಲುಗಲ್ಲೆಂದರೆ ಜನಪದ ಜಾತ್ರೆ. ಎರಡು ವರ್ಷಗಳ ಕಾಲ ೬೯ ಸಲ ನಡೆದ ಜನಪದ ಜಾತ್ರೆಯಲ್ಲಿ ಕರ್ನಾಟಕದ ವಿವಿಧ ಜಾನಪದ ಕಲೆಗಳ ಪ್ರದರ್ಶನಗಳ ದೃಶ್ಯ ವೈಭವ. ಇದರಲ್ಲಿ ೮೩ ವಿಭಿನ್ನ ಪ್ರಕಾರದ ಜನಪದ ಕಲೆಗಳಿದ್ದವು. ೨೫೦ ತಂಡಗಳು ಭಾಗವಹಿಸಿದ್ದವು. ಹಾಗೂ ಒಟ್ಟು ೫,೮೦೦ ಜನ ಕಲಾವಿದರು ತಮ್ಮ ಪ್ರತಿಭೆಯನ್ನು ಮೆರೆದರು! === ಅಂತಾರಾಷ್ಟೀಯ ಸಾಂಸ್ಕೃತಿಕ ಕಾರ್ಯಕ್ರಮಗಳು === ಇಂಗ್ಲೆಂಡ್, ಅಮೇರಿಕಾ, ಜರ್ಮನಿ, ಶ್ರೀಲಂಕಾ, ಬಾಂಗ್ಲಾದೇಶ, ಇಟಲಿ, ಜಪಾನ್, ದಕ್ಷಿಣ ಕೋರಿಯಾ, ಹಾಂಗ್ ಕಾಂಗ್, ಫಿಲಿಪ್ಪೀನ್ಸ್, ಸಿಂಗಪುರ್, ಟರ್ಕಿ, ಸಿರಿಯಾ ಮತ್ತು ಜೋರ್ಡಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುವ ತಂಡಗಳ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವರು. ಶ್ರೀನಿವಾಸ.ಜಿ.ಕಪ್ಪಣ್ಣನವರು ಪೂರ್ವ ಜರ್ಮನಿ ಮತ್ತು ಸಿಯೋಲ್‌ನಲ್ಲಿ ರಂಗಭೂಮಿ ಕುರಿತು ಪ್ರಬಂಧ ಮಂಡನೆ ಹಾಗೂ ಜನಪದ ಜಾತ್ರೆ ಎನ್ನುವ ವಿಷಯದ ಮೇಲೆ ಬ್ರಿಟನ್‌ನಲ್ಲಿ ಮತ್ತು ಅಮೇರಿಕಾದಲ್ಲಿ ಪ್ರಬಂಧಗಳನ್ನು ಮಂಡಿಸಿರುವರು. ಯುಎಸ್‌ನ ನ್ಯೂಜರ್ಸಿಯಲ್ಲಿ ೨೦೧೦ರಲ್ಲಿ ನಡೆದ ಅಕ್ಕ ಸಮ್ಮೇಳನದ ಸಾಂಸ್ಕೃತಿಕ ಸಂಘಟಕರಾಗಿ ಸಮ್ಮೇಳನವನ್ನು ಯಶಸ್ವಿಯಾಗಿಸಿದ್ದಾರೆ. ೨೦೧೦, ಡಿಸೆಂಬರ್ ೨೯ರಂದು ನಡೆದ ಸಿ.ಅಶ್ವತ್ಥ್ ನಮನ ಎಂಬ ಬೃಹತ್ ಕಾರ್ಯಕ್ರಮವದ ಸಂಘಟನೆ. ೨೦೧೧ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಂಘಟನೆ. === ಸಂದ ಬಿರುದು ಪ್ರಶಸ್ತಿಗಳು === ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ದೆಹಲಿ. ಭಾರತದ ರಾಷ್ಟ್ರಪತಿಗಳಿಂದ ಗೌರವ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದುಬೈನ ೨೦೦೮ರ ಶ್ರೀರಂಗ ಪ್ರತಿಷ್ಠಾನ ಪ್ರಶಸ್ತಿ. ಸಾಂಸ್ಕೃತಿಕ ರಾಯಭಾರಿ ಎಂಬ ಬಿರುದು ಮುಂಬಯಿ ಕರ್ನಾಟಕ ಸಂಘದಿಂದ. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ. ಕೆ.ವಿ.ಶಂಕರೇಗೌಡ ಪ್ರತಿಷ್ಟಾನ ಪ್ರಶಸ್ತಿ ಈಗ ಶ್ರೀನಿವಾಸ.ಜಿ.ಕಪ್ಪಣ್ಣನವರು ಪ್ರದರ್ಶನ ಕಲೆಗಳಿಗಾಗಿಯೇ ಮೀಸಲಾದ ಪ್ರಸಿದ್ಧ ಫೌಂಡೇಶನ್ನ ಕಲಾ ನಿರ್ದೇಶಕರಾಗಿ, ಸೃಜನಾತ್ಮಕ ನೃತ್ಯ ತಂಡವಾದ ಭ್ರಮರಿಯ ತಾಂತ್ರಿಕ ನಿರ್ದೇಶಕರಾಗಿ, UNESCOದ ಇಂಟರ‍್ನ್ಯಾಶನಲ್ ಥಿಯೇಟರ್ ಇನ್ಸ್ಟಿಟ್ಯೂಟ್‌ನಲ್ಲಿ ರಂಗಭೂಮಿ ಕೇಂದ್ರದ ಭಾರತ ಅಧ್ಯಯನ ವಿಭಾಗದ ಭಾರತೀಯ ನಾಟ್ಯ ಸಂಘದ ಜನರಲ್ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. == ಮಗಳು == ಹಿರಿಯ ರಂಗಕರ್ಮಿ, ಕಪ್ಪಣ್ಣನವರ ಮಗಳು ಸ್ನೇಹಾಕಪ್ಪಣ್ಣ (ಎಂ.ಎಸ್ಸಿ ಸೈಕಾಲೊಜಿ) ಪದವೀಧರೆ. ಅಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಆಕೆ ಒಬ್ಬ ನೃತ್ಯ ಕಲಾವಿದೆ. ತಂದೆಯವರಿಂದ ಪ್ರಭಾವಿತಳಾಗಿ, ರಂಗ ಭೂಮಿಯಲ್ಲಿ ಸಕ್ರಿಯಳಾಗಿ ಕೆಲಸಮಾಡುತ್ತಿದ್ದಾಳೆ. ಭ್ರಮರಿ ತಂಡ, ಕಥಾ ಕಾರ್ನರ್, ಸಿ.ಜಿ.ಕೆ. ತಂಡ ನಡೆಸುವ ರಂಗೋತ್ಸವದ 'ಕಥಾ ಪಡಸಾಲೆ'ಯಲ್ಲಿ ಕಾರ್ಯ ನಿರ್ವಹಣೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ---- ಯೂ ಟ್ಯೂಬ್ : 22, , 2012 ಶ್ರೀನಿವಾಸ ಜಿ.ಕಪ್ಪಣ್ಣ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ದೃಷ್ಯ, ಕನ್ನಡ ಭವನದಲ್ಲಿ ನಡೆಸಲಾದ ಕಾರ್ಯಕ್ರಮ == ಬಾಹ್ಯ ಸಂಪರ್ಕಗಳು == ಪ್ರೊ.ವೈ.ಆರ್.ಮೋಹನ್ ರವರ ನೆನಪುಗಳು-೧, ಕರ್ನಾಟಕ ಮಲ್ಲ, ಪು.೬, ೧೧-೦೨-೨೦೧೯,ಜೀವನ ಮತ್ತು ಸಾಹಿತ್ಯ, ಡಾ.ಜೀ.ವಿ.ಕುಲಕರ್ಣಿ