ಸಂಸಾರ ಎಂಬುದು ಒಂದು ಪಾಲಿ/ ಸಂಸ್ಕೃತ ಶಬ್ಧ. ಇದರ ಅರ್ಥ "ಜಗತ್ತು" ಎಂದು. ಹಿಂದೂ ಧರ್ಮ, ಬೌದ್ಧ ಧರ್ಮ, ಬೋನ್, ಜೈನ ಧರ್ಮ, ತಾವೋ ಧರ್ಮ, ಯಾರ್ಸಾನ್‍ನಲ್ಲಿ, ಸಂಸಾರವು ಜನನ, ಜೀವನ, ಮರಣ ಮತ್ತು ಮರುಹುಟ್ಟಿನ (ಪುನರ್ಜನ್ಮ) ಪುನರಾವರ್ತಿಸುವ ಚಕ್ರ. ಇದು ಬಹುತೇಕ ಎಲ್ಲಾ ಭಾರತೀಯ ಧರ್ಮಗಳ ಮೂಲಭೂತ ನಂಬಿಕೆ. . ಸಿಖ್ ಧರ್ಮದಲ್ಲಿ ಈ ಪರಿಕಲ್ಪನೆಯು ಸ್ವಲ್ಪ ವಿಭಿನ್ನವಾಗಿದೆ ಮತ್ತು ವರ್ತಮಾನದಲ್ಲಿನ ಒಬ್ಬರ ಕ್ರಿಯೆಗಳು ಮತ್ತು ಪರಿಣಾಮಗಳನ್ನು ನೋಡುತ್ತದೆ. ಈ ಏಷ್ಯಾದ ಧರ್ಮಗಳ ದೃಷ್ಟಿಕೋನದ ಪ್ರಕಾರ, ಒಬ್ಬ ವ್ಯಕ್ತಿಯ ಪ್ರಸಕ್ತ ಜೀವನವು ಅನೇಕವುಗಳಲ್ಲಿ ಕೇವಲ ಒಂದು-ಜನನದ ಮೊದಲು ಹಳೆಯ ಅಸ್ತಿತ್ವಗಳಿಗೆ ಮರಳುವ ಮತ್ತು ಮರಣದ ಆಚೆ ಭವಿಷ್ಯದ ಅವತಾರಗಳಲ್ಲಿ ಮುಂದೆ ತಲುಪುವ. ಸಂಸಾರದ ಪರಿಕಲ್ಪನೆಯು ವೇದಗಳ ನಂತರ ಸಾಹಿತ್ಯದಲ್ಲಿದೆ.ಈ ಸಿದ್ಧಾಂತವನ್ನು ವೇದಗಳಲ್ಲಿ ಚರ್ಚಿಸಲಾಗಿಲ್ಲ. ಇದು ಹೆಚ್ಚು ಪರಿಪಕ್ವವಾಗಿ ಮೊದಲ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ. ಸಂಸಾರದ ಪೂರ್ಣ ಪ್ರತಿಪಾದನೆ ಕ್ರಿ ಪೂ ಮೊದಲನೆಯ ಶತಮಾನದ ಹಿಂದೂ ತತ್ವಶಾಸ್ತ್ರ ಗ್ರಂಥಗಳಲ್ಲಿ ಅಂತೆಯೇ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳ ಪ್ರತಿಪಾದನೆಗಳಲ್ಲಿ ಕಂಡುಬರುತ್ತದೆ. ಸಂಸಾರ ಸಿದ್ಧಾಂತ ಹಿಂದೂಧರ್ಮದ ಕರ್ಮ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದೆ. ಸಂಸಾರದಿಂದ ಬಿಡುಗಡೆ ಹೊಂದುವ ದಾರಿಯ ಅನ್ವೇಷನೆ ಭಾರತೀಯ ಪರಂಪರೆಯ ಮೂಲದಲ್ಲೇ ಇದೆ.ಸಂಸಾರದಿಂದ ಬಿಡುಗಡೆ ಹೊಂದುವುದನ್ನು ಮೋಕ್ಷ,ನಿರ್ವಾಣ, ಮುಕ್ತಿ ಅಥವಾ ಕೈವಲ್ಯ ಎಂದು ಕರೆಯುತ್ತಾರೆ. === ಪರಿಭಾಷೆ === ಎಲ್ಲಾ ಭಾರತೀಯ ಧರ್ಮಗಳಲ್ಲಿನ ಮೂಲಭೂತ ಪರಿಕಲ್ಪನೆಯಾದ ಸಂಸಾರವು ಕರ್ಮ ಸಿದ್ಧಾಂತಕ್ಕೆ ಸಂಬಂಧಿಸಿದೆ.ಎಲ್ಲಾ ಜೀವಿಗಳು ಜನ್ಮ ಮತ್ತು ಪುನರ್ಜನ್ಮಗಳ ಚಕ್ರದ ಮೂಲಕ ಸಾಗುತ್ತವೆ ಎಂಬ ನಂಬಿಕೆ ಇವುಗಳಲ್ಲಿದೆ. ಸಂಸಾರ ಎಂಬ ಪದವು "ಸತತ ಅಸ್ತಿತ್ವದ ಚಕ್ರ", "ಪರಿವರ್ತನೆ","ಕರ್ಮಚಕ್ರ", "ಜೀವನ ಚಕ್ರ" ಮತ್ತು "ಎಲ್ಲಾ ಜೀವನ,ವಸ್ತು,ಅಸ್ತಿತ್ವದ ಆವರ್ತಕತೆ"ಎಂಬ ನುಡಿಗಟ್ಟುಗಳಿಗೆ ಸಂಬಂಧಿಸಿದೆ. ಮೊನಿಯರ್-ವಿಲಿಯಮ್ಸ್ ಪ್ರಕಾರ, ಸಂಸಾರವು ಸಂಸ್ (ಸಂಸ) ಎಂಬ ಪದದಲ್ಲಿ ಬೇರೂರಿದೆ, ಇದರರ್ಥ "ಸುತ್ತು ಹೋಡೆಯುವುದು, ಸುತ್ತುವುದು, ಸ್ಥಿತಿಯ ಅನುಕ್ರಮವಾಗಿ ಹಾದುಹೋಗುವುದು, ಕೊನೆಮುಟ್ಟಲು ಅಥವಾ ಪಡೆಯಲು ಪಥದಲ್ಲಿ ಚಲಿಸುವುದು". ಈ ಮೂಲದಿಂದ ಒಂದು ಪರಿಕಲ್ಪನಾ ರೂಪವು ನಮ್ಮ ಪ್ರಾಚೀನ ಗ್ರಂಥಗಳಲ್ಲಿ "ಸಂಸ್ಮರಣ" ಎಂಬ ಶಬ್ದದ ಮೂಲಕ ದೊರೆಯುತ್ತದೆ. ಸಂಸ್ಸ್ಮರಣ ಎಂದರೆ ವಿವಿಧ ಸ್ಥಿತಿಗಳಲ್ಲಿ ಅಂದರೆ ಜನನ, ಪುನರ್ಜನ್ಮದ ಮೂಲಕ ಸಾಗುವುದು ಅಥವಾ ಪ್ರಾಪಂಚಿಕ ಅಸ್ತಿತ್ವದ ಅನುಕ್ರಮ ಸ್ಥಿತಿಗಳ ಮೂಲಕ ಹಾದುಹೋಗುವುದು.ಈ ಪರಿಕಲ್ಪನೆಯು ಮೋಕ್ಷದ ಪರಿಕಲ್ಪನೆಗೆ ವಿರುದ್ಧವಾಗಿದೆ.ಮೋಕ್ಷವನ್ನು ಮುಕ್ತಿ,ನಿರ್ವಾಣ, ನಿಬ್ಬಾಣ ಅಥವಾ ಗುರಿಯಿಲ್ಲದ ಜನನ ಮರಣ ಪುನರ್ಜನ್ಮದ ಚಕ್ರದಿಂದ ವಿಮೋಚನೆಯನ್ನು ಸೂಚಿಸುತ್ತದೆ. ಸಂಸಾರದ ಪರಿಕಲ್ಪನೆ ವೇದೋತ್ತರ ಕಾಲದಲ್ಲಿಯೇ ಅಭಿವೃದ್ಧಿಗೊಂಡಿತಾದರೂ,ಅಲ್ಲಿ ಇದರ ಸ್ವಷ್ಟ ನಿರೂಪಣೆ ಇಲ್ಲ.ಆರಂಬಿಕ ಉಪನಿಷತ್ತುಗಳಲ್ಲಿ ಇದರ ಕಲ್ಪನೆ ಪೂರ್ಣವಾಗಿ ಬೆಳೆಯುತ್ತದೆ.ಸಂಸಾರ ಎಂಬ ಪದವು ಮೋಕ್ಷದ ಜೊತೆಗೆ ಹಲವಾರು ಪ್ರಧಾನ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಕಥಾ ಉಪನಿಷತ್ತಿನಲ್ಲಿ, ಶ್ವೇತಾಶ್ವರ ಉಪನಿಷದ್ ನ ೬.೧೬ ಶ್ಲೋಕದಲ್ಲಿ, ಮೈತ್ರಿ ಉಪನಿಷದ್ ನ ೧.೪ ಮತ್ತು ೬.೩೪ ಶ್ಲೋಕಗಳಲ್ಲಿ ಸಂಸಾರ ಶಬ್ದದ ಉಲ್ಲೇಖವಿದೆ. == ವ್ಯಾಖ್ಯಾನ ಮತ್ತು ತರ್ಕ == ಸಂಸಾರ ಪದದ ಸರಳ ಅರ್ಥ "ಗೊತ್ತು ಗುರಿಯಿಲ್ಲದೆ ಅಲೆದಾಡುವುದು" ಎಂದು ಸ್ಟೀಫನ್ ಜೆ ಲೌಮಾಕಿಸ್ ಹೇಳುತ್ತಾರೆ.ಸಂಸಾರದ ಪರಿಕಲ್ಪನೆಯು ಜೀವಿಯು ವಿವಿಧ ರೂಪ ಮತ್ತು ಕ್ಷೇತ್ರಗಳಲ್ಲಿ ಜನಿಸುವುದನ್ನು ಮತ್ತು ಪುನರ್ಜನ್ಮದಲ್ಲಿ ಪಯಣ ಮುಂದುವರಿಸುತ್ತದೆ ಎಂಬ ನಂಬಿಕೆಯೊಂದಿಗೆ ನಿಕಟ ಸಂಬಂಧ ಹೊಂದಿದೆ..ವೈದಿಕ ಸಾಹಿತ್ಯದ ಆರಂಬಿಕ ಪದರಗಳು ಜೀವನವನ್ನು ಪ್ರಸಕ್ತ ಜೀವನ ಮತ್ತು ಇಲ್ಲಿಯ ಜೀವನದ ಗುಣ ಅವಗುಣಗಳಿಗೆ ಅನುಗುಣವಾಗಿ ಪಡೆಯುವ ಸ್ವರ್ಗ ಅಥವಾ ನರಕದ ಜೀವನವನ್ನು ಸಂಯೋಜಿಸುತ್ತವೆ.ಇದನ್ನು ಹಲವು ಋಷಿ ಮುನಿಗಳು ತುಂಬಾ ಸರಳವಾದ ಕಲ್ಪನೆ ಎಂದು ಪ್ರಶ್ಣಿಸಿದರು. ಏಕೆಂದರೆ ಜೀವಿಯು ಸಮಾನವಾದ ನೈತಿಕ ಅಥವಾ ಅನೈತಿಕ ಜೀವನವನ್ನು ನಡೆಸುವುದಿಲ್ಲ, ಸಾಮಾನ್ಯವಾಗಿ ಸಧ್ಗುಣಶೀಲ ಜೀವನಗಳ ನಡುವೆ ಕೆಲವರು ಹೆಚ್ಚು ಸದ್ಗುಣಶೀಲರಾಗಿರುತ್ತಾರೆ ಅಂತೆಯೇ ದುರ್ಗುಣಗಳಲ್ಲಿಯೂ ಸಂಧರ್ಬಾನುಸಾರ ಉತ್ತಮಮಿಕೆಯೂ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಯಮ ಧರ್ಮನು ಅಸಮಾನ ರೀತಿಯಲ್ಲಿ ನಿರ್ಣಯಿಸುವುದು,ಪ್ರತಿಫಲ ನೀಡುವುದು ಅನ್ಯಾಯ ಎಂದು ಪ್ರತಿಪಾದಿಸುತ್ತಾರೆ.ಆದುದರಿಂದ ಅವರು ಒಬ್ಬರ ಅರ್ಹತೆಗೆ ಅನುಗುಣವಾಗಿ ಸ್ವರ್ಗ ಅಥವಾ ನರಕದ ಜೀವನ ಎಂಬ ಪರಿಕಲ್ಪನೆಯನ್ನು ಪರಿಚಯಿಸಿಸರು.ಸ್ವರ್ಗ ಅಥವಾ ನರಕದ ಜೀವನ ಮುಗಿದ ಬಳಿಕೆ ಜೀವಿಯು ಪುನರ್ಜನ್ಮ ಹೊಂದುತ್ತಾನೆ ಮತ್ತೆ ಸ್ವರ್ಗ ನರಕಗಳ ಜೀವನ ಹೊಂದುತ್ತಾನೆ. ಈ ರೀತಿಯಲ್ಲಿ ಅಂತ್ಯವಿಲ್ಲದ ಜನನ ಮರಣಗಳ ಚಕ್ರಗಳ ವಿವರವು ಸ್ವಲ್ಪ ಅರ್ವಾಚೀನ ಪಠ್ಯಗಳಾದ ಮಹಾಭಾರತ ಮತ್ತು ದೇವಿ ಭಾಗವತ ಪುರಾಣಗಳಲ್ಲಿ ಕಂಡುಬರುತ್ತದೆ. == ಇತಿಹಾಸ == ಸಂಸಾರದ ಪುನರಾವರ್ತಿತ ಪುನರ್ಜನ್ಮದ ಪರಿಕಲ್ಪನೆಯು ಕ್ರಿ.ಪೂ.ಮೊದಲ ಸಹಸ್ರಮಾನದ ಭಾರತ ಮತ್ತು ಪ್ರಾಚೀನ ಗ್ರೀಸ್ ಎರಡೂ ಪಠ್ಯಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಪುನರ್ಜನ್ಮದ ಕಲ್ಪನೆ ವೇದ ಕಾಲದಲ್ಲೇ ಇತ್ತಾದರೂ ನಂತರದ ಪಠ್ಯಗಳಾದ ಉಪನಿಷತ್ತುಗಳು, ಅರಣ್ಯಕಗಳು ಇವುಗಳಲ್ಲಿ ಹೆಚ್ಚು ಸ್ಪುಟವಾದ ವಿವರಣೆ ದೊರೆಯುತ್ತದೆ. ಆದರೂ ಇವುಗಳಲ್ಲಿಯೂ ಈ ಕಲ್ಪನೆಯು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ.ಈ ಪರಿಕಲ್ಪನೆಯು ಕ್ರಿ.ಪೂ.ಮೊದಲ ಶತಮಾನದ ಮದ್ಯಭಾಗದಲ್ಲಿ ಭೌದ್ಧ ಧರ್ಮ, ಜೈನ ಧರ್ಮ ಮತ್ತು ಹಿಂದೂ ತತ್ವಶಾಸ್ತ್ರದ ಹಲವು ಪರಂಪರೆಗಳಲ್ಲಿ ವಿಶಿಷ್ಟ ಗುಣಲಕ್ಷಣಗಳೊಂದಿಗೆ ವಿವರವಾದ ಸಿದ್ಧಾಂತಗಳು ಅರಳುತ್ತವೆ.ಸಂಸಾರದ ಇತಿಹಾಸ ಸಾಮಾನ್ಯವಾಗಿ ಜೀವಿಗಳ ಪುನರ್ಜನ್ಮದ ಬಗ್ಗೆ ವಿವರಿಸುತ್ತದೆಯಾದರೂ, ಅದರ ಐತಿಹಾಸಿಕ ಬೆಳವಣಿಗೆ ಮಾನವ ಅಸ್ತಿತ್ವದ ನಿಜವಾದ ಸ್ವರೂಪ ಮತ್ತು ಜೀವಿ ಒಮ್ಮೆ ಮಾತ್ರ ಸಾಯುತ್ತದೆಯೇ ಎಂಬ ಪ್ರಶ್ನೆಗಳೊಂದಿಗೆ ಪ್ರಾರಂಭವಾಯಿತು.ಇದು "ಪುನರ್ಮೃತ್ಯು" ಮತ್ತು "ಪುನರವೃತ್ತಿ" ಪರಿಕಲ್ಪನೆಗಳಿಗೆ ಮೊದಲು ಕಾರಣವಾಯಿತು. = ಪುನಮೃತ್ಯು : ಪುನರ್ಮರಣ = ಸಂಸಾರವನ್ನು ಜೀವಿಗಳ ಜನನ ಮತ್ತು ಪುನರ್ಮರಣದ ಚಕ್ರ ಎಂದು ವಿವರಿಸಿದರೂ ಅದರ ಇತಿಹಾಸವು ಈ ಕಲ್ಪನೆಯ ಕಾಲಾನುಕ್ರಮದ ಬೆಳವಣಿಗೆಯು ಮಾನವನ ಅಸ್ತಿತ್ವದ ನಿಜವಾದ ಸ್ವರೂಪ ಹಾಗೂ ಜೀವಿಯು ಒಮ್ಮೆ ಮಾತ್ರ ಸಾಯುತ್ತದೆಯೇ ಎಂಬ ಪ್ರಶ್ನೆಯೊಂದಿಗೆ ಪ್ರಾರಂಭವಾಯಿತು.ಇದು ಪುನರವೃತ್ತಿ ಮತ್ತು ಪುನಮ್ರ್ಯುತ್ಯು ಎಂಬ ಪರಿಕಲ್ಪನೆಗಳಿಗೆ ಕಾರಣವಾಯಿತು. ಈ ಆರಂಬಿಕ ಸಿದ್ಧಾಂತಗಳು ಮಾನವ ಅಸ್ತಿತ್ವದ ಸ್ವರೂಪವು ಎರಡು ನೈಜತೆಗಳನ್ನು ಒಳಗೊಂಡಿರುತ್ತದೆ ಎಂದು ಪ್ರತಿಪಾದಿಸಿತು. ಒಂದು ಬದಲಾಗದ ಆತ್ಮ, ಇದು ಅಂತಿಮ ಸತ್ಯ ಹಾಗೂ ಅನಂದವಾದ ಬ್ರಹ್ಮದೊಂದಿಗೆ ಸಂಬಂಧ ಹೊಂದಿದೆ, ಇನ್ನೊಂದು ಮಾಯಾ ಜಗತ್ತಿನಲ್ಲಿ ಯಾವಾಗಲೂ ಬದಲಾಗುತ್ತಿರುವ ದೇಹ. ಇದು ನಶ್ವರವಾಗಿದೆ.ಸಂಸಾರದ ಈ ಪರಿಕಲ್ಪನೆಯು ಅಸ್ತಿತ್ವದ ಸ್ವರೂಪದ ಮೂಲಭೂತ ಸಿದ್ಧಾಂತವಾಗಿ ಅಭಿವೃದ್ಧಿಹೊಂದಿತು. ಇದನ್ನು ಎಲ್ಲಾ ಭಾರತೀಯ ಧರ್ಮಗಳು ಹಂಚಿಕೊಂಡಿವೆ. ಜಾನ್ ಬೌಕರ್ ಹೇಳುವಂತೆ ಮನುಷ್ಯನಾಗಿ ಜನ್ಮ ಪಡೆಯುವುದು ಈ ಪುನರ್ಜನ್ಮ -ಪುನರ್ ಮೃತ್ಯುವಿನ ಚಕ್ರವನ್ನು ಬೇಧಿಸಿ ಮೋಕ್ಷ ಅಥವಾ ಬ್ರಹ್ಮತ್ವವನ್ನು ಹೊಂದಲು ಪಡೆದ ಅಪೂರ್ವ ಅವಕಾಶ ಎಂದು ಪ್ರಸ್ತುತ ಪಡಿಸಲಾಯಿತು.ಹೀಗೆ ಮೋಕ್ಷವನ್ನು(ಬಿಡುಗಡೆ) ಪಡೆಯಲು ಪ್ರತಿಯೊಂದು ಭಾರತೀಯ ಆಧ್ಯಾತ್ಮಿಕ ಸಂಪ್ರದಾಯವು ತನ್ನದೇ ಆದ ಊಹೆ ಮತ್ತು ಮಾರ್ಗಗಳನ್ನು (ಮಾರ್ಗ ಅಥವಾ ಯೋಗ) ಪ್ರತಿಪಾದಿಸಿದರು.ಕೆಲವರು ಯೋಗವನ್ನು ಜೀವನ್ಮುಕ್ತಿಗೆ ಪ್ರತಿಪಾದಿಸಿದರೆ ಇನ್ನು ಕೆಲವರು ವಿದೇಹಮುಕ್ತಿ(ಸಂಸಾರದಿಂದ ಮುಕ್ತಿ ಹಾಗೂ ಸ್ವಾತಂತ್ರ್ಯ)ಯಲ್ಲಿ ತೃಪ್ತಿ ಹೊಂದಿದರು. ಬೌದ್ಧ ಮತ್ತು ಜೈನ ಧರ್ಮದ ಶ್ರಮಣ ಸಂಪ್ರದಾಯಗಳು ಕ್ರಿ.ಪೂ.ಅರನೇ ಶತಮಾನದಿಂದ ಪ್ರಾರಂಭವಾಗಿ ಹಲವಾರು ಹೊಸ ವಿಷಯಗಳನ್ನು ಸೇರಿಸಿದವು.ಅವರು ಪುನರ್ಜನ್ಮ, ಪುನರ್ ಮೃತ್ಯು,ಮಾನವ ನೋವನ್ನು ಕೇಂದ್ರದಲ್ಲಿ ಹಾಗೂ ಧಾರ್ಮಿಕ ಜೀವನದ ಪ್ರಾರಂಭದಲ್ಲಿ ಇರಿಸಿ ಮಾನವ ನೋವನ್ನು ವಿಸ್ತಾರವಾದ ಸನ್ನಿವೇಶದಲ್ಲಿ ಒತ್ತಿ ಹೇಳಿದರು .ಶ್ರಮಣರು ಸಂಸಾರವನ್ನು ಪ್ರತಿ ಜನನ ಮತ್ತು ಮರಣವನ್ನು ಆ ಪ್ರಕ್ರಿಯೆಯಲ್ಲಿ ವಿರಾಮಚಿಹ್ನೆಗಳಾಗಿ ಹೊಂದಿರುವ ಆರಂಭರಹಿತ ಆವರ್ತಕ ಪ್ರಕ್ರಿಯೆಯಾಗಿ ನೋಡಿದರು , ಮತ್ತು ಆಧ್ಯಾತ್ಮಿಕ ವಿಮೋಚನೆಯು ಪುನರ್ಜನ್ಮ ಮತ್ತು ಮರಣದಿಂದ ಸ್ವಾತಂತ್ರ್ಯವೆಂದು ಪರಿಗಣಿಸಿದರು.ಈ ಧರ್ಮಗಳಲ್ಲಿ ಸಂಸಾರಿಕ ಪುನರ್ಜನ್ಮ ಮತ್ತು ಮರುಹುಟ್ಟಿನ ವಿಚಾರಗಳನ್ನು ವಿವಿಧ ಪದಗಳೊಂದಿಗೆ ಚರ್ಚಿಸಲಾಗಿದೆ, ಉದಾಹರಣೆಗೆ ಬೌದ್ಧಧರ್ಮದ ಅನೇಕ ಆರಂಭಿಕ ಪಾಲಿ ಸುತ್ತಾಗಳಲ್ಲಿ ಅಗತಿಗತಿ ಎಂಬ ಶಬ್ದ ಬಳಕೆಯಲ್ಲಿದೆ . == ಉಲ್ಲೇಖಗಳು ==