ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ಊರು ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ.ಮೀ ಮತ್ತು ಶಿರಸಿ ನಗರದಿಂದ ಸುಮಾರು ೭೨.೨ ಕಿ.ಮೀ ದೂರದಲ್ಲಿರುವ ಸಾಗರ ನಗರ ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ಮತ್ತು ಹವ್ಯಕ ಬ್ರಾಹ್ಮಣರ ತವರಾಗಿದೆ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ. ಇಲ್ಲಿನ ಜನರು ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಹಾಗೂ ಗೌರಿ-ಗಣೇಶ ಚತುರ್ಥಿಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಸಾಗರವನ್ನು ಮಲೆನಾಡಿನ ರಾಜಧಾನಿ ಅಂತಲೂ ಕರೆಯಲಾಗುತ್ತದೆ ಇಕ್ಕೇರಿ ದೇವಸ್ಥಾನ ಸಂಪೂರ್ಣ ಜಗತ್ತು ಭಾರತದಲ್ಲಿ ಹಾಗೂ ಇಡೀ ಭಾರತ ಕರ್ನಾಟಕದಲ್ಲಿ ಇರುವಂತೆಯೇ ಪ್ರವಾಸಿಗರ ಸ್ವರ್ಗವೇ ಆದ ಸಾಗರದಲ್ಲಿ ಸಂಪೂರ್ಣ ಕರ್ನಾಟಕವನ್ನು ಕಾಣಬಹುದು. ಇಲ್ಲಿನ ಜನರು ಹಿಂದುತ್ವವನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಕ್ಷಾತ್ರ ಭಾವದವರು. == ಇತಿಹಾಸ == ಸಾಗರ ಊರಿಗೆ ನಾಲ್ಕುನೂರು ವರ್ಷಗಳ ಇತಿಹಾಸವಿದೆಯೆಂದು ತಿಳಿದು ಬಂದಿದೆ. ಕೆಳದಿ ವಂಶಸ್ಥರ ಕಾಲದಿಂದಲೂ ಈ ನಗರ ಇದ್ದಿತು. ಸಾಗರದ ಸಮೀಪವಿರುವ ಕೆರೆ ಅಂದು ಅತ್ಯಂತ ವಿಶಾಲವಾಗಿ ಇದ್ದು, ಅದು ಸಾಗರದಂತೆ (ಸಮುದ್ರದಂತೆ ) ಕಾಣಿಸುತ್ತಿತ್ತಂತೆ. ಆ ಕೆರೆಗೆ "ಸದಾಶಿವ ಸಾಗರ" ಎಂಬ ಹೆಸರು ಇತ್ತು. ನಂತರ ಸದಾಶಿವ ಹೊರಟು ಹೋಗಿ ಸಾಗರ ಮಾತ್ರ ಉಳಿದು ಅದುವೇ ಈ ನಗರದ ಹೆಸರಾಯಿತು ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಸಾಗರದ ಜನಸಂಖ್ಯೆ ಹೆಚ್ಚಾದ ಕಾರಣ ಇದನ್ನು ನಗರಸಭೆಯನ್ನಾಗಿ ಘೋಷಿಸಿದ್ದಾರೆ. ಸಾಗರದಲ್ಲಿ ಕೆಳದಿಯ ಅರಸರು ಕಟ್ಟಿಸಿದ ಗಣಪತಿ ದೇವಸ್ಥಾನವನ್ನು ಕಾಣಬಹುದಾಗಿದೆ ಮತ್ತು ಸಾಗರದ ಸಮೀಪದಲ್ಲಿನ ಇಕ್ಕೆರಿಯ ಅಘೋರೇಶ್ವರ ದೇವಾಲಯವು ಕೆಳದಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ. ರಣದುಲ್ಲಾಖಾನನ ಅಕ್ರಮಣದಲ್ಲಿ ಗಣಪತಿ ದೇವಸ್ಥಾನ ಮತ್ತು ಅಘೋರೇಶ್ವರ ದೇವಸ್ಥಾನಗಳು ಹಾನಿಗೊಳಗದವು ಎಂದು ಸಾಗರದ ಇತಿಹಾಸ ಹೇಳುತ್ತದೆ. ಕಾಳುಮೆಣಸಿನ ರಾಣಿ ಎಂದೇ ಹೆಸರಾಗಿರುವ ರಾಣಿ ಚೆನ್ನಭೈರಾದೇವಿಯು ಸಾಗರ ತಾಲೂಕಿನ(ಕರೂರು)ತುಮರಿ,ಕುದರೂರು, ಕಾರಣಿ,( ಭಾರಂಗಿ)ಅರಳಗೊಡು, ಜೋಗ, ಭಾನ್ಕುಳಿ,ಆವಿನಹಳ್ಳಿ ಭಾಗಗಳಲ್ಲಿ ಆಡಳಿತ ನೆಡೆಸಿದ್ದಳು. ನಂತರ ಈ ಪ್ರದೇಶಗಳು ಕೆಳದಿ ಅರಸರ ಕೈವಶವಾಯಿತು. == ಪ್ರೇಕ್ಷಣೀಯ ಸ್ಥಳಗಳು == === ಜೋಗ === ಭಾರತದಲ್ಲೇ ಅತ್ಯಂತ ಎತ್ತರವಾದ ಮತ್ತು ಜಗತ್ತಿನಲ್ಲಿ ೨ನೆಯ ಸ್ಥಾನದಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಸಾಗರದಿಂದ ೨೯ ಕಿ.ಮೀ ಅಂತರದಲ್ಲಿದೆ. ಶರಾವತಿ ನದಿಯು ರಾಜ, ರೋರರ್, ರಾಕೆಟ್ ಮತ್ತು ರಾಣಿ ಹೀಗೆ ನಾಲ್ಕು ಭಾಗವಾಗಿ ೨೭೩ ಮೀ ಎತ್ತರದಿಂದ ಧುಮುಕುವ ಜೋಗ ಜಲಪಾತಕ್ಕೆ ಸಾಗರದಿಂದ ಪ್ರತೀ ೫ ನಿಮಿಷಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಇದೆ. === ಇಕ್ಕೇರಿ === ಹೊಯ್ಸಳ ಶೈಲಿಯ ಸುಂದರವಾದ ಕೆತ್ತನೆಗಳಿರುವ ಕೆಳದಿ ಸಂಸ್ಥಾನಕ್ಕೆ ಸೇರಿದ ದೇವಸ್ಥಾನವಿರುವ ಇಕ್ಕೇರಿ ಸಾಗರ ಪೇಟೆಯಿಂದ ೪ ಕಿ.ಮೀ. ದೂರದಲ್ಲಿದೆ. ಬಸ್ಸು, ಟ್ಯಾಕ್ಸಿ ಅಥವ ಆಟೋಗಳಿಂದ ಸುಲಭವಾಗಿ ಇಕ್ಕೇರಿಯನ್ನು ತಲುಪಬಹುದು. === ಕೆಳದಿ === ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ ೮ ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು. === ಹೊನ್ನೇಮರಡು === ಹೊನ್ನೇಮರಡು ಶರಾವತಿ ಹಿನ್ನೀರಿನಿಂದ ಆವೃತವಾದ, ಸುಂದರವಾದ ಪ್ರದೇಶ. ಜೋಗಕ್ಕೆ ಹೋಗುವ ದಾರಿಯಲ್ಲಿ ಸಾಗರದಿಂದ ೨೫ ಕಿ.ಮೀ ಗಳ ದೂರದಲ್ಲಿರುವ ಹೊನ್ನೇಮರಡು ನೀರಿನ ಸಾಹಸಕ್ರೀಡೆಗಳಿಗೆ ಪ್ರಶಸ್ತವಾದ ಸ್ಥಳ. === ಮಾರಿಕಾಂಬಾ ದೇವಸ್ಥಾನ ಮತ್ತು ಜಾತ್ರೆ === ಸಾಗರ ಪೇಟೆಯ ಮಧ್ಯದಲ್ಲಿರುವ ಮಾರಿಕಾಂಬ ದೇವಸ್ಥಾನ ಸಾಗರದ ಜನಜೀವನ ಮತ್ತು ಇತಿಹಾಸದ ಜೊತೆಗೆ ಬಹುವಾಗಿ ಬೆಸೆದುಕೊಂಡಿದೆ. ೩ ವರ್ಷಗಳಿಗೊಮ್ಮೆ ನಡೆಯುವ ಸಾಗರ ಮಾರಿಕಾಂಬ ಜಾತ್ರೆ ರಾಜ್ಯದಾದ್ಯಂತ ಜನರನ್ನು ಸಾಗರದೆಡೆಗೆ ಆಕರ್ಷಿಸುತ್ತದೆ. === ವರದಹಳ್ಳಿ === ಶ್ರೀಧರ ಸ್ವಾಮಿಗಳ ಸಮಾಧಿ ಮತ್ತು ಆಶ್ರಮವಿರುವ ಯಾತ್ರಾಸ್ಥಳವಾದ ವರದಹಳ್ಳಿ ಸಾಗರದಿಂದ ೭ ಕಿ.ಮೀ ದೂರದಲ್ಲಿದೆ. ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿರುವ ವರದಹಳ್ಳಿ ನಿಸರ್ಗದ ಮಧ್ಯೆ ಪ್ರಶಾಂತವಾಗಿ ನೆಲೆಸಿರುವ, ಆಧ್ಯಾತ್ಮಿಕ ಚಿಂತನೆಗೆ ಪ್ರಶಸ್ಥವಾದ ಸ್ಥಳ. === ವರದಹಳ್ಳಿಯ ಶ್ರೀ ದುರ್ಗಾಂಬಾ === ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವರದಹಳ್ಳಿ (ಆಡು ಭಾಷೆಯಲ್ಲಿ ವದ್ದಳ್ಳಿ). ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ. ಈ ಸ್ಥಳಕ್ಕೆ ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ. === ಹಾಲ್ಕೆರೆ ಬಟ್ಟೇ ವಿನಾಯಕ ದೇವಸ್ಥಾನ === ಸಾಗರದಿಂದ ೪೨ ಕಿ. ಮಿ. ಮತ್ತು ತುಮರಿಯಿಂದ ೨.೫ ಕಿ. ಮಿ. ದೂರದಲ್ಲಿದೆ. ಶರಾವತಿ ಹಿನ್ನೀರಿನಲ್ಲಿರುವ ಈ ದೇವಸ್ಥಾನಕ್ಕೆ ಲಾಂಚಿನ ಮೂಲಕ ಬರಬೇಕಿದೆ. === ಸಿಗಂದೂರು === ಚೌಡಮ್ಮ ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ. ಸಾಗರದಿಂದ ೩೨ ಕಿ.ಮಿ. ದೂರದಲ್ಲಿದೆ. ಇಲ್ಲಿಗೆ ಹೋಗಲು ಶರಾವತಿ ಹಿನ್ನೀರನ್ನು (ಲಿಂಗನಮಕ್ಕಿ ಜಲಾಶಯ)ತುಮರಿ ಲಾಂಚ್ ಮುಖಾಂತರ ದಾಟಿ ಹೋಗಬೇಕು. === ನಾಡಕಲಸಿ === ಸಾಗರದಿಂದ ೧೦ ಕಿ.ಮೀ ದೂರದಲ್ಲಿದೆ.ಈ ದೇವಸ್ಥಾನದ ಮೂಲ ದೇವರು ಶಿವನಾಗಿದ್ದು,ಪೂರ್ಣ ಕಲ್ಲಿನಿಂದ ನಿರ್ಮಿತವಾಗಿದೆ. === ಹೊಸಗುಂದ === ಸಾಗರದಿಂದ ೧೬ ಕಿ.ಮೀ ದೂರದಲ್ಲಿದೆ. ೧೦ನೇ ಶತಮಾನದಲ್ಲಿ ಸಂತರಸರಿಂದ ನಿರ್ಮಾಣಗೊಂಡ ಉಮಾಮಹೇಶ್ವರ ದೇಗುಲ ಇಲ್ಲಿನ ಆಕರ್ಷಣೆ. === ವರದಾಮೂಲ === ವರದಾ ನದಿಯ ಉಗಮ ಸ್ಥಳ. ಇಲ್ಲಿ ವರದಾಂಬ ದೇವಿಯ ದೇವಸ್ಥಾನವೂ ಇದೆ. ಅಗ್ನಿ, ವರದಾ ಮತ್ತು ಲಕ್ಷ್ಮಿಯೆಂಬ ೩ ನದಿಗಳನ್ನು ಒಳಗೊಂಡಿದೆ. ಪ್ರತೀ ವರ್ಷದ ಎಳ್ಳುಅಮವಾಸ್ಯೆಯಂದು ಜಾತ್ರೆ ನೆಡೆಯುತ್ತದೆ. === ಲಿಂಗನಮಕ್ಕಿ ಜಲಾಶಯ === ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು. ಸಮುದ್ರ ಮಟ್ಟದಿಂದ ೧೮೧೯ ಅಡಿ ಏತ್ತರದಲ್ಲಿದೆ. ಆಣೆಕ‌ಟ್ಟಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ಇದು ಜೋಗದಿಂದ ಕೇವಲ ೬ ಕಿ.ಮೀ. ದೂರದಲ್ಲಿದೆ. === ಬಿಲಗುಂಜಿ ಕಮಲೇಶ್ವರ === ಬಿಲಗುಂಜಿ ಕಮಲೇಶ್ವರ ದೇಗುಲದಲ್ಲಿ ಪರಶಿವ ಗಂಗೆಯ ಶಿರದ ಮೇಲೆ ನೆಲೆಸಿದ್ದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಕೀರ್ತಿಗಳಿಸಿದ್ದಾನೆ. ಇಲ್ಲಿ ಶಿವನ ಪದತಳದಲ್ಲಿ ಗಂಗೆ ತೀರ್ಥರೂಪದಲ್ಲಿ ನೆಲೆಸಿದ್ದು ಸದಾ ಹರಿಯುತ್ತಿರುತ್ತಾಳೆ. === ಶ್ರೀ ಕ್ಷೇತ್ರ ವಡನ್ ಬೈಲ್ === ವಿಶ್ವವಿಖ್ಯಾತ ಜೋಗಕ್ಕೆ ಸಮೀಪದಲ್ಲಿ ಬರುವ ಶ್ರೀ ಕ್ಷೇತ್ರ ವಡನ್ ಬೈಲ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ವಿಶೇಷವಾಗಿ ಇಲ್ಲಿರುವ ಮಹಾಮಾತೆ ಪದ್ಮಾವತಿ ಹಾಗೂ ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯು ವಿಶೇಷ ಆಕರ್ಷಕವಾಗಿದೆ ಇಲ್ಲಿಗೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಿದೆ ಕ್ಷೇತ್ರದ ಧರ್ಮದರ್ಶಿಗಳಾದ ಹೆಚ್.ಎಂ.ವೀರರಾಜಯ್ಯನವರ ಪರಿಶ್ರಮ ಸಾಕಷ್ಟಿದೆ == ಸಾಹಿತ್ಯ, ಕಲೆ, ಸಂಸ್ಕೃತಿ == ಬಹಳ ಜನ ಕಲಾವಿದರನ್ನು, ಸಾಹಿತಿಗಳನ್ನು ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದಿಂದ ೭ ಕಿ.ಮೀ ದೂರದಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ತನ್ನ ತಿರುಗಾಟಗಳಿಂದಾಗಿ ಬಹು ಪ್ರಸಿದ್ಧ. ವಿವರಗಳಿಗಾಗಿ - ನೀನಾಸಂ. ಖ್ಯಾತ ಸಾಹಿತಿ ನಾ. ಡಿಸೋಜ ಇದೇ ಊರಿನವರು. ಯಕ್ಷಗಾನ ಸಾಗರ ತಾಲೂಕಿನಲ್ಲಿ ಬಹಳ ಪ್ರಸಿದ್ಧವಾದ ಕಲಾಪ್ರಕಾರ. ಬೇಸಿಗೆಯ ಕಾಲದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಯಕ್ಷಗಾನ ಮೇಳದ ಪ್ರದರ್ಶನ ಏರ್ಪಾಡಾಗಿರುವುದನ್ನು ಕಾಣಬಹುದು. ದೀಪಾವಳಿಯ ಸಮಯದಲ್ಲಿ ಗ್ರಾಮದವರು ರಾತ್ರಿ ಒಂದು ದೀಪವನ್ನು ಉರಿಸಿಕೊಂಡು ಮನೆ ಮನೆಗೆ ಹಾಡು ಹೇಳುತ್ತಾ ಬರುವ ಸಂಪ್ರದಾಯ ಕೂಡಾ ಇಲ್ಲಿದೆ. ಇದನ್ನು ಹಬ್ಬಾಡುವ ಪದ, ಅಂಟಿಗೆಪಿಂಟಿಗೆ ಎಂದು ಕರೆಯುತ್ತಾರೆ. ದೀವರ ಮದುವೆ ಹಾಡುಗಳು, ಹಬ್ಬದ ಹಾಡುಗಳು ಹಾಗು ಹಸೆ ಚಿತ್ರ ಕಲೆ ಇಲ್ಲಿ ಬಹಳ ಪ್ರಾಮುಖ್ಯತೆ ಪಡೆದಿವೆ. ಮಂಡಗಳಲೆ; ಇದು ಸಾಗರದಿಂದ ೧೬ ಕಿ ಮಿ ದೂರದಲ್ಲಿ ಇದೆ. ಮಳೆಗಾಲದ ನೆರೆಗೆ ಪ್ರಸಿದ್ಧಿ, ದೀವರ ಹಾಡುಗಾರರು, ಹಸೆ ಚಿತ್ರಗಾರರು ಇಲ್ಲಿ ಇರುವರು. == ಸಾಹಿತ್ಯ-ಕಲೆ ಸೇವಾ ಸಂಸ್ಥೆಗಳು == ಕನ್ನಡ ಸಾಹಿತ್ಯ ಪರಿಷತ್ತು, ಒಡನಾಟ, ಸಂಗೀತ ಸಾಗರ, ಮಲೆನಾಡು ಗಮಕ ಕಲಾಸಂಘ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ(ರಿ.)ಸಾಗರ ಈ ಎರಡು ಸಂಸ್ಥೆಗಳು ಪ್ರತಿ ತಿಂಗಳಿಗೊಂದು ಹಾಗೂ ವಿಶೇಷ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಸಹೃದಯ ಬಳಗ (ರಿ.) ಸಾಗರ ಸಂಸ್ಕೃತಸಾಗರ, ಶಿವಪ್ಪನಾಯಕ ನಗರ ಯುವಕ ಸಂಘ; ವಿನೋಬಾನಗರ ಯುವಕ ಸಂಘ ಮೊದಲಾದವು ಕಲೆ ಮತ್ತು ಸಾಹಿತ್ಯ ಸೇವೆಮಾಡುತ್ತಿವೆ. ಮಲೆನಾಡು ಗಮಕ ಕಲಾಸಂಘವು ಗಮಕ ಕಲೆಯ ಮೂಲಕ ಸತತ ೩೦ ವರ್ಷಗಳಿಂದ ಪ್ರಾಚೀನ ಕಾವ್ಯಗಳ ಪ್ರಸಾರ ಮಾಡುತ್ತಿದೆ. ಈಗ ಪ್ರತಿ ತಿಂಗಳೂ ಕಾರ್ಯಕ್ರಮ ನಡೆಸುತ್ತಿದೆ.ಅದಕ್ಕೆ ಶ್ರೀ ಕೆ.ಆರ್. ಕೃಷ್ಣಯ್ಯನವರು ಕಾರ್ಯಾಧ್ಯಕ್ಷರಾಗಿದ್ದು ಹೊಸಬಾಳೆ ಸೀತಾರಾಮ ರಾವ್ ಗೌರಾವಾಧ್ಯಕ್ಷರಾಗಿದ್ದಾರೆ. ಶ್ರೀ ಬಿ.ಎಸ್.ಚಂದ್ರಶೇಖರ-ಸಾಗರ ಇವರು ಕೋಶಾಧ್ಯಕ್ಷರಾಗಿದ್ದಾರೆ , ಶ್ರೀ ಕೆ.ರವೀಂದ್ರ ಮತ್ತು ಮನೆಘಟ್ಟದ ಶ್ರೀ ಎಂ.ಎಸ್.ನಾಗರಾಜ ಇವರು ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.(ಶ್ರೀಎಂ.ಎಸ್.ನಾಗರಾಜ ಉತ್ತಮ ಗಮಕಿ-೬೭ವರ್ಷ-ದಿ.೧೨-೧೦-೨೦೧ ೪ದೈವಾಧೀನ). == ಜನ, ಮನ, ಭಾಷೆ == ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಅಡಿಕೆ ಸಾಗರದ ಪ್ರಮುಖ ಬೆಳೆ. ಭತ್ತ, ಕಬ್ಬು, ವೆನಿಲ್ಲಾ, ರಬ್ಬರ್ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಮುಖ್ಯ ವ್ಯವಹಾರಿಕ ಭಾಷೆ ಕನ್ನಡ. ಹವ್ಯಕರು, ದೀವರು ಜನಾಂಗ ಇಲ್ಲಿ ಪ್ರಮುಖವಾದ ಪಂಗಡ. ಬಹಳ ಹವ್ಯಕ ಬ್ರಾಹ್ಮಣರು ಸಾಗರದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿ ಕನ್ನಡದ ಉಪಭಾಷೆ ಹವ್ಯಕ ಕನ್ನಡ ಇಲ್ಲಿನ ಪ್ರಮುಖ ಭಾಷೆಯಾಗಿದೆ. == ಪರಿಸರ == ಸಾಗರವು ಗುಡ್ಡ, ಕಾಡು, ಮೇಡುಗಳಿಂದ ಕೂಡಿದ ಪ್ರದೇಶ. ಸಾಗರದ ಬಹುಭಾಗ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಆವೃತವಾಗಿದೆ ಎನ್ನಬಹುದು. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಜೊತೆಗೆ ಭತ್ತ, ತೆಂಗು, ಬಾಳೆ ಮುಂತಾದ ಬೆಳೆಗಳನ್ನೂ ಬೆಳೆಯುತ್ತಾ ರೆ. ಈ ತಾಲ್ಲೂಕು ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವುದರಿಂದ ಯಥೇಚ್ಚ ಕಾಡನ್ನೂ ಸಹ ಹೊಂದಿದೆ. ಈ ಕಾಡಿನಲ್ಲಿ ಕಾಳಿಂಗ ಸರ್ಪ, ಹುಲಿ, ಕಾಡೆಮ್ಮೆ,, ಜಿಂಕೆ, ಕಾಡು ಕುರಿ, ಉಡ, ಕಾಡು ಹಂದಿ, ಕಡವೆ, ನವಿಲು, ಕೆಂದಳಿಲು ಮುಂತಾದ ವಿಶೇಷ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ. == ತಲುಪುವುದು ಹೇಗೆ == ಬೆಂಗಳೂರು ನಗರದಿಂದ ನೇರವಾಗಿ ಬಸ್ಸು ಮತ್ತು ರೈಲಿನ ಸಂಪರ್ಕವಿದೆ. ರಾ.ಹೆ.೨೦೬ರಲ್ಲಿ ಚಲಿಸುವ ಖಾಸಗಿ ಮತ್ತು ಸರ್ಕಾರಿ ಹವಾನಿಯಂತ್ರಿತ ಬಸ್ಸುಗಳಲ್ಲಿ ೮ ಗಂಟೆಗಳ ಅವಧಿಯಲ್ಲಿ ಸಾಗರ ತಲುಪಬಹುದು. ಇದಲ್ಲದೆ ರಾಜ್ಯದ ಇತರ ಪ್ರಮುಖ ಪಟ್ಟಣಗಳು ಮತ್ತು ತಿರುಪತಿ,ಚೆನ್ನೈ,ಮುಂಬಯಿ ಮುಂತಾದ ಪಟ್ಟಣಗಳೊಂದಿಗೆ ನೇರವಾದ ಬಸ್ಸಿನ ಸಂಪರ್ಕವಿದೆ. == ರಾಜಕೀಯ == ಸಾಗರ ಕ್ಷೇತ್ರದ-ಕರ್ನಾಟಕ ವಿಧಾನ ಸಭಾ ಸದಸ್ಯರು == ೨೦೧೩ ರ ಮೇ ೫ ನೇ ತಾರೀಕು ನಡೆದ ಚುನಾವಣೆ ಮತ್ತು ಫಲಿತಾಂಶ == ಸಾಗರ ವಿಧಾನಸಭೆ ಚುನಾವಣೆ ೨೦೧೩ ಕಾಗೋಡು ತಿಮ್ಮಪ್ಪ -ಲೀಡು-ಮತ್ತು ಪಡೆದ ಓಟು- () ೪೧೨೪೮ ; ಕಾಂಗ್ರಸ್-೭೧,೯೬೦; (೦.೫೩% ಚಲಾವಣೆ ಓಟಿನಲ್ಲಿ ;೪೦% ಒಟ್ಟು ಓಟಿನಲ್ಲಿ) ಬಿ.ಆರ್. ಜಯಂತ್ ( ):ಕೆಜೆಪಿ (ಕರ್ನಾಟಕ ಜನತಾಪಾರ್ಟಿ)೩೦೭೧೨ (:೨೩% ಚಲಾವಣೆ ಓಟಿನಲ್ಲಿ) ಬೇಳೂರು ಗೋಪಾಲ ಕೃಷ್ಣ ಜೆಡಿಎಸ್() ೨೩೨೩೧ (:೧೭% ಚಲಾವಣೆ ಓಟಿನಲ್ಲಿ) ಶರಾವತಿ ಪಿ.ರಾವ್ ಬಿಜೆಪಿ() ೫೩೫೫ (೪%) ಪಿಆರ್ . ಕೃಷ್ಣಪ್ಪ ಲೋಕ ಸತ್ತಾ ಪಾರ್ಟಿ, ೨೩೦೨ (೨.%ಚಲಾವಣೆ ಓಟಿನಲ್ಲಿ) ಕೆ.ಎನ್ ವೆಂಕಟೇಶ್ ಬಿಎಸ್.ಪಿ. ೫೪೯(:೦.೦೩೯೯೩೪%ಚಲಾವಣೆ ಓಟಿನಲ್ಲಿ ) ಗಣೇಶ್ ಬಿ. ಬೆಳ್ಳಿ ೪೨ ದಿನೇಶ ಬರದವಳ್ಳಿ . ೩೭೮(೦.೦೦೨%ಚಲಾವಣೆ ಓಟಿನಲ್ಲಿ) === ಸಾಗರ ತಾಲ್ಲೂಕಿನ ಮತದಾರರ ವಿವರ ಮತ್ತು ಫಲಿತಾಂಶ === ೨೦೧೩ ರ ಮೇ ೫ ನೇ ತಾರೀಕು ನಡೆದ ಚುನಾವಣೆ . ಮತದಾರರು - ಸಾಗರ -ಗಂಡಸರು - ೮೮೭೪೦; ಹೆಂಗಸರು- ೮೯೭೪೦೪ ; ಒಟ್ಟು - ೧೭೯೬೮೩ ಮತ ಚಲಾಯಿಸಿದವರು -೧,೩೪,೫೧೫ - ಶೇಕಡ ೭೪.೮೬ ; ಎಣಿಕೆ ೮-೫-೨೦೧೩, ಮುಖ್ಯಮಂತ್ರಿ ಸಿದ್ದ ರಾಮಯ್ಯ ನವರ ಪ್ರಮಾಣ ವಚನ ೧೩-೫-೨೦೧೩ ಸೋಮವಾರ; ಪೂರ್ಣ ಮಟ್ಟದ ಮಂತ್ರಿ ಮಂಡಲ ರಚನೆ ;( ಕ್ಯಾಬಿನೆಟ್ ದರ್ಜೆ ೨೧ ಜನ; ರಾಜ್ಯ ಸಚಿವರು ೮ ಜನ)- - ೧೮-೫-೨೦೧೩ ಕರ್ನಾಟಕದ ವಿಧಾನಸಭೆಯ ಸ್ಪೀಕರ್ / ಅಧ್ಯಕ್ಷರಾಗಿ ಸಾಗರ ತಾಲ್ಲೂಕಿನ ಕಾಗೋಡು ತಿಮ್ಮಪ್ಪನವರು ಸರ್ವಾನುಮತದಿಂದ ದಿ ೩೧-೫-೨೦೧೩ ಶುಕ್ರವಾರ ಆಯ್ಕೆಯಾದರು. === ಸಾಗರದ ಜನಸಂಖ್ಯೆ ಮತ್ತು ಇತರೆ ತಾಲ್ಲೂಕಿಗೆ ಹೋಲಿಕೆ === ೨೦೧೧ ರ ಜನಗಣತಿ == ಕಾಲೇಜುಗಳು == ಲಾಲ್ ಬಹಾದ್ದೂರ್ ಕಲಾ ಮತ್ತು ವಿಜ್ಞಾನ ಹಾಗೂ ಎಸ್ ಬಿ ಸೊಲಬಣ ಶೆಟ್ಟಿ ವಾಣಿಜ್ಯ ಕಾಲೇಜು. ಇಂದಿರಾಗಾಂಧಿ ಮಹಿಳಾ ಕಾಲೇಜು. ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್. ಕೆ.ಹೆಚ್.ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆ. ಎಂ.ಡಿ.ಎಫ್. ಸ್ವತಂತ್ರ ಪದವಿ ಪೂರ್ವ ಕಾಲೇಜು == ವಾಣಿಜ್ಯೋದ್ಯಮ == ಸಾಗರದಲ್ಲಿ ಅಡಿಕೆ ವ್ಯಾಪಾರ ತುಂಬಾ ಜೋರಾಗಿದೆ. ಇಲ್ಲಿ ಕೆಲವು ಖಾಸಗಿ ಮಂಡಿಗಳು ಮತ್ತೆ ಕೆಲವು ಸಹಕಾರಿ ವ್ಯಾಪಾರಿ ಸಂಸ್ಥೆಗಳೂ ಇವೆ. == ಉಲ್ಲೇಖಗಳು ==