ಹಲಸಿ ( ಹಲಸಿ, ಹಲ್ಸಿ ಅಥವಾ ಹಲಶಿ ಮತ್ತು ಹಿಂದಿನ ಕಾಲದಲ್ಲಿ ಹಲಸಿಗೆ ಅಥವಾ ಪಲಸಿಗೆ ಎಂದೂ ಕರೆಯುತ್ತಿದ್ದರು.) ಭಾರತದ ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿರುವ ಒಂದು ಪಟ್ಟಣವಾಗಿದೆ. ಇದು ಖಾನಾಪುರದಿಂದ 14ಕಿಮೀ ಮತ್ತು ಕಿತ್ತೂರಿನಿಂದಸುಮಾರು 25 ಕಿ.ಮೀ. ದೂರದಲ್ಲಿದೆ. ಶಾಸನಗಳಿಂದ ತಿಳಿದುಬರುವಂತೆ ಈ ಪಟ್ಟಣದ ಪ್ರಾಚೀನ ಹೆಸರು ಪಲಾಶಿಕಾ. ಇದು ಆರಂಭಿಕ ಕದಂಬ ರಾಜವಂಶದ ಕೇಂದ್ರ (. 500), ಮತ್ತು ಗೋವಾದ ಕದಂಬರ (980-1025) ಸಣ್ಣ ರಾಜಧಾನಿಯಾಗಿತ್ತು. ಈ ಪಟ್ಟಣವು ಮಧ್ಯಕಾಲೀನ ದೇವಾಲಯಗಳ ನಿರ್ಮಾಣಕ್ಕೆ ಪ್ರಸಿದ್ಧವಾಗಿದೆ. ಪಟ್ಟಣದಲ್ಲಿರುವ ವರಾಹ ನರಸಿಂಹ ದೇವಸ್ಥಾನ, ಸುವರ್ಣೇಶ್ವರ ದೇವಸ್ಥಾನ ಮತ್ತು ರಾಮೇಶ್ವರ ದೇವಸ್ಥಾನಗಳು ಬಹಳ ಪ್ರಸಿದ್ಧವಾಗಿವೆ. ಪಟ್ಟಣದ ನೈರುತ್ಯದಲ್ಲಿ ಸುಮಾರು 1.9 ಕಿ.ಮೀ. ಎತ್ತರದ ಬೆಟ್ಟದ ಮೇಲೆ ರಾಮತೀರ್ಥ ಎಂದು ಕರೆಯಲ್ಪಡುವ ಯಾತ್ರಾ ಸ್ಥಳವಿದೆ.ಹಲಸಿ ಪಟ್ಟಣದಲ್ಲಿ ಹಜರತ್ ನೂರ್ ಅಲ್-ದೀನ್ ಷಾಹ್ ಖಾದ್ರಿಯ ದರ್ಗ, ಮಸೀದಿ ಮತ್ತು ಗೋರಿಗಳು ಹಾಗೂ ಜೈನ ಬಸದಿ ಇವೆ. ಪಟ್ಟಣದ ದಕ್ಷಿಣದಲ್ಲಿ ಈದ್ಗಾಇದೆ. == ಪಲಾಶಿಕಾ == ಪಲಾಶಿಕಾದ ಪುರಾತನ ವಸಾಹತುಗಳಲ್ಲಿ ಯಾವುದೇ ವಾಸ್ತುಶಿಲ್ಪದ ಅವಶೇಷಗಳು ಕಂಡುಬಂದಿಲ್ಲ, ಆದರೆ ಪಟ್ಟಣದ ಪಶ್ಚಿಮ ಭಾಗದಲ್ಲಿರುವ ಕಲ್ಲೇಶ್ವರ (ಕಲಮೇಶ್ವರ ಎಂದೂ ಕರೆಯಲ್ಪಡುವ) ದೇವಸ್ಥಾನದ ಬಳಿ ಇಟ್ಟಿಗೆಯಿಂದ ನಿರ್ಮಿಸಲಾದ ರಚನೆಗಳ ಕುರುಹುಗಳನ್ನು ಎ. ಸುಂದರ ಅವರು ಗಮನಿಸಿದ್ದಾರೆ. 1850 ರ ದಶಕದಲ್ಲಿ ಚಕ್ರತೀರ್ಥ ಎಂದು ಕರೆಯಲ್ಪಡುವ ಸ್ಥಳದಲ್ಲಿ ಪತ್ತೆಯಾದ ತಾಮ್ರದ ಫಲಕಗಳ ಸರಣಿಯು ಆರಂಭಿಕ ಪಲಾಶಿಕಾದ ಪ್ರಮುಖ ಸಾಕ್ಷಿಯಾಗಿದೆ. ಜಾನಪದ ವಿದ್ಯಾಂಸರಾದ ಫ್ಲೀಟ್ ಅವರು ಹೇಳುವಂತೆ ಇವುಗಳು "ಹದಿನಾರು ವರ್ಷಗಳ ಹಿಂದೆ ನಂದಿಗಡಕ್ಕೆ ಹೋಗುವ ರಸ್ತೆಯಲ್ಲಿ ಹಲಸಿಯ ಹೊರಗೆ ಇರುವ ಚಕ್ರತೀರ್ಥ ಎಂಬ ಸಣ್ಣ ಬಾವಿಯ ಸಮೀಪವಿರುವ ಮಣ್ಣಿನ ದಿಬ್ಬದಲ್ಲಿ ಕಂಡುಬಂದಿವೆ." ಸನ್ನದುಗಳು ಎಲ್ಲಾ ಜೈನ ಅನುದಾನಗಳನ್ನು ದಾಖಲಿಸುತ್ತವೆ ಮತ್ತು ಕಾಕುತ್ಸ್ಥವರ್ಮ (. 405-430) ರವಿವರ್ಮ (. 465-500) ಮತ್ತು ಹರಿವರ್ಮನ (. 500-15) ಕಾಲವನ್ನು ಅಂದಾಜಿಸಿ, ಗುರುತಿಸಲು ಸಹಾಯಕವಾಗಿವೆ. == ವರಾಹ ನರಸಿಂಹ ದೇವಾಲಯ == ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿದ ಬೆಳಗಾವಿ ಜಿಲ್ಲೆಯ ಸ್ಮಾರಕಗಳ ಪಟ್ಟಿಯಲ್ಲಿ ಕಂಡುಬರುತ್ತದೆ. ಹತ್ತೊಂಬತ್ತನೆಯ ಶತಮಾನದವೆಂದು ಗುರುತಿಸಲಾದ ಶೈಲಿ-ಸಂಪ್ರದಾಯಗಳು ಇದರ ನಿರ್ಮಾಣವನ್ನು ಜಕಣಾಚಾಯ‍ರು ಮಾಡಿದ್ದೆಂದು ಹೇಳುತ್ತವೆ. ಜನಪ್ರಿಯ ನಾಯಕ ಅಮರಶಿಲ್ಪಿ ಜಕಣಾಚಾರಿಯನ್ನು ಇದು ಉಲ್ಲೇಖಿಸುತ್ತದೆ. ದೇವಾಲಯದ ಒಳಗೆ ಒಂದು ದೊಡ್ಡ ಕಲ್ಲಿನ ಫಲಕವು ಎರಡು ಭಾಗಗಳಲ್ಲಿ ಅರವತ್ತು ಸಾಲುಗಳ ಶಾಸನವನ್ನು ಹೊಂದಿದೆ, ಅದು ವಿವಿಧ ವರ್ಷಗಳಲ್ಲಿ ದೇವಾಲಯಕ್ಕೆ ನೀಡಿದ ದಾನ-ದತ್ತಿಗಳನ್ನು ದಾಖಲಿಸುತ್ತದೆ. ಮೊದಲನೆಯದು 1169 ( ಕಲಿಯುಗ 4369) ಮತ್ತು ಗೋವಾ ಕದಂಬರ ಆರನೇ ಕದಂಬ ಪೆರ್ಮಾಡಿ ಅಥವಾ ಶಿವಚಿತ್ತ (1147-1175) ಅರಸು ಹಲಸಿ ನಗರದಲ್ಲಿ ಮಾತಾಯೋಗಿ ಅವರಿಂದ ಸ್ಥಾಪಿಸಿದ ನರಸಿಂಹನ ಪವಿತ್ರ ಪುಣ್ಯಕ್ಷೇತ್ರ ದೇಗುಲವನ್ನು ನಿರ್ವಹಿಸುವುದಕ್ಕಾಗಿ ಒಂದು ಗ್ರಾಮವನ್ನು ಉಂಬಳಿಯಾಗಿ ನೋಂದಾಯಿಸಿದ್ದಾರೆ. ಮತ್ತೊಂದು ಶಾಸನವು ಎರಡನೇ ವಿಜಯಾದಿತ್ಯನಿಗೆ ಸೇರಿದ್ದು ಅವನ ಆಳ್ವಿಕೆಯ ಏಕೈಕ ಶಾಸನವಾಗಿದೆ. ಕ್ರಿ. ಶ. 1171-72 ( ಕಲಿಯುಗ 4272-73) ಅವನ ಆಳ್ವಿಕೆಯ ಇಪ್ಪತ್ತೈದನೇ ವರ್ಷದಲ್ಲಿ, ಇದು ಭಲಾಕ ಎಂಬ ಗ್ರಾಮವನ್ನು ಉಂಬಳಿಯಾಗಿಯಾಗಿ ನೀಡಿದ್ದನ್ನು ದಾಖಲಿಸುತ್ತದೆ. ದೇವಾಲಯದ ಒಳಗೆ ಎರಡು ಗರ್ಭಗೃಹಗಳು ಪರಸ್ಪರ ಮುಖಾಮುಖಿಯಾಗಿವೆ. ಬಲಭಾಗದಲ್ಲಿ ಕುಳಿತ ಭಂಗಿಯಲ್ಲಿ ಭಗವಾನ್ ಶ್ರೀ ವಿಷ್ಣುವಿನ ವಿಗ್ರಹವಿದೆ. ಸೂರ್ಯನಾರಾಯಣ ಮತ್ತು ಮಹಾಲಕ್ಷ್ಮಿ ದೇವತೆಗಳು ಮುಖ್ಯ ದೇವತೆಯ ವಿಗ್ರಹದ ಹಿಂದೆ ಇದ್ದಾರೆ. ಎಡಭಾಗದಲ್ಲಿರುವ ಕೋಣೆಯು ಭೂವರಾಹ ಸ್ವಾಮಿಯ ದೇವರನ್ನು ಹೊಂದಿದ್ದು, ಭಗವಾನ್ ವಿಷ್ಣುವಿನ ವರಾಹ ಅವತಾರವನ್ನು ಹೊಂದಿದೆ, ಅಲ್ಲಿ ಅವನು ತನ್ನ ದಂತದ ಮೇಲೆ ಭೂಮಿತಾಯಿಯನ್ನು (ಅಥವಾ ಭೂದೇವಿ) ಹೊತ್ತಿದ್ದಾನೆ. ಮುಖ್ಯ ದೇವಾಲಯದ ಹೊರಭಾಗದಲ್ಲಿ ಗಣೇಶ, ಶಿವ ಮತ್ತು ವಿಠ್ಠಲನಿಗೆ ಸಮರ್ಪಿತವಾದ ಚಿಕ್ಕ ದೇವಾಲಯಗಳಿವೆ. ರಾಧಾ ಕೃಷ್ಣನ ಒಂದು ಪ್ರತಿಮೆಯನ್ನು ಸಹ ಚಿಕ್ಕ ದೇವಾಲಯದಲ್ಲಿ ಕಾಣಬಹುದು. ಆಶ್ವಿನ (ಆಶ್ವಯುಜ) ಹುಣ್ಣಿಮೆಯಂದು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಕಾರ್ತಿಕ ಅಥವಾ ಕಾರ್ತಿಕ ಪೂರ್ಣಿಮೆಯ ಹುಣ್ಣಿಮೆಯ ದಿನದಂದು, ವರಾಹನರಸಿಂಹನ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ರಾಮೇಶ್ವರನ ದೇವಸ್ಥಾನಕ್ಕೆ ಒಯ್ಯಲಾಗುತ್ತದೆ. == ಶ್ರೀ ಸುವರ್ಣೇಶ್ವರ ದೇವಸ್ಥಾನ == ಹಲಸಿಯ ಪೂರ್ವ ಭಾಗದಲ್ಲಿರುವ ಈ ದೇವಾಲಯವು ಶಿವಲಿಂಗವನ್ನು ಹೊಂದಿದೆ. ದೇವಾಲಯದ ಶಿಖರವು ಇಲ್ಲ (ಕಾಣೆಯಾಗಿದೆ) ಮತ್ತು ದೇವಾಲಯದ ವಿಶಾಲ ಪ್ರಾಕಾರವು ಅಂಕಣಗಳು ಮತ್ತು ಲಿಂಟಲ್‌ಗಳನ್ನು ಸುತ್ತುವರಿದು ಸಂರಕ್ಷಿಸುತ್ತದೆ. ಈ ಶೈಲಿಯು ಸೂಕ್ಷ್ಮ ಶಿಲ್ಪಕಲೆಯಿಂದ ಕೂಡಿದ್ದು ನಂದಿ ಮತ್ತು ಗಣೇಶನ ದೊಡ್ಡ ವಿಗ್ರಹಗಳು ಇಲ್ಲಿವೆ. ಈ ದೇವಾಲಯವು 12 ನೇ ಶತಮಾನಕ್ಕೆ ಸೇರಿದೆ. == ರಾಮೇಶ್ವರ ದೇವಸ್ಥಾನ == ಸುವರ್ಣೇಶ್ವರ ಮತ್ತು ವರಾಹ ನರಸಿಂಹನ ನಡುವೆ ಇರುವ ಈ ದೇವಾಲಯವು ಗರ್ಭಗುಡಿ ಮತ್ತು ದೊಡ್ಡ ಮಂಟಪವನ್ನು ಹೊಂದಿದೆ . ಮಂಟಪವು ಸುರುಳಿಯಾಕಾರದ ಕಟಾಂಜನಕ್ಕೆ ಪ್ರಸಿದ್ಧವಾಗಿದೆ. ಬೃಹತ್ ಸ್ತಂಭಗಳು ಪ್ರಬುದ್ಧ ಕದಂಬ ಶೈಲಿಯಲ್ಲಿ ಚೌಕಾಕಾರ, ಅಷ್ಟಭುಜಾಕೃತಿ ಮತ್ತು ದುಂಡನೆಯ ಶಿಲ್ಪಕಲಾ ವಿಭಾಗಗಳನ್ನು ಹೊಂದಿವೆ. ದೇವಾಲಯವು ಕೋಟೆಯಂತೆ ಕಂಡುಬರುವ ದೊಡ್ಡ ಆವರಣದಲ್ಲಿದೆ; ಉತ್ತರದಲ್ಲಿ ಪುರಾತನ ಕೋಟೆಯ ಪ್ರಾಕಾರ ಮತ್ತು ಯೋಜಿತ ಭದ್ರಕೋಟೆಯ ಕುರುಹುಗಳಿವೆ. == ದಿಗಂಬರ ಜೈನ ಬಸದಿ == ಪಾಳುಬಿದ್ದ ದಿಗಂಬರ ಜೈನ ಬಸದಿಯು ವರಾಹ ನರಸಿಂಹ ದೇವಾಲಯದ ಪಕ್ಕದಲ್ಲಿ ಆಗ್ನೇಯ ದಿಕ್ಕಿನಲ್ಲಿ ಇದೆ. ಇದು ಸೈಕ್ಲೋಪಿಯನ್ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ ಮತ್ತು ಶಿಖರವನ್ನು ಹೊಂದಿಲ್ಲ. ಮಂಟಪವು ಮಧ್ಯಕಾಲೀನ ಪ್ರಕಾರದ ಸುರುಳಿಯಾಕಾರದ ಮತ್ತು ಕೆತ್ತಿದ ಕಂಬಗಳಿಂದ ಸುತ್ತುವರಿದಿದೆ. ಈ ಬಸದಿಯು 11 ಅಥವಾ 12 ನೇ ಶತಮಾನಕ್ಕೆ ಸೇರಿದೆ. == ರಾಮತೀರ್ಥ == ಹಲಸಿಯ ನೈಋತ್ಯಕ್ಕೆ ಸ್ವಲ್ಪ ದೂರದಲ್ಲಿ, ಬೆಟ್ಟದ ಮೇಲೆ ಕಲ್ಲು ಬಂಡೆಯಲ್ಲಿ, ಎರಡು ದೇವಾಲಯಗಳೊಂದಿಗೆ ನೈಸರ್ಗಿಕ ಕೆರೆ ಇದೆ. ರಾಮೇಶ್ವರನಾಗಿ ಶಿವನಿಗೆ ಮೀಸಲಾಗಿರುವ ಮುಖ್ಯ ಕಟ್ಟಡವು ಮಂಟಪದ ಒಂದು ಸರಳ ಕಲ್ಲಿನ ರಚನೆಯಾಗಿದೆ. ಸಭಾಂಗಣದ ಕಂಬಗಳು ತೊಟ್ಟಿಯಲ್ಲಿ ನೇರವಾಗಿ ನಿಂತಿವೆ. ಗರ್ಭಗುಡಿಯ ಮೇಲಿರುವ ಶಿಖರವು ಶೈಲಿಯಲ್ಲಿ ವರಾಹ ನರಸಿಂಹನ ದೇವಾಲಯವನ್ನು ಹೋಲುತ್ತದೆ ಮತ್ತು ಇದು ಬಹುಶಃ ಅದೇ ಅವಧಿಗೆ ಸೇರಿದೆ. ಮೂರನೇ ದೇವಾಲಯವು ಪಾಳುಬಿದ್ದ ಕೆಲವು ಗೋಡೆಗಳು ಮತ್ತು ಬಾಗಿಲಿನ ಚೌಕಟ್ಟಿನ ಭಾಗಗಳನ್ನು ಮಾತ್ರ ಹೊಂದಿದೆ, ಇದು ಇವುಗಳಿಂದ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿದೆ. == ಮಸಿಗಢ == ಪಟ್ಟಣದ ಪಶ್ಚಿಮಕ್ಕೆ ನೇರವಾಗಿ ಮಾಚಿಗಡ / ಮಸಿಗಡ (ಮಾಚೀಗಡ ಕಿಲ್ಲಾ) ಎಂದು ಕರೆಯಲ್ಪಡುವ ಕೋಟೆಯೊಂದಿಗೆ ಪ್ರಮುಖ ಬೆಟ್ಟವಿದೆ. ಕಲ್ಲಿನಿಂದ ನಿರ್ಮಿತವಾದ ತೊಟ್ಟಿಗಳು ಮತ್ತು ಸೈಕ್ಲೋಪಿಯನ್ ಕಲ್ಲುಗಳ ಅವಶೇಷಗಳನ್ನು ಗುರುತಿಸಬಹುದು.ಕರ್ನಾಟಕದಲ್ಲಿ ಕಾಣುವ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಂತೆ ಮಾಚೀಗಡದಲ್ಲಿಯು ಒಂದು ಸುಬ್ರಮಣ್ಯ ದೇವಸ್ಥಾನವಿದೆ. == ಇವನ್ನೂ ನೋಡಿ == ಬನವಾಸಿ ಗೋವಾ ಹಾನಗಲ್ ಕದಂಬ ರಾಜವಂಶ ಕಮಲಾ ನಾರಾಯಣ ದೇವಾಲಯ ದೇಗಾಂವ (ದೇವಗಾಮೆ / ದೇವಗ್ರಾಮ) ಉತ್ತರ ಕರ್ನಾಟಕ ಉತ್ತರ ಕರ್ನಾ‍ಟಕದ ಪ್ರವಾಸೋದ್ಯಮ == ಬಾಹ್ಯ ಕೊಂಡಿಗಳು == ಹಲಸಿಯಿಂದ ಶಾಸನಗಳು ಪ್ರಮುಖ ಸ್ಥಳಗಳೊಂದಿಗೆ ಹಲಸಿಯ ನಕ್ಷೆ == ಉಲ್ಲೇಖಗಳು ==