ಹಿರೇಬೆಣಕಲ್ ಅಥವಾ ಹಿರೇಬೆಣಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ಬೃಹತ್ ಶಿಲೆಯ ತಾಣವಾಗಿದೆ. ಇದನ್ನು 800 ಕ್ರಿ.ಪೂ. ರಿಂದ 200 ಕ್ರಿ.ಪೂ. ಅವಧಿಯಲ್ಲಿ ನಿರ್ಮಿಸಲಾದ ಭಾರತದ ಕೆಲವೇ ಬೃಹತ್ ಶಿಲಾ ತಾಣಗಳಲ್ಲಿ ಒಂದಾಗಿದೆ. ಈ ತಾಣವು ಕೊಪ್ಪಳ ಜಿಲ್ಲೆಯಲ್ಲಿದ್ದು, ಗಂಗಾವತಿ ನಗರದಿಂದ ಸುಮಾರು 10 ಕಿಲೋಮೀಟರ್ ಪಶ್ಚಿಮಕ್ಕೆ, ಹೊಸಪೇಟೆ ನಗರದಿಂದ ಸುಮಾರು 35 ಕಿಲೋಮೀಟರ್ ಉತ್ತರಕ್ಕೆ, ಮತ್ತು ಕೊಪ್ಪಳ ನಗರದಿಂದ 43 ಕಿಲೋಮೀಟರ್ ದೂರ ಇದೆ. ಇಲ್ಲಿ ಸುಮಾರು 400 ಬೃಹತ್ ಶಿಲಾ ಗೋರಿಯ ಸ್ಮಾರಕಗಳು ಇದ್ದು, ಇವುಗಳನ್ನು ನವಶಿಲಾಯುಗ ಮತ್ತು ಕಬ್ಬಿಣಯುಗದ ನಡುವಿನ ಪರಿವರ್ತನೆಯ ಕಾಲದ್ದೆಂದು ಅಂದಾಜು ಮಾಡಲಾಗಿದೆ. ಸ್ಥಳೀಯವಾಗಿ ಈ ಜಾಗವನ್ನು ಏಳು ಬೆಟ್ಟಗಳು ಎಂದು ಕರೆಯಲಾಗುತ್ತದೆ, ಈ ತಾಣವಿರುವ ಗುಡ್ಡದ ನಿರ್ದಿಷ್ಟ ಹೆಸರು ಮೋರ್ಯಾರ್ ಗುಡ್ಡ. ದಕ್ಷಿಣ ಭಾರತದಲ್ಲಿ ಕಂಡುಬರುವ ಸುಮಾರು 2000 ಬೃಹತ್ ಶಿಲಾ ತಾಣಗಳಿದ್ದು, ಅವುಗಳಲ್ಲಿ ಹೆಚ್ಚಿನವು ಕರ್ನಾಟಕ ರಾಜ್ಯದಲ್ಲಿವೆ; ಅದರ ಪೈಕಿ ಹಿರೇಬೆಣಕಲ್ ಅತಿದೊಡ್ಡ ಸ್ಮಶಾನ ಎಂದು ವರದಿಯಾಗಿದೆ. 1955ರಿಂದ, ಇದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಧಾರವಾಡ ವೃತ್ತದ ನಿರ್ವಹಣೆಯಲ್ಲಿದೆ. ಮೇ 19, 2021ರಂದು, ಹಿರೇಬೆಣಕಲ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಲು ಪ್ರಸ್ತಾಪಿಸಲಾಯಿತು. ಫ಼ೆಬ್ರವರಿ 26, 2023ರಂದು ಈ ತಾಣವನ್ನು ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಕರ್ನಾಟಕ ಸರ್ಕಾರ ಘೋಷಿಸಿತು. == ಭೂಗೋಳಶಾಸ್ತ್ರ == ಗೋರಿಯ ಸ್ಮಾರಕಗಳು ಏಳು ಬೆಟ್ಟಗಳ ಕಲ್ಲಿನ ಶ್ರೇಣಿಯಲ್ಲಿವೆ. ಈ ತಾಣವು ತುಂಗಭದ್ರಾ ನದಿಯ ಎಡಭಾಗದಲ್ಲಿದೆ ಮತ್ತು ಇದು ಮುಳ್ಳಿನ ಪೊದೆಗಳು ಹಾಗೂ ಜಾರುವ ಬಂಡೆಗಳಿಂದ ಕೂಡಿದೆ. ಜೊತೆಗೆ ಒಂದು ಹಳ್ಳವನ್ನು ದಾಟಬೇಕು. ವರ್ಷಪೂರ್ತಿ ನೀರು ಇರುವ ಒಂದು ಕೆರೆ ಇದ್ದು ಮತ್ತು ಹತ್ತಿರದಲ್ಲಿಯೇ ಒಂದು ಹಳೆಯ ಅರೆ ಅಥವಾ ಕಲ್ಲುಗಣಿ ಇದ್ದು, ಹಿರೇಬೆಣಕಲ್ ಸ್ಮಾರಕಗಳನ್ನು ನಿರ್ಮಿಸಲು ಬಳಸಿದ ವಸ್ತುಗಳ ಮೂಲವಾಗಿದೆ ಎಂದು ಪ್ರತಿಪಾದಿಸಲಾಗಿದೆ. ಗಂಗಾವತಿ, ಹೊಸಪೇಟೆ ಮತ್ತು ಕೊಪ್ಪಳ ಪಟ್ಟಣಗಳಿಂದ ರಾಜ್ಯ ಹೆದ್ದಾರಿಯ ಮೂಲಕ ಹಿರೇಬೆಣಕಲ್ ಗ್ರಾಮವನ್ನು ತಲುಪಬಹುದು. ಈ ಸ್ಥಳಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಗಂಗಾವತಿ. == ಇತಿಹಾಸ == ಈ ತಾಣವನ್ನು 2000 ವರ್ಷಗಳಿಗಿಂತ ಹಿಂದೆ ನಿರ್ಮಿಸಲಾಗಿದ್ದು, ಇಲ್ಲಿಯ ಅನೇಕ ಬೃಹತ್ ಶಿಲಾ ರಚನೆಗಳು 800 ಕ್ರಿ.ಪೂ. ಮತ್ತು 200 ಕ್ರಿ.ಪೂ. ನಡುವಿನ ಕಾಲದ್ದಾಗಿವೆ. ಕಬ್ಬಿಣಯುಗವು ಭಾರತದ ಈ ಭಾಗದಲ್ಲಿ 1000 ವರ್ಷಗಳಿಗಿಂತ ಹೆಚ್ಚು ಕಾಲ (ಕ್ರಿ.ಪೂ. 1200ರಿಂದ ಕ್ರಿ.ಶ. 200ರವರೆಗೆ) ವ್ಯಾಪಿಸಿತ್ತು ಎಂದು ಅಂದಾಜಿಸಲಾಗಿದೆ. ಹಿರೇಬೆಣಕಲ್ ಪ್ರದೇಶದ ಪಶ್ಚಿಮ ಗುಂಪಿನಲ್ಲಿರುವ ಕಿಂಡಿಯುಳ್ಳ ಕೂಠಡಿಯು ರಾಜನಕೋಳೂರಿನ ಇದೇ ರೀತಿಯ ಸಂಶೋಧನೆಗಳಿಗೆ ಹೋಲಿಸಲಾಗಿದೆ. ಹೈದರಾಬಾದಿನ ನಿಜಾಮನ ಸೇವೆಯಲ್ಲಿದ್ದ ಫಿಲಿಪ್ ಮೆಡೋಸ್ ಟೇಲರ್ ಅವರು 1835 ರಲ್ಲಿ ಜರ್ನಲ್ ಆಫ್ ದಿ ರಾಯಲ್ ಏಷಿಯಾಟಿಕ್ ಸೊಸೈಟಿಯಲ್ಲಿ ಹಿರೇಬೆಣಕಲ್ ಬಗ್ಗೆ ಪ್ರಕಟಿಸಿದ ಮೊದಲ ವರದಿಯಾಗಿದೆ. ನಂತರ ಒಂದು ಶತಮಾನಕ್ಕೂ ಹೆಚ್ಚು ಕಾಲ, ಈ ತಾಣದಲ್ಲಿ ಯಾವುದೇ ವ್ಯವಸ್ಥಿತ ಅಧ್ಯಯನವನ್ನು ನಡೆಸಲಾಗಿಲ್ಲ. 1944 ಮತ್ತು 1948ರ ನಡುವೆ, ಸರ್ ಮಾರ್ಟಿಮರ್ ವೀಲರ್ ಪುರಾತತ್ತ್ವ ಶಾಸ್ತ್ರದ ಉತ್ಖನನಗಳನ್ನು ಕೈಗೊಂಡರು; ಇವುಗಳನ್ನು ಅಡಿಗ ಸುಂದರ ಅವರು ಪೂರಕವಾಗಿ 1975ರಲ್ಲಿ ಪ್ರಕಟಿಸಿದರು. ಸುಂದರ ಅವರ "ದ ಅರ್ಲಿ ಚೇಂಬರ್ ಟೂಂಬ್ಸ್ ಆಫ್ ಸೌತ್ ಇಂಡಿಯಾ: ಎ ಸ್ಟಡಿ ಆಫ್ ದಿ ಐರನ್ ಏಜ್ ಮೆಗಾಲಿಥಿಕ್ ಮಾನುಮೆಂಟ್ಸ್ ಆಫ್ ನಾರ್ತ್ ಕರ್ನಾಟಕ" ಎಂಬ ಪ್ರಕಟಣೆಯಲ್ಲಿ ದಟ್ಟ ಅರಣ್ಯದಿಂದ ಸುತ್ತುವರಿದ ಸ್ಥಳದಲ್ಲಿ 300 ಬೃಹತ್ ಶಿಲಾ ಸಮಾಧಿ ಕೋಣೆಗಳ ಕುರಿತು ವಿವರಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದ ಆಂಡ್ರ್ಯೂ ಬಾವರ್ ಅವರು ಇತ್ತೀಚಿನ ವರ್ಷಗಳಲ್ಲಿ ತನಿಖೆಗಳನ್ನು ನಡೆಸಿ 20 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 1000 ವಿವಿಧ ಪ್ರಕಾರದ ಪ್ರಾಚೀನ ವಸ್ತುಗಳನ್ನು ಗುರುತಿಸಿದ್ದಾರೆ. ಅವರ ಸಂಶೋಧನೆಗಳು ಮಾನವರೂಪದ ಗೋರಿಯ ರಚನೆಗಳು, ಸ್ಮಾರಕಶಿಲೆಗಳು, ಮತ್ತು ವೃತ್ತಾಕಾರದ ಕಲ್ಲಿನ ಬೇಲಿಗಳನ್ನು ವಿವರಿಸುತ್ತವೆ. ಬಾವರ್ ತನ್ನ ಬರಹಗಳಲ್ಲಿ ಕಲ್ಲಿನ ಚಪ್ಪಡಿಗಳಿಂದ ಬೆಂಬಲಿತವಾದ ಡಾಲ್ಮೆನ್‌ಗಳು ಯಾವುದೇ ಗಾರೆ ಇಲ್ಲದೆ ಪರಿಪೂರ್ಣವಾಗಿ ನಿರ್ಮಿಸಲ್ಪಟ್ಟಿವೆ ಎಂದು ಹೇಳುತ್ತಾನೆ. == ವಿವರಣೆ == ಸರಿಸುಮಾರು 400 ಬೃಹತ್ ಶಿಲಾ ಸ್ಮಾರಕಗಳ ರಚನೆ ಪ್ರೇತನಗರದಂತಿದೆ. ಅವುಗಳ ರಚನೆ ಆಕಾರ ಮತ್ತು ಗಾತ್ರದಲ್ಲಿ ವೈವಿಧ್ಯಮಯವಾಗಿವೆ. ಡಾಲ್ಮೆನ್‌ಗಳ ಸಮೂಹಗಳಿದ್ದು, ಅದರಲ್ಲಿ ಮೂರು ಗೋಡೆಗಳ ಮೇಲೆ ಮೇಲ್ಛಾವಣಿಯನ್ನು ರೂಪಿಸುವ ಬಂಡೆಗಳುಳ್ಳ ಕೋಣೆಗಳು ಇವೆ. ಸಣ್ಣ ಡಾಲ್ಮೆನ್‌ಗಳು 50–100 ಸೆಂ.ಮೀ. ಇದ್ದು, ದೊಡ್ಡವುಗಳು 3 ಮೀ. ಎತ್ತರ ಇವೆ. ಹೂತ ಮತ್ತು ಅರೆಹೂತ ಡಾಲ್ಮೆನ್‌ಗಳನ್ನು ಸಿಸ್ಟ್‌ಗಳು ಮತ್ತು ಡಾಲ್ಮೆನಾಯ್ಡ್ ಸಿಸ್ಟ್‌ಗಳಾಗಿ ವರ್ಗೀಕರಿಸಲಾಗಿದೆ ಮತ್ತು ಅವುಗಳನ್ನು ವೃತ್ತಾಕಾರದ ವಿನ್ಯಾಸಗಳಲ್ಲಿ ಜೋಡಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಈಗ ಕುಸಿದಿವೆ. ಕಿಂಡಿಗಳುಳ್ಳ ಡಾಲ್ಮೆನ್ಗಳು ಕಿಟಕಿಗಳಿರುವ ವಾಸಸ್ಥಾನಗಳಂತೆ ಕಾಣುತ್ತವೆ, ಆದರೆ ಅವು ವಾಸ್ತವವಾಗಿ ಗೋರಿಯ ರಚನೆಗಳಾಗಿವೆ. ಈ ಡಾಲ್ಮೆನ್‌ಗಳು ಒಮ್ಮೆ ಇದ್ದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಇವೆ. ವೃತ್ತಾಕಾರದ ಮತ್ತು ಚಂದಾಯ ಛಾವಣಿಗಳಿಂದ ಮುಚ್ಚಿದ ಉದ್ದವಾದ ಕೋಣೆಗಳು ಸಹ ಕಂಡುಬಂದಿವೆ. ಡಾಲ್ಮೆನಾಯ್ಡ್ ಸಿಸ್ಟ್‌ಗಳು ಹಲವಾರು ಆಕಾರಗಳು ಮತ್ತು ಗಾತ್ರಗಳಲ್ಲಿ ಅಸ್ತಿತ್ವದಲ್ಲಿವೆ. ಆಯತಾಕಾರದ ಆಕಾರದ ಡೋಲ್ಮೆನ್ ಗಳನ್ನು ನೆಲಮಟ್ಟದಲ್ಲಿ ಕಲ್ಲುಮಣ್ಣುಗಳಿಂದ ಬಿಗಿ ಮಾಡುವ ಮೂಲಕ ನಿರ್ಮಿಸಲಾಗಿದೆ ಎಂದು ತಿಳಿಯಲಾಗಿದೆ. ವೃತ್ತಾಕಾರದ ಆವರಣವನ್ನು ಗುರುತಿಸಲಾಗಿದೆ. ಈ ರಚನೆಗಳ ಸುತ್ತಲೂ ಮಣ್ಣು ತುಂಬಿದ ತಗ್ಗು ಇದೆ. ಬಂಡೆಗಳ ಆಶ್ರಯದ ಒಳಗೆ, ಜನರು ನೃತ್ಯ ಮಾಡುವ, ಬೇಟೆಯಾಡುವ, ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ವರ್ಣಚಿತ್ರಗಳಿವೆ. ಜಿಂಕೆಗಳು, ನವಿಲುಗಳು, ಚಿಗರಿಗಳು (ಕೃಷ್ಣಮೃಗ), ಗೂನುಳ್ಳ ಹೋರಿಗಳು, ಕುದುರೆಗಳು, ಮತ್ತು ಹಸುಗಳ ಜ್ಯಾಮಿತೀಯ ಮತ್ತು ಅತೀಂದ್ರಿಯ ವಿನ್ಯಾಸಗಳೂ ಇವೆ. 10 ಮೀಟರ್ (33 ಅಡಿ) ಎತ್ತರದ ಬಂಡೆಯ ಮೇಲೆ ಕಲ್ಲಿನ ನಗಾರಿ ಒಂದು ಅಸಾಮಾನ್ಯವಾಗಿ ಕಂಡುಬರುತ್ತದೆ. ಬಂಡೆಯು ಅರ್ಧಗೋಳದ ಆಕಾರವನ್ನು ಹೊಂದಿದ್ದು, ಇದರ ವ್ಯಾಸವು 2 ಮೀಟರ್ (6 ಅಡಿ 7 ಇಂಚು) ಮತ್ತು ಎತ್ತರ 1.5 ಮೀಟರ್ (4 ಅಡಿ 11 ಇಂಚು) ಇದೆ. ಮರದ ಸುತ್ತಿಗೆಯಿಂದ ಹೊಡೆದಾಗ, ಬಂಡೆಯು 1 ಕಿ.ಮೀ. ದೂರದವರೆಗೆ ಕೇಳಬಹುದಾದ ಶಬ್ದಗಳನ್ನು ಉತ್ಪಾದಿಸುತ್ತದೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿನ ಗುಹೆಗಳು ನಿವಾಸಗಳು ಅಥವಾ ಪೂಜಾ ಸ್ಥಳಗಳಾಗಿದ್ದವು ಮತ್ತು ಕೆಂಪು ಬಣ್ಣವನ್ನು ಬಳಸಿ ಗುಹಾ ವರ್ಣಚಿತ್ರಗಳನ್ನು ಮಾಡಲಾಗಿತ್ತು, ಇದು ಹತ್ತಿರದ ಗೋರಿಯ ರಚನೆಗಳಿಂದ ದೃಢೀಕರಿಸಲ್ಪಟ್ಟಿದೆ. == ಕಲಾಕೃತಿಗಳು == ಈ ಸ್ಥಳದಲ್ಲಿ ನವಶಿಲಾಯುಗದ ಕಾಲದ ಕುಂಬಾರಿಕೆ ಕಂಡುಬಂದಿದೆ. ಪೂರ್ವ ಬೃಹತ್ ಶಿಲಾ ಉಪಕರಣಗಳು, ಕಬ್ಬಿಣದ ಗಸಿ, ಮತ್ತು ನವಶಿಲಾಯುಗ, ಬೃಹತ್ ಶಿಲಾ, ಮತ್ತು ಆರಂಭಿಕ ಐತಿಹಾಸಿಕ ಅವಧಿಗಳ ಕುಂಬಾರಿಕೆಗಳನ್ನು ಗುರುತಿಸಲಾಗಿದೆ. ದಕ್ಷಿಣ ಭಾರತದಲ್ಲಿ ಕಂಡುಬರುವ ಸಾಮಾನ್ಯ ಬೃಹತ್ ಶಿಲಾ ಕಾಲದ ಕಬ್ಬಿಣದ ಉಪಕರಣಗಳು ಹಿರೇಬೆಣಕಲ್ ತಾಣದಲ್ಲಿಯೂ ಕಂಡುಬರುತ್ತವೆ. == ಸಂರಕ್ಷಣೆ == ತಾಣದ ನವೀಕರಣ ಮತ್ತು ನಿರ್ವಹಣೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಜವಾಬ್ದಾರಿಯಾಗಿದ್ದರೂ, ಯಾವುದೇ ಚಟುವಟಿಕೆಯು ಸ್ಪಷ್ಟವಾಗಿ ಕಂಡುಬರುವುದಿಲ್ಲ. ಹೆಚ್ಚಿನ ಭಾರತೀಯರಿಗೆ ಮತ್ತು ವಿದೇಶಿಯರಿಗೆ ಪರಿಚಯವಿಲ್ಲದ, ವಾರ್ಷಿಕವಾಗಿ ಕೇವಲ ಹತ್ತುಹಲವು ವಿದೇಶಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗಿದೆ. ತಾಣದ ನಿರ್ವಹಣೆಯ ಪ್ರಮುಖ ಭಾಗವೆಂದರೆ ಗುಡ್ಡದ ತಳದಲ್ಲಿ ಮತ್ತು ರಾಯಚೂರು–ಕೊಪ್ಪಳ ರಾಜ್ಯ ಹೆದ್ದಾರಿಯ ಬಳಿ ಫಲಕಗಳನ್ನು ಸುಧಾರಿಸುವುದು. ಅದರಂತೆ, ಗುಪ್ತ ನಿಧಿಯ ಹುಡುಕಾಟದಲ್ಲಿ ಕಳ್ಳರು ಶತಮಾನಗಳಿಂದ ಡಾಲ್ಮೆನ್‌ಗಳನ್ನು ದೋಚಿದ್ದಾರೆ. ಕುರಿಗಾಹಿಗಳು ಸಹ ತಮ್ಮ ಜಾನುವಾರುಗಳನ್ನು ಮೇಯಿಸುತ್ತಾರೆ, ಹಾಗಾಗಿ ಡಾಲ್ಮೆನ್‌ಗಳು ಆಗಾಗ್ಗೆ ಕುಸಿಯುತ್ತವೆ. == ಸಂಸ್ಕೃತಿ == ಸಮೀಪದ ಹಿರೇಬೆಣಕಲ್ ಗ್ರಾಮದ ಸ್ಥಳೀಯರು ತಮ್ಮ ವಾರ್ಷಿಕ ಹಬ್ಬದಲ್ಲಿ ದೇವರೇ ಬೆಟ್ಟದಿಂದ ಬೆಟ್ಟಕ್ಕೆ ನಡೆದುಕೊಂಡು ಬರುತ್ತಾನೆ ಎಂದು ನಂಬುತ್ತಾರೆ. ಈ ನಂಬಿಕೆಯಿಂದಾಗಿ ಅಲ್ಲಿಯ ಜನರು ಈ ತಾಣದ ಬಳಿ ತಮ್ಮ ದನಗಳನ್ನು ಮೇಯಿಸುವುದು ತಪ್ಪಿದೆ. == ಕರ್ನಾಟಕದ ಇತರ ಬೃಹತ್ ಶಿಲಾ ತಾಣಗಳು == ಬ್ರಹ್ಮಗಿರಿ ಪುರಾತತ್ವ ಸ್ಥಳ ಕುಪ್ಗಲ್ ಶಿಲಾಲಿಪಿಗಳು ಸಿಡ್ಲಫಡಿ ಖ್ಯಾದ್ ಸೋಂದಾ ಬೈಸೆ ಆನೆಗೊಂದಿ ಮೊರೆರ ತಟ್ಟೆ ಸಂಗನಕಲ್ಲು == ಉಲ್ಲೇಖಗಳು ==