ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಏನು ಮಾತನಾಡುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಕೆಪಿಸಿಸಿ ಕಚೇರಿಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರಿಗೂ ಏನು ಸಂಬಂಧ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.  ಲೋಕಾಯುಕ್ತ ಎಸ್‍ಐಟಿ ಎಡಿಜಿಪಿ ಚಂದ್ರಶೇಖರ್ ಬಗ್ಗೆ ತಮಗೆ ತಿಳಿದಿದೆ, ಕೆಪಿಸಿಸಿ ಕಚೇರಿಯಿಂದಲೆ ಅವರ ಪತ್ರ ಬಹಿರಂಗವಾಗಿದೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಮಾಧ್ಯಮಗಳು ರವಿವಾರ ನೆಲಮಂಗಲದಲ್ಲಿ ಗಮನ ಸೆಳೆದಾಗ ಶಿವಕುಮಾರ್ ಈ ಮೇಲಿನಂತೆ ಪ್ರತಿಕ್ರಿಯಿಸಿದರು.  ನಾನು ನಿನ್ನೆ ಊರಿನಲ್ಲೇ ಇರಲಿಲ್ಲ. ಸಾತನೂರು, ಕನಕಪುರದಲ್ಲಿ ಕ್ಷೇತ್ರದ ಕೆಲಸದ ಸಂಬಂಧ ಪ್ರವಾಸ ಕೈಗೊಂಡಿದ್ದೆ. ಕುಮಾರಸ್ವಾಮಿ ಕೆಪಿಸಿಸಿ ನೆನೆಸಿಕೊಂಡರೆ ನಾನು ಏನು ತಾನೇ ಮಾತನಾಡಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ನಮ್ಮ 7 ಸಚಿವರ ಅಕ್ರಮಗಳ ದಾಖಲೆಗಳು ಅವರ ಬಳಿ ಇದ್ದರೆ ಬಿಡುಗಡೆ ಮಾಡಲಿ. ಇನ್ನೂ ಚಂದ್ರಶೇಖರ್ ಅವರನ್ನು ನಾನು ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ. ನನಗೆ ಅವರು ಪರಿಚಯವೇ ಇಲ್ಲ ಎಂದು ಹೇಳಿದರು.  