ಮೈಸೂರು : "ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಪ್ಪೆಸೆಗಿಸಿದ್ದು, ಅಧಿಕಾರಗಳ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ನಗರದ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಲೋಕಾಯುಕ್ತ ವಿಶೇಷ ತಂಡದ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅಧಿಕಾರಿ ಉತ್ತರ ಕೊಟ್ಟಿದ್ದಾರೆ ಎಂಬುದಷ್ಟೇ ಗೊತ್ತು. ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲʼ ಎಂದು ತಿಳಿಸಿದರು.  "ಆ ಅಧಿಕಾರಿ ಕುಮಾರಸ್ವಾಮಿ ಅವರನ್ನು ಹಂದಿ ಎಂದು ಕರೆದಿದ್ದಾರೆಯೇ ಅಥವಾ ಬರೆದಿದ್ದಾರೆಯೇ? ಅವರು ಬರೆದಿರುವ ಪತ್ರದಲ್ಲಿ ಸಾಹಿತ್ಯ ವಿಮರ್ಶಕ ಜಾರ್ಜ್‌ ಬರ್ನಾಡ್ ಶಾ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ ಅಷ್ಟೆ. ಆ ವಿಚಾರದ ಬಗ್ಗೆ ಸುದೀರ್ಘ ವಿವರಣೆ ನೀಡುವುದಿಲ್ಲ, ಅವರಿಬ್ಬರ ನಡುವೆ ಮಧ್ಯಪ್ರವೇಶವನ್ನು ಮಾಡುವುದಿಲ್ಲ" ಎಂದರು.  ಹಸ್ತಕ್ಷೇಪ ಮಾಡುವುದಿಲ್ಲ :  "ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ನಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಈಡಿಯಲ್ಲಿ ದೂರು ದಾಖಲಾಗಿದ್ದರೆ, ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ" ಎಂದರು.