ಬೆಂಗಳೂರು : ‘ಸಾರ್ವಜನಿಕರ ಅವಗಹನೆಗೆ-ಸೊಳ್ಳೆಗಳಿಂದ ಡೆಂಗಿ ಸೋಂಕು ಹರಡುತ್ತದೆ ಎಚ್ಚರಿಕೆಯಿಂದಿರಿ. ಬಿಜೆಪಿಯಿಂದ ಸುಳ್ಳು ಹರಡುತ್ತದೆ ಹುಷಾರಾಗಿರಿ’ ಎಂದು ಕಾಂಗ್ರೆಸ್ ಇಂದಿಲ್ಲಿ ಲೇವಡಿ ಮಾಡಿದೆ.  ಸೋಮವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಡೆಂಗಿ ಜ್ವರ ನಿಯಂತ್ರಣಕ್ಕೆ ಅರೋಗ್ಯ ಸಚಿವ  ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಮ್ಮ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಡೆಂಗಿ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಇಲಾಖೆಯನ್ನು ಸಜ್ಜುಗೊಳಿಸಿದ್ದಾರೆ.  ಅಲ್ಲದೆ ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ನೂತನ ಈಜುಗೊಳವನ್ನು ಉದ್ಘಾಟಿಸಿ, ತಾವು ಈಜುವ ಮೂಲಕ ಯುವ ಸಮುದಾಯಕ್ಕೆ ಪ್ರೇರಣೆ ನೀಡಿದ್ದಾರೆ. ಬಿಜೆಪಿ ಹಿಂದೆ ಕೋವಿಡ್ ಸೋಂಕು ಉತ್ತುಂಗದಲ್ಲಿದ್ದಾಗ ಅರೋಗ್ಯ ಸಚಿವರಾಗಿದ್ದ ಡಾ.ಸುಧಾಕರ್ ಈಜು ಮೋಜು ಮಾಡಿದ್ದರ ಬಗ್ಗೆ ನೆನಪಿದೆಯೇ?, ಹತ್ರಾಸ್ ದುರಂತದಲ್ಲಿ 123ಕ್ಕೂ ಹೆಚ್ಚು ಮಂದಿ ಜೀವ ಬಿಟ್ಟಿರುವಾಗ ಪ್ರಧಾನಿ ಮೋದಿ ಆ ಕಡೆ ತಲೆ ಹಾಕಿಯೂ ಮಲಗಿಲ್ಲ ಎಂಬ ಸತ್ಯ ತಿಳಿದಿದೆಯೇ?’ ಎಂದು ಪ್ರಶ್ನಿಸಿದೆ.  ‘ಮಣಿಪುರದಲ್ಲಿ ಡೆಂಗಿಗಿಂತಲೂ ಭೀಕರವಾದ ದ್ವೇಷ ತಾಂಡವವಾಡುತ್ತಿರುವಾಗ ಪ್ರಧಾನಿ ಮೋದಿ ಅತ್ತ ತಿರುಗಿಯೂ ನೋಡಲಿಲ್ಲ ಎಂಬ ವಾಸ್ತವದ ಅರಿವಿದೆಯೇ?. ರೈಲು ದುರಂತಗಳಲ್ಲಿ ನೂರಾರು ಮಂದಿ ಬಲಿಯಾದಾಗ ನಿಮ್ಮ ಕೇಂದ್ರ ಸರಕಾರದ ಸಚಿವರು ಹೊಣೆಗಾರಿಕೆ ಪ್ರದರ್ಶಿಸಿಲ್ಲ ಎಂಬ ಸತ್ಯ ತಿಳಿದಿದೆಯೇ?’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.  ‘ಬಿಜೆಪಿಯವರಿಗೆ ಈಜು ಒಂದು ಮೋಜಿನ ರೀತಿ ಕಾಣುತ್ತೆ. ಈಜು, ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟವರು ಬಿಜೆಪಿ ಪಕ್ಷದಲ್ಲಿರುವಾಗ ಬಿಜೆಪಿ ಇದನ್ನ ಕ್ರೀಡೆಯಾಗಿ ಹೇಗೆ ನೋಡಲು ಸಾಧ್ಯ. ಬಿಜೆಪಿಗರಿಗೆ ಈಜುವುದು ಮೋಜು ಮಸ್ತಿಯೇ. ನಾನು ಈಜುವುದಕ್ಕೂ ರಾಜ್ಯದಲ್ಲಿ ಡೆಂಗಿ ಹೆಚ್ಚಳಕ್ಕೂ ಎತ್ತಣ ಸಂಬಂಧ ಸ್ವಾಮಿ. ಅಷ್ಟಕ್ಕೂ ಮಂಗಳೂರಿಗೆ ಬಂದು ನಾನು ಮೊದಲ ಮಾಡಿದ ಕೆಲಸವೇ ಡೆಂಗಿ ತಪಾಸಣೆ. ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳ ನಾಶ ಪಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ. ಮನೆ ಮನೆಗೆ ತೆರಳಿ ನೀರು ಶೇಖರಣೆಯಾದ ಸ್ಥಳಗಳನ್ನ ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ’-ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ  