ಹಾವೇರಿ :  ರಾಜ್ಯ ಸರಕಾರದಲ್ಲಿ ಬರೀ ಖುರ್ಚಿಯ ಕಚ್ಚಾಟ ನಡೆದಿದೆ. ಇಷ್ಟು ಅನುಭವ ಇರುವ ಸಿಎಂ, ಡಿಸಿಎಂ, ಮಂತ್ರಿಗಳಿದ್ದರೂ ಖುರ್ಚಿಗಾಗಿ ಕಿತ್ತಾಟ ಮಾಡುವುದು ಕರ್ನಾಟಕದ ಹಿತದೃಷ್ಟಿಯಿಂದ ಸರಿ ಅಲ್ಲ. ಈ ಸರಕಾರವನ್ನು ಜನಸಾಮಾನ್ಯರು ಅತ್ಯಂತ ಖಂಡನೀಯವಾಗಿ ನೋಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ರವಿವಾರ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬಿಳುತ್ತದೆ ಎಂದು  ಬೊಮ್ಮಾಯಿ ಹಗಲುಗನಸು ಕಾಣುತ್ತಿದ್ದಾರೆ. ಕೇಂದ್ರ ಸರಕಾರದ ಸ್ಥಿತಿ ಬಗ್ಗೆ ಯೋಚನೆ ಮಾಡಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ  ಸಲೀಂ ಅಹ್ಮದ್‌  ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ,"ಸಲೀಂ ಅಹ್ಮದ್‌ ವಿಧಾನ ಪರಿಷತ್ ಸದಸ್ಯರು, ವಿಧಾನಸಭೆಯಲ್ಲಿ ಏನು ಆಗುತ್ತೆ..? ಮಂತ್ರಿ ಮಂತ್ರಿಗಳ ನಡುವೆ ಏನಾಗುತ್ತದೆ.? ಸಿಎಂ, ಡಿಸಿಎಂ ನಡುವೇ ಏನಾಗುತ್ತಿದೆ  ಎಂದು ತಿಳಿದು ಕೊಳ್ಳಲಿ. ಸಲೀಂ ಅಹ್ಮದ್‌ ಬಗ್ಗೆ ನನಗೆ ಕನಿಕರ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದ್ದರೂ  ಹೀಗೆ ಹೇಳಿದರೆ ನಾನು ಏನು ಹೇಳಲಿ" ಎಂದು ಹೇಳಿದರು.ಡೆಂಗ್ಯೂ ಮುನ್ನೆಚ್ಚರಿಕೆ ವಹಿಸಿ :ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಕುರಿತು ಮಾತನಾಡಿದ ಅವರು, "ಒಂದು ಕಾಲದಲ್ಲಿ ಹೇಗೆ ಕಾಲರಾ, ಮಲೇರಿಯಾ  ಬಂದಿತ್ತೊ ಹಾಗೆ ಈಗ ಡೆಂಗ್ಯೂ ಬಂದಿದೆ. ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.