ಹುಬ್ಬಳ್ಳಿ : ಮೂವರು ಡಿಸಿಎಂ ಸೃಷ್ಠಿ ಕೂಗಿನ ಹಿಂದೆ ನೇರ ಸಿಎಂ ಸಿದ್ದರಾಮಯ್ಯ ಅವರದ್ದೇ ಪಾತ್ರ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದರು.ಹುಬ್ಬಳ್ಳಿಯಲ್ಲಿ ರವಿವಾರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ-ಡಿಸಿಎಂ ಹುದ್ದೆ ವಿವಾದದ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು.ರಾಜ್ಯ ಸರಕಾರದ ಸಚಿವರೊಬ್ಬರು ಸಿಎಂ-ಡಿಸಿಎಂ ಚರ್ಚೆ, ವಿವಾದ ಹುಟ್ಟು ಹಾಕುವಲ್ಲಿ ಬಿಜೆಪಿಯ ಕೈವಾಡವಿದೆ ಎಂದಿದ್ದಾರೆ. ಯಾವ ಆಧಾರವಿದೆ? ಎಂದು ಪ್ರಶ್ನಿಸಿದ ಜೋಶಿ, ʼಇದು ಸತ್ಯಕ್ಕೆ ದೂರವಾದ ಸಂಗತಿʼ ಎಂದು ಸ್ಪಷ್ಟಪಡಿಸಿದರು "ಮೂವರು ಡಿಸಿಎಂ ಸೃಷ್ಟಿ,  ಸಿಎಂ ಬದಲಾವಣೆ ಕಾಂಗ್ರೆಸ್‌ನ ಅಂತರಿಕ ವಿಚಾರ. ಆದರೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ- ಡಿಸಿಎಂ ಹುದ್ದೆ ವಿಚಾರದಲ್ಲಿ  ಬಿಜೆಪಿ ಯಾರ ಪರವೂ ಇಲ್ಲ ಅಥವಾ ಸಿದ್ದರಾಮಯ್ಯ- ಡಿಕೆಶಿ ವಿರುದ್ಧವೂ ಇಲ್ಲ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಈ ವಿವಾದದ ಹಿನ್ನೆಲೆಯಲ್ಲಿ  ಡಿ.ಕೆ.ಶಿವಕುಮಾರ್ ಸಚಿವ- ಶಾಸಕರಿಗೆ ಹುಷಾರ್ ಎಂಬ ಎಚ್ಚರಿಕೆ ಕೊಟ್ಟರು. ಆದರೆ, ಸಿದ್ದರಾಮಯ್ಯ ಅವರು ಮೌನ ತಾಳಿದ್ದಾರೆ. ಡಿಸಿಎಂ ಬಗ್ಗೆ ಚರ್ಚಿಸಬೇಡ ಎಂದು ಸಿಎಂ ಯಾರಿಗೂ ಹೇಳಿಲ್ಲ ಏಕೆ?. ಇದರ ಹಿಂದಿನ ಮರ್ಮವೇನು?. ಎಂದು ಪ್ರಶ್ನಿಸಿದರು.