ಸಾಂದರ್ಭಿಕ ಚಿತ್ರ ಬೆಂಗಳೂರು: ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ದುಲ್‍ಹಜ್ ತಿಂಗಳ ಪ್ರಥಮ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಜೂ.17ರಂದು ಬಕ್ರೀದ್(ಈದುಲ್ ಅಝ್‍ಹಾ) ಆಚರಿಸಲು ಅಮೀರೆ ಶರೀಅತ್ ಕರ್ನಾಟಕ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಮೋಡ ಕವಿದ ವಾತಾವರಣದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಚಂದ್ರ ದರ್ಶನವಾಗಲಿಲ್ಲ. ಆದರೆ, ಪಾಂಡಿಚೇರಿ, ತಮಿಳುನಾಡಿನ ಪರಂಗಿಪೇಟೆ, ಗುಜರಾತ್‍ನ ಲೂನವಾಡ, ನಡ್ಯಾಡ್, ಅಜ್ರಾಕ್‍ಪುರ್ ಮಂಗ್ರೋಲ್, ಕಚ್ ಸೇರಿದಂತೆ ಇನ್ನತರೆಡೆ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜೂ.17ರಂದು ಈದುಲ್ ಅಝ್‍ಹಾ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಚಂದ್ರ ದರ್ಶನ ಸಮಿತಿಯ ಸದಸ್ಯ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.  