ಉಡುಪಿ : ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಾವು ನಿಲ್ಲಿಸುವುದಿಲ್ಲ. ರಾಜ್ಯದ ಬಡವರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಹೊರತು ರಾಜಕಾರಣಕ್ಕಾಗಿ ಅಲ್ಲ. ಪಟ್ಟಣ ಪ್ರದೇಶದವರಿಗಿಂತ ಗ್ರಾಮೀಣ ಪ್ರದೇಶದ ಬಡವರು, ಕೂಲಿ ಕಾರ್ಮಿಕರಿಗೆ ಈ ಯೋಜನೆಗಳಿಂದ ಹೆಚ್ಚು ಅನುಕೂಲ ಆಗುತ್ತದೆ ಎಂಬುದು ನಮ್ಮ ಭಾವನೆಯಾಗಿದೆ. ಅದಕ್ಕಾಗಿ ಈ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಳೆದ ವರ್ಷ 3.27ಲಕ್ಷ ಕೋಟಿ ಬಜೆಟ್ ಇತ್ತು. ಈ ಬಾರಿ 3.7ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಲಾಗಿದೆ. ಈ ಮೂಲಕ ನಮ್ಮ ಬಜೆಟ್‌ನಲ್ಲಿ ಏರಿಕೆಯಾಗಿದೆ. ಹಾಗಾಗಿ ಈ ಯೋಜನೆಗಳಿಗೆ ಹಣಕಾಸಿನ ಯಾವುದೇ ತೊಂದರೆ ಆಗುವುದಿಲ್ಲ. ಅದನ್ನು ಮುಂದುವರೆಸುತ್ತೇವೆ. ಕಳೆದ ವರ್ಷ ನಮ್ಮ ಬಜೆಟ್‌ನಲ್ಲಿ ಎಂಟು ತಿಂಗಳಿಗೆ ಮಾತ್ರ ಸೀಮಿತವಾಗಿದೆ. ಈ ಬಾರಿ ಸಂಪೂರ್ಣ ಬಜೆಟ್ ಮಂಡಿಸಲಾಗಿದೆ. ಅದರಲ್ಲಿ ಕಾರ್ಯಕ್ರಮಗಳಿಗೆ ಹಣ ಬಿಡುಗಡೆಯಾಗುತ್ತದೆ" ಎಂದರು.  ಲೋಕಸಭಾ ಚುನಾವಣೆಯಲ್ಲಿ ನಾವು ಬಹಳಷ್ಟು ಕಡೆ ಸೋತಿದ್ದೇವೆ. ಈ ಸೋಲಿನ ವಿಶ್ಲೇಷಣೆ ಹಾಗೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಈಗಾಗಲೇ ಮಾತುಕತೆ ನಡೆಸಿದ್ದೇವೆ. ಎಲ್ಲಿ ನಾವು ಸೋತಿದ್ದೇವೆ ಮತ್ತು ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಒಂದು ವರ್ಷದ ಆಡಳಿತದಲ್ಲಿ ಜನ ಸಮುದಾಯಕ್ಕೆ ಬೇಕಾದ ಬಡತನ ನಿಮೂರ್ಲನೆ ಮಾಡುವ ಗ್ಯಾರಂಟಿ ಮೂಲಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗಳು ಜನರಿಗೆ ತಲುಪಿದೆ ಎಂದು ಅವರು ತಿಳಿಸಿದರು.  ಈ ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ದೃಷ್ಠಿಯಿಂದ ಮಾಡದೇ ಇದ್ದರೂ ಸ್ವಾಭಾವಿಕ ರಾಜಕೀಯಕ್ಕೆ ಅನುಕೂಲ ಆಗಹಬಹುದೆಂಬ ಊಹೆ ಮಾಡಿದ್ದೇವು. ಆದರೆ ಎಷ್ಟರ ಮಟ್ಟಿಗೆ ಆಗಿದ್ದೇವೆ ಎಂಬುದರ ಬಗ್ಗೆ ನಾವು ವಿಶ್ಲೇಷಣೆ ಮಾಡಬೇಕಾಗಿದೆ. ನಿನ್ನೆ ನಾನು, ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲರೂ ಚರ್ಚೆ ಮಾಡಿದ್ದೇವೆ. ಅಲ್ಲಿ ಹಿರಿಯರು ಅನುಭವಿಗಳ ಸಮಿತಿ ರಚಿಸಿ ಇದರ ಆತ್ಮವಲೋಕಾನ ಮಾಡಿಕೊಕೊಳ್ಳಬೇಕು ಎಂದು ಅನೇಕ ಸಚಿವರು ಸಲಹೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ಏನು ತೀರ್ಮಾನ ಮಾಡುತ್ತಾರೆಂಬುದು ನೋಡಬೇಕು ಎಂದರು.ಗೂಳಿಹಟ್ಟಿ ಶೇಖರ್ ದೂರು ಕೊಟ್ಟರೆ, ತನಿಖೆ ಮಾಡುತ್ತೇವೆ ;ಹಿಂದಿನ ಸರಕಾರದ ಅವಧಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಭೋವಿ ನಿಗಮದಲ್ಲಿ 100ಕೋಟಿ ರೂ. ಹಗರಣ ಆಗಿದೆ ಎಂಬ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪದ ಬಗ್ಗೆ ಪ್ರತ್ರಿಕಿಯಿಸಿದ  ಗೃಹ ಸಚಿವರು, ನಮಗೆ ಯಾರಾದರೂ ದೂರು ಕೊಡಬೇಕಾಗುತ್ತದೆ. ಅಂತಹ ದೂರು ಬಂದರೆ ಹಿಂದಿನ ಸರಕಾರ ಅವಧಿಯ ಹಗರಣಗಳನ್ನು ಕೂಡ ತನಿಖೆ ಮಾಡುತ್ತೇವೆ. ಈಗ ಗೂಳಿಹಟ್ಟಿ ಶೇಖರ್ ಅವರೇ ದೂರು ಕೊಟ್ಟರೆ ಸಾಕು. ನಾವು ತನಿಖೆ ಮಾಡುತ್ತೇವೆ ಎಂದರು.