ಹಾಸನ : ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ರೇವಣ್ಣ ವಿರುದ್ಧ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಮಹಜರು ನಡೆಸಲು ಸಂತ್ರಸ್ತೆಯನ್ನು ಎಸ್‌ಐಟಿ ತಂಡ ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸಕ್ಕೆ ಕರೆ ತಂದಿದೆ.ಹೊಳೆನರಸೀಪುರ ನಗರ ಪೊಲೀಸ್ ಠಾಣಾ ಪೊಲೀಸರ ಸಹಕಾರ ಪಡೆದ ಎಸ್‌ಐಟಿ ತಂಡ ಡಿವೈಎಸ್‌ಪಿ ಸತ್ಯ ನಾರಾಯಣ್ ಸಿಂಗ್, ಸುಮರಾಣಿ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಆಗಮಿಸಿದೆ.ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಲಾಗುತ್ತಿದೆ. ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ವೇಳೆ  ಅಡುಗೆ ಮನೆ, ಬೆಡ್ ರೂಂ ಹಾಗೂ ಸ್ಟೋರ್‌ರೂಂನಲ್ಲಿ ದೌರ್ಜನ್ಯ ನಡೆಸಿದ್ದ ಬಗ್ಗೆ ಮಹಿಳೆ ಆರೋಪಿಸಿದ್ದರು.ಎಚ್.ಡಿ.ರೇವಣ್ಣ ನಿವಾಸದೆದುರು ಬ್ಯಾರಿಕೇಡ್ ಹಾಕಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಎಚ್.ಡಿ.ರೇವಣ್ಣ ಪತ್ನಿ ಭವಾನಿರೇವಣ್ಣ ಅವರು ಮನೆಯಲ್ಲಿ ಹಾಗೂ ರೇವಣ್ಣ ಪರ ವಕೀಲರು ನಿವಾಸದ ಬಳಿಯೇ ಇದ್ದಾರೆ.