ಕಲಬುರಗಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದ್ದು, ಪ್ರಕರಣ ಬಹಳ ಗಂಭೀರವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.ಗುರುವಾರ ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ʼಇಂತಹ ಸೂಕ್ಷ್ಮ ವಿಚಾರದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದು ಕಷ್ಟ. ಮೊದಲು ಸಂತ್ರಸ್ತೆ ಮಹಿಳೆ ಬಂದು ದೂರು ಕೊಡಬೇಕು ಎಂದ ಅವರು, ಪ್ರಜ್ವಲ್ ರೇವಣ್ಣ ಡಿಪ್ಲೊಮೆಟಿಕ್ ಪಾಸ್ ಪೋರ್ಟ್‌ ಮೂಲಕ ವಿದೇಶಕ್ಕೆ ಹೋಗಿದ್ದು ಸತ್ಯ, ಕೇಂದ್ರ ಸರಕಾರ ಡಿಪ್ಲೊಮೆಟಿಕ್ ಪಾಸ್ ಪೋರ್ಟ್‌ ಕೊಟ್ಟಿದೆ. ಹೀಗಾಗಿ ರಾತ್ರೋ ರಾತ್ರಿ ಹೋಗಿದ್ದಾರೆʼ ಎಂದು ಹೇಳಿದರು.ಎಸ್‌ಐಟಿಯಿಂದ IPC 41A ಜಾರಿ‌ಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ಬಳಿಕ ಕೂಡಲೇ ಬಂದು ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ ಅವರನ್ನು ಬಂಧಿಸಬೇಕಾಗುತ್ತದೆ ಎಂದರು.ರೇವಣ್ಣ ಅವರು ಇಂದು ಅಧಿಕಾರಿಗಳ ಮುಂದೆ ಹಾಜರಾಗುತ್ತೆನೆ ಎಂದು ಹೇಳಿದ್ದಾರೆ. ಲುಕ್ ಔಟ್ ನೋಟಿಸ್ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಅವರು ವಕೀಲರ ಮೂಲಕ 6 ದಿನ ಕಾಲಾವಕಾಶ ಕೇಳಿದ್ದಾರೆ. ನಿನ್ನೆ ಮತ್ತೊಬ್ಬ ಮಹಿಳೆ ಒಂದು ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.ಅಂಬೇಡ್ಕರ್ ಮೂರ್ತಿಗೆ ಅಪಮಾನ ಮಾಡಿದ ಪ್ರಕರಣ ಸಿಐಡಿಗೆಕಲಬುರಗಿಯ ಕೊಟನೂರ (ಡಿ) ಬಡಾವಣೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆ ಆಗಿರುವ ಆರೋಪಿಗಳ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿರುವ ಘಟನೆಯನ್ನು ಸಿಐಡಿ ತನಿಖೆಗೆ ಒಪ್ಪಿಸುವ ಚಿಂತನೆ ನಡೆದಿದೆ ಎಂದು ಪರಮೇಶ್ವರ್ ಹೇಳಿದರು. ಮೂರು ತಿಂಗಳ‌ ಹಿಂದೆ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದ ಆರೋಪಿ ಬಿಡುಗಡೆಯಾಗಿ ಬಂದಿದ್ದು, ಅವನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನನಗೂ ನಿನ್ನೆ ಗೊತ್ತಾಗಿದೆ. ಆರೋಪಿ ಸಂಗಮೇಶ್ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಈ ಪ್ರಕರಣ ಸಿಐಡಿಗೆ ವಹಿಸುತ್ತೆವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶರಣಪ್ರಕಾಶ್ ಪಾಟೀಲ್ ಇದ್ದರು.