Photo:fb.com/basavarajbommai ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಸಿಗುತ್ತಿಲ್ಲ. ಸಚಿವರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ  ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿನೂತನ ರೀತಿಯಾಗಿದೆ.  ಲಕ್ಷಾಂತರ ಜನರಿಗೆ ಆರೋಗ್ಯ ಕಾಪಾಡಿದ ಡಾ. ಮಂಜುನಾಥ್ ಮತ್ತು ಮಹಾರಾಜ ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಸಂದೇಶ ನೀಡಿದಂತಾಗಿದೆ ಎಂದು.  ದಕ್ಷಿಣ ಭಾರತದಲ್ಲಿ ಅಭಿವೃದ್ಧಿ ಆಗಿದ್ದರೆ ಅದಕ್ಕೆ ಒಡೆಯರ್ ಅವರು ಕಾರಣ. ಅವರು ಹಿಂದುಳಿದ ವರ್ಗದವರ ಅಭಿವೃದ್ಧಿ ಮಾಡಿದ್ದಾರೆ. ಆ ಮನೆತನಕ್ಕೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕಕ್ಕೆ ಸಂತಸ ತಂದಿದೆ. ಹಳೆ ಬೇರು, ಹೊಸ ಚಿಗುರಿಗೂ ಅವಕಾಶ ನೀಡಿದೆ. ಈ ರೀತಿ ನಿರ್ಣಯ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್ ನಲ್ಲಿ ಆ ಪರಿಸ್ಥಿತಿ ಇಲ್ಲ ಎಂದರು.ಕಾಂಗ್ರೆಸ್ ನಲ್ಲಿ ಸಚಿವರೂ ಸೋಲುವ ಭಯದಲ್ಲಿ ಇದ್ದಾರೆ. ಟಿಕೆಟ್ ಸಿಗದ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನುವುದು ಡಿಸಿಎಂ ಡಿಕೆಶಿವಕುಮಾರ್ ಅವರ ಚಾಳಿಯಾಗಿದೆ. ಅವರ ಪಕ್ಷದಲ್ಲೇ ಸ್ಪರ್ಧಿಸಲು ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದರು.