ಬೆಂಗಳೂರು: ಅಕ್ರಮವಾಗಿ ದುಬೈಗೆ ಸಾಗಿಸುತ್ತಿದ್ದ ₹7.77 ಕೋಟಿ ಮೌಲ್ಯದ 8,053 ಕ್ಯಾರೆಟ್‌ ತೂಕದ ವಜ್ರಗಳು, ₹4.62 ಲಕ್ಷ ಮೊತ್ತದ ವಿದೇಶಿ ಕರೆನ್ಸಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಡಿಆರ್‌ಐ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.ಚಿಕ್ಕಬಳ್ಳಾಪುರ ಮೂಲದವರಾದ ಆರೋಪಿಗಳಿಬ್ಬರು ಮುಂಬೈನಿಂದ ಬೆಂಗಳೂರಿಗೆ ತಂದಿದ್ದ ವಜ್ರಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಚಾಕೊಲೇಟ್‌ ಪ್ಯಾಕ್‌ನಲ್ಲಿ ಬಚ್ಚಿಟ್ಟು ದುಬೈಗೆ ಸಾಗಿಸಲು ಯತ್ನಿಸಿದ್ದರು ಎಂದು ವೈಮಾನಿಕ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ತಿಳಿಸಿದ್ದಾರೆ.ಜ.10 ರಂದು ಅಕ್ರಮ ಸಾಗಾಟದ ಬಗ್ಗೆ ವೈಮಾನಿಕ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ದುಬೈಗೆ ಹಾರಲು ಸಿದ್ಧವಾಗಿದ್ದ ವಿಮಾನದಲ್ಲಿ ಅಧಿಕಾರಿಗಳ ತಂಡ ತಪಾಸಣೆ ನಡೆಸಿತ್ತು. ಈ ವೇಳೆ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಚಾಕೊಲೇಟ್‌ ಪ್ಯಾಕ್‌ನಲ್ಲಿ ಅಡಗಿಸಿ ಇಡಲಾಗಿದ್ದ ವಜ್ರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೈದರಾಬಾದ್‌ ವಿಮಾನ ನಿಲ್ದಾಣದಿಂದ ಕಳ್ಳ ಸಾಗಣೆ ಜಾಲದ ಮತ್ತಿಬ್ಬರು ಇನ್ನಷ್ಟು ವಜ್ರಗಳನ್ನು ದುಬೈಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ  ಲಭ್ಯವಾಗಿದೆ. ತಕ್ಷಣವೇ ಹೈದರಾಬಾದ್‌ ಗುಪ್ತಚರ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದು,  ಅದೇ ದಿನ ಬೆಳಿಗ್ಗೆ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ₹6.03 ಕೋಟಿ ಬೆಲೆಬಾಳುವ ವಜ್ರಗಳು ಹಾಗೂ ₹9.83 ಲಕ್ಷ ಮೊತ್ತದ ವಿದೇಶಿ ಕರೆನ್ಸಿ ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 