ಬೆಂಗಳೂರು ಜ 10: ಕೃಷಿ ಇಲಾಖೆಯಲ್ಲಿ ಏಕ ಕಾಲಕ್ಕೆ 306 ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆ  ಗಮನಿಸಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಎಲ್ಲಾ ಅರ್ಹರಿಗೆ ಪದೋನ್ನತಿ ನೀಡುವಂತೆ ಸೂಚಸಿ, ಅಂತಿಮ ಪಟ್ಟಿ ಸಿದ್ದಪಡಸಿ ಅನುಮೋದನೆ ನೀಡಿದ್ದಾರೆ. ಇದರಲ್ಲಿ  ಕಲ್ಯಾಣ ಕರ್ನಾಟಕ ಹುದ್ದೆಗಳಿಗೂ  ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷವಾಗಿದೆ.ಕೃಷಿ ಸಚಿವರ  ಆದೇಶದಂತೆ ಇತ್ತಿಚೆಗೆ 248 ಸಹಾಯಕ ಕೃಷಿ ಅಧಿಕಾರಿಗಳಿಗೆ ಕೃಷಿ ಅಧಿಕಾರಿಗಳ ಹುದ್ದೆಗೆ  ಬಡ್ತಿ ನೀಡಿದನ್ನು ಇಲ್ಲಿ  ಸ್ಮರಿಸಬಹುದಾಗಿದ್ದು ಎನ್. ಚಲುವರಾಯಸ್ವಾಮಿ  ಅವರು ಕೃಷಿ ಸಚಿವರಾದ ನಂತರ  ಕಳೆದ 6 ತಿಂಗಳ‌ ಒಳಗಾಗಿ  550 ಕ್ಕೂ ಅಧಿಕ ಅಧಿಕಾರಿಗಳಿಗೆ  ಮುಂಬಡ್ತಿ  ಸಿಕ್ಕಂತಾಗಿದೆ.ಇದಲ್ಲದೆ ಕೃಷಿ ಇಲಾಖೆಯಲ್ಲಿ ಖಾಲಿ ಇರುವ  ಸಾವಿರಕ್ಕೂ ಅಧಿಕ ವಿವಿಧ  ತಾಂತ್ರಿಕ (ಕೃಷಿ ಅಧಿಕಾರಿ) ಹುದ್ದೆಗಳನ್ನು ತುಂಬಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಂತದಲ್ಲಿದೆ. 