ಬೆಂಗಳೂರು: ಮಹಿಳೆಯರನ್ನು ತುಚ್ಛೀಕರಿಸುವ ಹಾಗೂ ಭೋಗದ ವಸ್ತುವಾಗಿ ನೋಡುವ ಬಿಜೆಪಿಯ ಸೂತ್ರದಾರರ ಹೀನ ಮನಸ್ಥಿತಿಗೆ ಕಲ್ಲಡ್ಕ ಪ್ರಭಾಕರ್ ಭಟ್ ನೀಡಿದ ಹೇಳಿಕೆಯೇ ಸಾಕ್ಷಿ ಎಂದು ಕಾಂಗ್ರೆಸ್‌ ಮುಖಂಡ ಬಿ ಕೆ ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.ಈ ಕುರಿತು ʼಎಕ್ಸ್ʼ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಅವರು,"ಪ್ರಭಾಕರ್ ಭಟ್ ಹೇಳಿಕೆಯನ್ನು ಅತ್ಯಂತ ಕಟು ಪದಗಳಲ್ಲಿ ಖಂಡಿಸುತ್ತೇನೆ. ಈ ಕೂಡಲೇ ಸರ್ಕಾರವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.ʼಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯರ ಘನತೆಯನ್ನು ರಕ್ಷಿಸುವ ಹೊಣೆಗಾರಿಕೆ ಹಾಗೂ ಸರ್ವ ಜನಾಂಗದ ಶಾಂತಿಯ ತೋಟದ ಸೌಂದರ್ಯವನ್ನ ಉಳಿಸುವ ಭರವಸೆ ನೀಡಿದ್ದೇವೆ. ಅದನ್ನ ಉಳಿಸುವ ಜವಾಬ್ದಾರಿ ಮರೆಯಬಾರದುʼ ಎಂದು ರಾಜ್ಯ ಸರಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.ಆಳುವ ಸರಕಾರ, ಸಮಾಜವನ್ನು ಒಡೆಯುವ ವಿಚ್ಛದ್ರಕಾರಿ ಶಕ್ತಿಗಳನ್ನು ಮಟ್ಟ ಹಾಕಬೇಕು. ಯಾವುದೇ ರಾಜಿ ಮುಲಾಜಿಗೆ ಒಳಗಾಗದೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. 