ತುಮಕೂರು: ಆರನೇ ತರಗತಿಯ  ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪದಲ್ಲಿ ಶಿಕ್ಷಕನನ್ನು ಬಂಧಿಸಿರುವ ಘಟನೆ ತಾಲೂಕಿನ ಹೆಬ್ಬೂರು ನರಸಾಪುರದಲ್ಲಿ ನಡೆದಿದೆ.ಆರೋಪಿ ಶಿಕ್ಷಕನನ್ನು ರವೀಂದ್ರ ಎಂದು ಗುರುತಿಸಲಾಗಿದೆ. ನರಸಾಪುರದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಾಖಲಾಗಿದ್ದ 6 ನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ, ಕಳೆದ ಆಗಸ್ಟ್ ತಿಂಗಳಿಂದಲೇ ಸಮಾಜಶಾಸ್ತ್ರ ಶಿಕ್ಷಕನಾಗಿದ್ದ ಈತ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದ ಎಂದು ಆರೋಪಿಸಲಾಗಿದೆ.ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ವಿದ್ಯಾರ್ಥಿನಿ ಪ್ರಾಂಶುಪಾಲೆ ಹಾಗೂ ಶಿಕ್ಷಕಿಯರಿಗೆ ಮಾಹಿತಿ ನೀಡಿದ್ದಲ್ಲದೇ  ತನ್ನ ಸೋದರ ಮಾವನೊಂದಿಗೆ ಹೋಗಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ನಡೆದ ವೆಲ್ಕಮ್ ಪಾರ್ಟಿಯಲ್ಲಿ  ಸೀರೆಯುಟ್ಟು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಆರೋಪಿ ರವೀಂದ್ರ ವಿದ್ಯಾರ್ಥಿನಿಯೊಂದಿಗೆ ʼಸೀರೆಯಲ್ಲಿ ಚೆನ್ನಾಗಿ ಕಾಣಿಸುತ್ತಿದ್ದೆ, ಮುಂದಿನ ಜನ್ಮದಲ್ಲಿ ಮದುವೆಯಾದರೆ ನಿನ್ನನ್ನೇ ಆಗುತ್ತೇನೆʼ ಎಂದು ಹೇಳಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.   