ಕಲಬುರಗಿ, ಡಿ 07: ಕಾರು ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ನನ್ನು ಚೌಕ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಸಚಿವ ಪ್ರಿಯಾಂಕ್ ಖರ್ಗೆ ಅವರು ತನ್ನ ಮೇಲೆ‌ ಮಾಡಿದ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಗೂ ಮುನ್ನವೇ ತನ್ನ ಫ್ಲ್ಯಾಟ್ ಇರುವ ಹುಮನಾಬಾದ್ ರಿಂಗ್ ರಸ್ತೆಯ ಭಾರತ್ ಪ್ರೈಡ್ ಅಪಾರ್ಟ್‌ ಮೆಂಟ್ ನಲ್ಲಿದ್ದ ಮಣಿಕಂಠ ರಾಠೋಡ್ ನನ್ನು ಪತ್ರಕರ್ತರೊಂದಿಗೆ ಮಾತನಾಡಲೂ ಅವಕಾಶ ಕೊಡದೇ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.ಮಣಿಕಂಠ ರಾಠೋಡ್​ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ  ಸತ್ಯಾಂಶ ಬೆಳಕಿಗೆ ಬಂದಿತ್ತು. ಕಾರು ಅಪಘಾತದಲ್ಲಿ ಆದ ಗಾಯವನ್ನು ಹಲ್ಲೆ ಎಂದು ಬಿಂಬಿಸಲಾಗಿದೆ ಎಂದು ರಾಠೋಡ್‌ ಬೆಂಬಲಿಗ ತಿಳಿಸಿದ್ದ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಪ್ರಿಯಾಂಕ್ ‌ಖರ್ಗೆ ಅವರು, ಮಣಿಕಂಠ ರಾಠೋಡ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೇ ವಿನಾಕಾರಣ ನಮ್ಮ ಪಕ್ಷದ ಮುಖಂಡರನ್ನು ಟೀಕಿಸಿದ್ದಾರೆ ಎಂದು ತಿಳಿಸಿದ್ದರು.ಕಾರು ಅಪಘಾತದಲ್ಲಿ ಅದ ಗಾಯವನ್ನು ಮಣಿಕಂಠ‌, ಕಾಂಗ್ರೆಸ್ ಮುಖಂಡರ ಹಲ್ಲೆಯಿಂದ ಆಗಿದೆ. ಇದರಲ್ಲಿ ನನ್ನ ಕೈವಾಡವಿದೆ  ಎಂದು ಆರೋಪಿಸಿದ್ದ. ಇದು ಸುಳ್ಳು ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿಕೆ ನೀಡಿದ್ದರು.