ಚಾಮರಾಜನಗರ : ಕೆಎಸ್ಸಾರ್ಟಿಸಿ ಬಸ್ ಚಾಲನೆ ಮಾಡುವಾಗ ಚಾಲಕನಿಗೆ ಫಿಟ್ಸ್‌ (ಮೂರ್ಛೆ ರೋಗ) ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಬಸ್ ಢಿಕ್ಕಿ ಹೊಡೆದಿರುವ ಘಟನೆ ರವಿವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪುದು ರಾಮಪುರದಲ್ಲಿ ನಡೆದಿದೆ.  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ ಹೊರಟ ಕೆಎಸ್ಸಾರ್ಟಿಸಿ ಬಸ್ಸೊಂದು ಹನೂರು ತಾಲ್ಲೂಕಿನ ಪುದು ರಾಮಪುರ ಬಳಿ ಬಸ್ ಚಾಲಕ   ಸುಭಾಷ್ ಚಾಲನೆ ಮಾಡುತ್ತಿದ್ದಾಗಲೇ ಏಕಾಏಕಿ ಮೂರ್ಛೆ ರೋಗ ಕಾಣಿಸಿಕೊಂಡು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.ಇದರಿಂದ ಚಲಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ನಿಂತುಕೊಂಡಿದೆ. ಆದರೆ,  ಆ ಸಮಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಇನ್ನು ಬಸ್ಸಿನಲ್ಲಿ ನಿರ್ವಾಹಕ ಮತ್ತು ಓರ್ವ ಪ್ರಯಾಣಿಕ ಮಾತ್ರ ಇದ್ದಿದ್ದರಿಂದ ಅದೃಷ್ಟವಶಾತ್ ಹೆಚ್ಚಿನ ಅನಾಹುತ ನಡೆದಿಲ್ಲ ಎಂದು ತಿಳಿದು ಬಂದಿದೆ.ಚಾಲಕ ಸುಭಾಶ್ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.