ಮೈಸೂರು: ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತಿ ಪಡೆದಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಋಷಿಕುಮಾರ ಸ್ವಾಮೀಜಿ ಈ ವಿಡಿಯೋದಲ್ಲಿ “ರಾಹುಲ್ ಗಾಂಧಿ ಓರ್ವ ಬುದ್ಧಿಮಾಂದ್ಯ, ಅಂಗವಿಕಲ” ಎಂದು ಹೇಳಿಕೆ ನೀಡಿದ್ದಾರೆ.ವೈರಲ್ ಆಗಿರುವ ವಿಡಿಯೋದಲ್ಲಿ ಋಷಿಕುಮಾರ ಸ್ವಾಮಿ  ರಾಹುಲ್ ಗಾಂಧಿ ಅವರನ್ನು ಮಹಾಭಾರತದ ಧೃತರಾಷ್ಟ್ರಗೆ ಹೋಲಿಸಿದ್ದಾರೆ. ಧೃತರಾಷ್ಟ್ರ ಒಬ್ಬ ಅಂಗವಿಕಲನಾದ ಕಣ್ಣು ಕಾಣದ ದೊರಯಾಗಿದ್ದ, ಆದರೂ ಅವನಿಗೆ ಅಧಿಕಾರ ನೀಡಲಾಗಿತ್ತು. ಇದರಿಂದ ಮಹಾಭಾರತವೇ ನಡೆದು ಹೋಯಿತು ಎಂದು ಹೇಳಿದ ಅವರು, ಆಗ ಆಗಿದ್ದೇ ಸಾಕು. ಈಗ ಒಬ್ಬ ಬುದ್ಧಿಮಾಂದ್ಯನನ್ನು ಪ್ರಧಾನಿಯನ್ನಾಗಿ ಮಾಡಲು ಸಾಧ್ಯವೇ ಇಲ್ಲ. ಸನಾತನ ಧರ್ಮದಲ್ಲಿ ಇದಕ್ಕೆ ಒಪ್ಪಿಗೆಯಿಲ್ಲ. ಆದರೂ ರಾಹುಲ್ ಗಾಂಧಿ ಬಗ್ಗೆ ನನಗೆ ಅನುಕಂಪವಿದೆ ಎಂದಿದ್ದಾರೆ.ಮತ್ತೆ ಮುಂದುವರಿದು ಆ ದೇವರು ರಾಹುಲ್ ಗಾಂಧಿಗೆ ಯಾಕೆ ಬುದ್ದಿ ಕೊಡಲಿಲ್ಲ? ಮುಂದಿನ ಜನ್ಮದಲ್ಲಿ ದೇವರು ಅವರಿಗೆ ಬುದ್ದಿ ಶಕ್ತಿ ನೀಡಲಿ. ಆದರೆ ರಾಹುಲ್ ಗಾಂಧಿ ಈಗ ಒಬ್ಬ ಬುದ್ಧಿಮಾಂದ್ಯ ವ್ಯಕ್ತಿಯಾಗಿದ್ದಾರೆ. ಆದರೆ ಆತನ ತಾಯಿಗೆ ಆತನನ್ನು ಕಂಡರೆ ಬಲು ಇಷ್ಟ. ನನ್ನ ಮಗ ಬುದ್ದಿವಂತ ಎಂದು ಅಂದುಕೊಂಡಿದ್ದಾರೆ ಎಂದು  ಮಾತನಾಡಿದ್ದಾರೆ.