ತುಮಕೂರು, ನ.26: ಬೋರ್ ವೆಲ್ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ  ಭೀಕರ ರಸ್ತೆ ಅಪಘಾತದಲ್ಲಿ ದ.ಕ. ಜಿಲ್ಲೆಯ  ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿ 33 ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಬಳಿ ಇಂದು (ನ.26) ಮುಂಜಾನೆ ಸಂಭವಿಸಿದೆ.ಮೃತರನ್ನು ಬಜ್ಪೆ ಮೂಲದ ಕಿಶೋರ್ ಶೆಟ್ಟಿ(35) ಮತ್ತು ಫಿಲೀಪ್ ಮೇರಿ ಲೋಬೋ (34)  ಎಂದು ಗುರುತಿಸಲಾಗಿದೆ.  ನಿತೀಶ್ ಭಡಾರಿ(35), ಪ್ರೀತಿ ಲೋಬೋ(29) ಮತ್ತು ಹರೀಶ್(62) ಎಂಬವರು ತೀವ್ರವಾಗಿ ಗಾಯಗೊಂಡು ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಬೆಂಗಳೂರಿನಲ್ಲಿ ನಡೆಯುತ್ತಿರುವ 'ಬೆಂಗಳೂರು ಕಂಬಳ'ವನ್ನು ನೋಡಿಕೊಂಡು ಮಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ರಾತ್ರಿ 1:15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರು ನೆಲಮಂಗಲ  ಹಾಗೂ ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೆ ದಾರಿತಪ್ಪಿ ತುಮಕೂರಿಗೆ ಹೋಗಿದ್ದಾರೆ. ಬಳಿಕ ಅಲ್ಲಿಂದ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ನಿಂದ  ಮಂಗಳೂರಿಗೆ ತೆರಳುತ್ತಿರ ಬೇಕಾದರೆ ಇವರು ಸಂಚರಿಸುತ್ತಿದ್ದ ಕಾರಿಗೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೊಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.  ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.  