Photo: twitterಬೆಂಗಳೂರು: ಅಧ್ಯಕ್ಷ ಹುದ್ದೆಯ ಬದಲಾವಣೆಯನ್ನೇ ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗದೆ ಅಸಹನೆ, ವೈಮನಸ್ಸು ಸ್ಫೋಟವಾಗಿದೆ. ಇನ್ನು  ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿದರೆ ಬಿಜೆಪಿ ಛಿದ್ರ ಛಿದ್ರವಾಗುವುದು ಖಂಡಿತ ಎಂದು ಕಾಂಗ್ರೆಸ್‌ ಹೇಳಿದೆ.ಬಿ.ವೈ. ವಿಜಯೇಂದ್ರ ಅವರ ಅಧಿಕಾರ  ಸ್ವೀಕಾರ ಕಾರ್ಯಕ್ರಮಕ್ಕೆ ಬಿಜೆಪಿಯ  ಹಲವು ನಾಯಕರು ಗೈರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್‌ ಮಾಡಿದೆ.ನಾಯಕತ್ವವಿಲ್ಲದ ಬಿಜೆಪಿಯಲ್ಲಿ ಈಗ ಎಲ್ಲರೂ ನಾನೇ ನಾಯಕ ಎಸಿಕೊಳ್ಳಬೇಕು ಎಂಬ ಹಪಹಪಿಯಲ್ಲಿ ಬಿದ್ದಿದ್ದಾರೆ. ಇಂತಹ ಹೊತ್ತಲ್ಲಿ ವಿರೋಧ ಪಕ್ಷದ ನಾಯಕನಾಗಲು ಸರ್ವಸಮ್ಮತ ಹಾಗೂ ಸಮರ್ಥ ವ್ಯಕ್ತಿ ಬಿಜೆಪಿಗೆ ಈ ಜನ್ಮದಲ್ಲಿ ಸಿಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದೆ.ರಾಜ್ಯಾಧ್ಯಕ್ಷ ಹುದ್ದೆಯ ಘೋಷಣೆಯಾಗಿದ್ದಕ್ಕೆ ಬಿಜೆಪಿಯಲ್ಲಿ ಇಷ್ಟೊಂದು ಆಕ್ರೋಶ, ಅಸಹನೆ ತುಂಬಿ ತುಳುಕುತ್ತಿದೆ. ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆಯಾದರೆ ಬಿಜೆಪಿಯಲ್ಲಿ ಡೈನಾಮೈಟ್ ಬ್ಲಾಸ್ಟ್ ಆಗುವುದು ಖಂಡಿತ! ಈ ಲೋಕಸಭೆ ಚುನಾವಣೆಯಲ್ಲೇ ಕೇಶವ ಕೃಪಾದ ಬಿಜೆಪಿ, ದವಳಗಿರಿಯ ಬಿಜೆಪಿ ನಡುವೆ ಕುರುಕ್ಷೇತ್ರ ಯುದ್ಧ ಶುರುವಾಗುವುದು ಖಚಿತ ಎಂದು ಟೀಕಿಸಿದೆ. 