ಬೆಳಗಾವಿ: ಯೋಧನೋರ್ವನ ಮೇಲೆ ಕಿಡಿಗೇಡಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಗಣೇಶಪುರದಲ್ಲಿ ವರದಿಯಾಗಿದೆ. ಪರುಶುರಾಮ್ ಪಾಟೀಲ್ ಹಲ್ಲೆಗೊಳಗಾದ ಯೋಧ ಎಂದು ತಿಳಿದು ಬಂದಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೂರು ದಿನಗಳ ಹಿಂದೆ  ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನಗರದ ಬಾರ್ ಒಂದರ ಎದುರು ನಡು ರಸ್ತೆಯಲ್ಲೇ ಯೋಧನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕಾಲಿನಿಂದ ಒದ್ದು ಅಲ್ಲಿಂದ ಪರಾರಿಯಾಗಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಯೋಧ ಪರುಶುರಾಮ್ ಜಮ್ಮುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್ ಡಿಟಿವಿ ವರದಿ ಮಾಡಿದೆ. ಇನ್ನು ಯೋಧ ಪರಶುರಾಮ್ ಮದ್ಯ ಸೇವಿಸಿದ್ದು, ರಸ್ತೆಯಲ್ಲಿ  ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು ಎಂದು ಆರೋಪಿಸಿ ದುಷ್ಕರ್ಮಿಗಳ ‍ಗುಂಪು ಯೋಧನನ್ನು ಥಳಿಸಿದೆ ಎಂದು ಹೇಳಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಆರು ಜನರ ವಿರುದ್ಧ ಇಲ್ಲಿನ ಕ್ಯಾಂಪ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. 