ಸಿಸಿಟಿವಿ ದೃಶ್ಯ ಬೆಂಗಳೂರು, ನ.4: ಮಾರಕಾಸ್ತ್ರ ಹಿಡಿದು ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ನಗರದ ಮಾಗಡಿ ರಸ್ತೆ ಪೊಲೀಸ್ ಠಾಣೆಯ ಎಎಸ್‍ಐ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಶನಿವಾರ ಆದೇಶ ಹೊರಡಿಸಿದ್ದಾರೆ.ಅ.25ರಂದು ರಾತ್ರಿ ವಿಜಯ ನಗರದ ಆರ್.ಪಿ.ಸಿ ಲೇಔಟ್ 6ನೇ ಮುಖ್ಯರಸ್ತೆಯಲ್ಲಿ ದಯಾನಂದ್ ಹಾಗೂ ಶಶಿಧರ್ ಎಂಬುವವರ ಮೇಲೆ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಹಲ್ಲೆಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ‌ ಸೆರೆಯಾಗಿದ್ದವು.ಈ ಪ್ರಕರಣ ಹಿನ್ನೆಲೆ ಡಿಸಿಪಿ ಎಸ್.ಗಿರೀಶ್ ಹೆಚ್ಚಿನ ತನಿಖೆ ನಡೆಸಿ ಎಎಸ್‍ಐ ಶ್ರೀನಿವಾಸ್‍ರನ್ನು ಅಮಾನತುಗೊಳಿಸಿ ಆದೇಶದಲ್ಲಿ ತಿಳಿಸಿದ್ದಾರೆ. 