ಜಗ್ಗೇಶ್‌ ಬೆಂಗಳೂರು: ಹುಲಿ ಉಗುರು ಕೊರಳಲ್ಲಿ ಧರಿಸಿದ ಕಾರಣಕ್ಕೆ ನಟ ದರ್ಶನ್‌,  ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರ ಮನೆಗೆ ಅರಣ್ಯಾಧಿಕಾರಿಗಳ ತಂಡ ತೆರಳಿ ಶೋಧ ನಡೆಸಿದ್ದು, ಅಧಿಕಾರಿಗಳಿಗೆ ಕಲಾವಿದರೂ ತಮ್ಮ ಬಳಿಯಿದ್ದ ಹುಲಿ ಉಗುರಿನ ಪೆಂಡೆಂಟ್‌ಗಳನ್ನು ಹಸ್ತಾಂತರಿಸಿದ್ದಾರೆ.ಅದರಂತೆ ಬಿಜೆಪಿ ರಾಜ್ಯ ಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್‌ ಕೂಡ ಹುಲಿಯ ಉಗುರುಗಳನ್ನು ಒಳಗೊಂಡ ಚಿನ್ನದ ಲಾಕೆಟ್‌ ಧರಿಸಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಜಗ್ಗೇಶ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿತ್ತು.ಆ ಬಳಿಕ ನಟ ಜಗ್ಗೇಶ್‌ ಸಹ ತಮ್ಮಲ್ಲಿದ್ದ ಹುಲಿ ಉಗುರಿನ ಲಾಕೆಟ್‌ ಅನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.ಇದೀಗ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಜಗ್ಗೇಶ್‌, ʼʼನನಗೆ 61 ಮುಂದೆ 100 ಆದರೂ ನನ್ನ ಅಮ್ಮ ನನ್ನ ದೇವರು,ನಾನು ಏನು ಕಳೆದುಕೊಂಡರೂ ಸಂಕಟಪಡೋಲ್ಲಾ, ಆದರೆ ನನ್ನ ಅಮ್ಮನ ಕಡೆಪ್ರೀತಿ ಕಳೆದುಕೊಂಡದ್ದು ಶೂನ್ಯದಂತೆ ಆಯಿತು..ತಂದೆತಾಯಿ ಹೃದಯದಲ್ಲಿ ಇರಿಸಿಕೊಂಡ ನನಗೆ ತಂದೆತಾಯಿ ಅನಾಥಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ನಾನಿಗಳಿಗೆ ಪ್ರೀತಿ ಅರಿವಾಗದು! ದೇವರಿದ್ದಾನೆ ಉತ್ತರಿಸಲು ಕಾಲಬರುತ್ತದೆ ನಿಮಗೂʼʼ ಎಂದು ಬರೆದುಕೊಂಡಿದ್ದಾರೆ. ʼಹುಲಿ ಉಗುರಿನ ಲಾಕೆಟ್ ಸರ ಧರಿಸಿದವರ ವಿರುದ್ಧ ಹಲವಾರು ದೂರುಗಳು ಬರುತ್ತಿದ್ದು, ಬಹುತೇಕರಿಗೆ ಕಾನೂನಿನ ಅರಿವಿಲ್ಲ ಎಂಬುದು ವೇದ್ಯವಾಗಿದೆ. ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಸರಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ʼ  - ಈಶ್ವರ ಬಿ. ಖಂಡ್ರೆ - ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವರು 