ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಂವಿಧಾನ ಪೀಠಿಕೆ ಓದು,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಇಲಾಖೆಯ   ಸರ್ಕಾರದ ಪಂಚ ಗ್ಯಾರಂಟಿಗಳನ್ನು ಒಳಗೊಂಡ ಸ್ಥಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು.ವಿವಿಧ ಜಿಲ್ಲೆಗಳ ವಿವಿಧ ಇಲಾಖೆಯ 49 ಸ್ತಬ್ದಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರದರ್ಶನಗೊಂಡಿದ್ದು, ಈ ಬಾರಿ ರಾಜ್ಯ ಸರಕಾರದ ಪಂಚ ಗ್ಯಾರಂಟಿಯ ಯೋಜನೆ ಮತ್ತು ಬೆಂಗಳೂರು ಜಿಲ್ಲೆಯ ಚಂದ್ರಯಾನ-3 ಸ್ತಬ್ಧಚಿತ್ರ ಪ್ರಮುಖ ಆಕರ್ಷಣೆಯಾಗಿದೆ.49 ಸ್ತಬ್ದಚಿತ್ರಗಳ ಪಟ್ಟಿಸ್ತಬ್ಧಚಿತ್ರ ಉಪಸಮಿತಿಯಿಂದ ಅರಮನೆ ವಾದ್ಯಗೋಷ್ಠಿ ಹಾಗೂ ಯುನೆಸ್ಕೋ ಪಟ್ಟಿ ಸೇರಿದ ಬೇಲೂರು-ಹಳೆಬೀಡಿನ ಹೊಯ್ಸಳ ದೇವಾಲಯ, ಸೋಮನಾಥಪುರ ದೇವಾಲಯ, ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಹಾಗೂ ಇತರೆ ಯೋಜನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಬಿಂಬಿಸುವ ಸ್ತಬ್ಧಚಿತ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ಬಿಂಬಿಸುವ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಶ್ರೀ ವಾಲ್ಮೀಕಿ ಚಿತ್ರ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅನ್ನಭಾಗ್ಯ ಯೋಜನೆ, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಶೌರ್ಯ-ನ್ಯಾಯ-ರಕ್ಷಣೆ ಮಾದರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಂಗಾಂಗದಾನ ಹಾಗೂ ಆಶಾಕಿರಣ ಮಾದರಿ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದ ಕ್ಷೀರಭಾಗ್ಯ ಯೋಜನೆ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದಿಂದ ಗೃಹಜ್ಯೋತಿ, ಸೋಲಾರ್‌ ಪಂಪಸೆಟ್‌, ಗ್ರಾಹಕರ ಸಲಹಾ ಸಮಿತಿ,ಇ.ವಿ.ಚಾರ್ಜರ್‌ ಪಾಯಿಂಟ್‌, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ಶತಮಾನೋತ್ಸವ ಸಂಭ್ರಮ, ಪ್ರವಾಸೋದ್ಯಮ ಇಲಾಖೆಯ ಲಕ್ಕುಂಡಿ ಬ್ರಹ್ಮ ಜೀನಾಲಯ, ಕಾವೇರಿ ನೀರಾವರಿ ನಿಗಮದ ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ, ವಾಕ್‌ ಮತ್ತು ಶ್ರವಣ ಸಂಸ್ಥೆಯ ಆಯುಷ್‌ ಕೊಡುಗೆಗಳು, ಡಾ.ಬಾಬಾ ಸಾಹೇಬ್‌ ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉತ್ಪನ್ನಗಳು, ಚರ್ಮ ಕುಶಲಕರ್ಮಿಗಳ ಜೀವನ, ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಓದು ಕಡ್ಡಾಯ ಹಾಗೂ ಅಂಬೇಡ್ಕರ್‌ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಸಂವಿಧಾನ ಪೀಠಿಕೆ ಓದು ಕಡ್ಡಾಯದ ಮಾದರಿ ಸ್ತಬ್ಧಚಿತ್ರಗಳಿದ್ದವು. 