ಬೆಂಗಳೂರು:  ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಅಲ್ಲಿನ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ಹಾಗು ಬಿಜೆಪಿ ಪಾಲಿಗೆ ದೊಡ್ಡ ಮುಜುಗರವಾಗಿ ಮಾರ್ಪಟ್ಟಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ಪರಶುರಾಮನ ಪ್ರತಿಮೆಯೇ ನಾಪತ್ತೆಯಾಗಿದ್ದು, ಇದೀಗ ಕಾರ್ಕಳದ ಬಿಜೆಪಿ ಶಾಸಕ ಸುನಿಲ್‌ ಕುಮಾರ್ ಕೂಡ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ. ಈ ಸಂಬಂಧ ಬಿಜೆಪಿ ಶಾಸಕ ಸುನಿಲ್‌ ಕುಮಾರ್ ಅವರ ಭಾವಚಿತ್ರವುಳ್ಳ ಪೋಸ್ಟರ್‌ ಅನ್ನು ಹಂಚಿಕೊಂಡಿರುವ ಕಾಂಗ್ರೆಸ್‌, ʼʼಫೈಬರ್ ಮೂರ್ತಿಯನ್ನು ಕಂಚು ಎಂದು ಇಡೀ ಕರ್ನಾಟಕದ ಜನರ ಕಿವಿ ಮೇಲೆ ಫ್ಲವರ್ ಇಟ್ಟುರುವ ಬಿಜೆಪಿ ತಾನು ಲೂಟಿ ಹೊಡೆಯಲು ಯಾವ ಕೆಳ ಮಟ್ಟಕ್ಕೆ ಬೇಕಿದ್ದರೂ ಇಳಿಯಬಲ್ಲದು ಎಂದು ತೋರಿಸಿಕೊಟ್ಟಿದೆʼʼ ಎಂದು ಕಿಡಿಕಾರಿದೆ. ʼʼಮೂರ್ತಿಯಲ್ಲಿ ಕಂಚನ್ನು ಹಾಗೂ ಶಾಸಕರನ್ನು ಹುಡುಕಿದವರಿಗೆ ಸೂಕ್ತ ಬಹುಮಾನವಿದೆʼʼ ಎಂದು ಪೋಸ್ಟರ್‌ ನಲ್ಲಿ ಉಲ್ಲೇಖಿಸಲಾಗಿದೆ.  ʼʼಫೈಬರ್ ಪ್ರತಿಮೆ ತೋರಿಸಿ ಕಂಚು ಎಂದರೆ ಒಪ್ಪಲಾಗದುʼʼʼʼಬಿಜೆಪಿಯ ಭ್ರಷ್ಟಾಚಾರ ಪರಶುರಾಮನನ್ನೂ ಬಿಡಲಿಲ್ಲ, ಧರ್ಮ ದ್ರೋಹಿ ಬಿಜೆಪಿ ಸರಕಾರ 14 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪರಶುರಾಮನ ಮೂರ್ತಿ ಕಾಣೆಯಾಗಿದೆ! “ಕಂಚಿನ“ ಪ್ರತಿಮೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಆದರೆ, ವಿಶೇಷ ಸೂಚನೆ ಏನೆಂದರೆ ʼʼಫೈಬರ್ ಪ್ರತಿಮೆ ತೋರಿಸಿ ಕಂಚು ಎಂದರೆ ಒಪ್ಪಲಾಗದುʼʼ ಎಂದು ಕಾಂಗ್ರೆಸ್‌ ಕಾಲೆಳೆದಿದೆ.