ದರ್ಶನ್ ತಮ್ಮಯ್ಯ - ಆರೋಪಿಮಡಿಕೇರಿ ಅ.19 : ಮನೆಯಲ್ಲಿ ಅಡುಗೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಕಲಹ ವೃದ್ಧರೊಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರಾಜಪೇಟೆ ತಾಲ್ಲೂಕಿನ ನಾಂಗಾಲ ಗ್ರಾಮದಲ್ಲಿ ವರದಿಯಾಗಿದೆ.ಪುತ್ರನೇ ತಂದೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದ್ದು, ಚೇಂದ್ರಿಮಾಡ ಕೆ.ಚಿಟ್ಟಿಯಪ್ಪ(63) ಎಂಬುವವರೇ ಮೃತಪಟ್ಟವರು ಎಂದು ಗರುತಿಸಲಾಗಿದೆ. ಆರೋಪಿ ಪುತ್ರ ದರ್ಶನ್ ತಮ್ಮಯ್ಯ(38) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಸಂಜೆ ಚಿಟ್ಟಿಯಪ್ಪ ಹಾಗೂ ದರ್ಶನ್ ತಮ್ಮಯ್ಯ ನಡುವೆ ನಡೆದ ಜಗಳ ಅತಿರೇಕಕ್ಕೆ ಹೋಗಿದೆ ಎಂದು ಹೇಳಲಾಗಿದೆ.ಕೊಲೆ ನಡೆದ ಸ್ಥಳಕ್ಕೆ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ,  ವಿರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್.ಶಿವರುದ್ರಪ್ಪ, ಗ್ರಾಮಾಂತರ ಠಾಣಾಧಿಕಾರಿ ಸಿ.ಸಿ.ಮಂಜುನಾಥ್, ಅಪರಾಧ ಪತ್ತೆ ದಳದ ವಿಶೇಷ ಸಿಬ್ಬಂದಿ, ಆರ್.ಎಫ್.ಎಸ್.ಎಲ್ ಮೈಸೂರು ಘಟಕದ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.   ಘಟನೆ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   