ಕೋಲಾರ, ಅ.18: ಕೋಲಾರದಿಂದ  ತೆರಳಿದ್ದ ಖಾಸಗಿ ಬಸ್ಸೊಂದು ಕೇರಳ ರಾಜ್ಯದ ಕೊಟ್ಟಾಯಂನಲ್ಲಿ ಉರುಳಿಬಿದ್ದ ಪರಿಣಾಮ 17 ಮಂದಿ ಗಾಯಗೊಂಡ  ಘಟನೆ ಇಂದು ಮುಂಜಾನೆ ಸಂಭವಿಸಿರುವುದು ವರದಿಯಾಗಿದೆ.ಗಾಯಾಳುಗಳು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ತಮ್ಮರೆಡ್ಡಿಹಳ್ಳಿ, ಬಂಗವಾದಿ, ಮಜರಾ ಕಿತ್ತೂರು ಗ್ರಾಮದವರೆಂದು  ತಿಳಿದುಬಂದಿದೆ.ಮುಳಬಾಗಿಲಿನಿಂದ  ಕೇರಳದ ಶಬರಿಮಲೆಗೆ ಖಾಸಗಿ ಬಸ್ ಮತ್ತು ಟೆಂಪೋ ಟ್ರಾವೆಲರ್ ವಾಹನದಲ್ಲಿ ಒಟ್ಟು 70 ಮಂದಿ ಹೊರಟಿದ್ದರು.  ಈ ಪೈಕಿ ಅಪಘಾತಕ್ಕೀಡಾದ ಬಸ್ಸಿನಲ್ಲಿ 50 ಮಂದಿಯಿದ್ದರು. ಈ ಬಸ್ ಕೊಟ್ಟಾಯಂ ಜಿಲ್ಲೆಯ ಎರುಮೆಲಿ ಪಂಚಾಯತ್  ವ್ಯಾಪ್ತಿಯ ಪಂಬವಲ್ಲಿ(ಕಣ್ಮಲ) ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಇದರಿಂದ ಅದರಲ್ಲಿದ್ದ  ಪ್ರಯಾಣಿಕರಲ್ಲಿ 17 ಮಂದಿ ಗಾಯಗೊಂಡಿದ್ದಾರೆ.  ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಗಾಯಾಳುಗಳನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆ,  ಕಂಜಿರಪಲ್ಲಿ ಜನರಲ್ ಆಸ್ಪತ್ರೆ ಮತ್ತು ಮುಕ್ಕುಟ್ಟುತಾರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.