ಸಾಂದರ್ಭಿಕ ಚಿತ್ರಬೆಂಗಳೂರು, ಅ.15: ಬೆಂಗಳೂರು ಮೆಟ್ರೊ ನಿರ್ಮಾಣ ಕಾಮಗಾರಿಗಾಗಿ 257 ಮರಗಳ ತೆರವು ಅಥವಾ ಸ್ಥಳಾಂತರಕ್ಕೆ ಅನುಮತಿ ಕೋರಿ ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ(ಬಿಎಂಆರ್‍ಸಿಎಲ್) ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳಿಗೆ ಹೈಕೋರ್ಟ್ ಅನುಮತಿ ನೀಡಿದೆ.ಮರ ಕಡಿಯುವುದನ್ನು ಆಕ್ಷೇಪಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.ವಾಸ್ತವಿಕ ಅಂಶಗಳು ನಮ್ಮ ಗಮನದಲ್ಲಿದ್ದು, ಇಂದಿನ ಅಗತ್ಯಕ್ಕೆ ಅನುಗುಣವಾಗಿ ಸಮತೋಲನ ಕಾಯ್ದುಕೊಳ್ಳಬೇಕಿದೆ. ಮರಗಳನ್ನು ಸ್ಥಳಾಂತರ ಮಾಡಲಾಗುತ್ತದೆ ಮತ್ತು ಕಡಿದ ಮರಗಳಿಗೆ ಪರ್ಯಾಯವಾಗಿ ಗಿಡ ನೆಡಲಾಗುತ್ತದೆ ಎಂದು ತಿಳಿಸಲಾಗಿದೆ.  ಈ ಹಿನ್ನೆಲೆಯಲ್ಲಿ 2023ರ ಜೂ.8ರಂದು ಮಾಡಿದ್ದ ಆದೇಶದಲ್ಲಿದ್ದ ವಿಧಿಸಿದ್ದ ಷರತ್ತುಗಳಿಗೆ ಒಳಪಟ್ಟು ಬಿಎಂಆರ್‍ಸಿಎಲ್ ಮಧ್ಯಂತರ ಕೋರಿಕೆಗಳನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. 