ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಸ್ಮಶಾನದಲ್ಲಿ 15 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.ಆರೋಪಿಯನ್ನು ಶಿವಮೊಗ್ಗದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ  ಗೋಪಿನಾಥ್  ಎಂದು ಗುರುತಿಸಲಾಗಿದೆ. ಬುಕ್ಲಾಪುರ ಸ್ಮಶಾನ ಕಾಮಗಾರಿ ಹಣ ಬಿಡುಗಡೆ ಮತ್ತು ಸ್ಥಳ ಪರಿಶೀಲನೆ ಮಾಡಿ ರಿಪೋರ್ಟ್  ಕೊಡಲು 15 ಸಾವಿರ ರೂಪಾಯಿಗೆ ಗೋಪಿನಾಥ್  ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತರಿಗೆ ದಾಖಲಾಗಿದ್ದ  ದೂರಿನನ್ವಯ ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಸ್ಮಶಾನದ ಕಾಮಗಾರಿ ಪರಿಶೀಲಿಸಿ ರಿಪೋರ್ಟ್ ಕೊಡುವ ಸಂಬಂಧ 15 ಸಾವಿರ ರೂಪಾಯಿ ಲಂಚ  ಪಡೆಯುವಾಗಲೇ ಗೋಪಿನಾಥ್ ನವರನ್ನು ಟ್ರ್ಯಾಪ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.