ಬೆಂಗಳೂರು: ಕೆಪಿಸಿಸಿ ‌ಮಹಿಳಾ ಘಟಕಕ್ಕೆ ಸೌಮ್ಯಾರೆಡ್ಡಿ ನೇಮಕ ಹಾಗೂ ಸಚಿವರ ಮಕ್ಕಳಿಗೆ ಲೋಕಸಭೆ ಟಿಕೆಟ್ ಸೇರಿದಂತೆ ಪಕ್ಷದ ಕೆಲ ಆಂತರಿಕ ವಿಚಾರಗಳ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಕವಿತಾ ರೆಡ್ಡಿಗೆ ನೋಟಿಸ್‌ ನೀಡಿದೆ.ಈ ಸಂಬಂಧ ಕಾರಣ ಕೇಳಿ ನೋಟಿಸ್‌ ಹೊರಡಿಸಿರುವ ಕೆಪಿಸಿಸಿ ಶಿಸ್ತು ಕ್ರಮ ಸಮಿತಿ ಅ‍ಧ್ಯಕ್ಷ ರೆಹಮಾನ್‌ ಖಾನ್, ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಈ ಹಿಂದೆಯೂ ತಮಗೆ ನೋಟಿಸ್ ನೀಡಲಾಗಿತ್ತು ಮತ್ತು ಮೌಖಿಕವಾಗಿ ಇನ್ನು ಮುಂದೆ ಈ ರೀತಿಯಾಗಿ ಬಹಿರಂಗವಾದ ನೀಡಬಾರದೆಂದು ಸಲಹೆ ನೀಡಲಾಗಿತ್ತು. ಆದರೆ, ತಾವು ಪದೇ ಪದೇ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ಹಾಗೂ ಬರಹಗಳನ್ನು ಬರೆಯುವುದನ್ನು ಮುಂದುವರೆಸಿದ್ದು, ತಮ್ಮನ್ನು ಪಕ್ಷದಿಂದ ಯಾಕೆ ಉಚ್ಚಾಟಣೆ ಮಾಡಬಾರದೆಂಬುದರ ಬಗ್ಗೆ ತಮ್ಮ ವಿವರಣೆಯನ್ನು ಕೆಪಿಸಿಸಿ ಶಿಸ್ತು ಸಮಿತಿಗೆ ನೀಡಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. 