ಮಂಡ್ಯ: ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸುತ್ತಿರುವು ರಾಜ್ಯ ಸರಕಾರ ಕ್ರಮ ಹಾಗು ತಮಿಳುನಾಡು ಸರಕಾರದ ಧೋರಣೆ ಖಂಡಿಸಿ ಗುರುವಾರ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದವರೆಗೆ ಮೆರವಣಿಗೆ ನಡಿಸಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮತ್ತಿತರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.ಇದಕ್ಕೂ ಮುನ್ನ ನಗರದಲ್ಲಿ ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಬೆಂಬಲ ನೀಡಿ ಅವರು ಮಾತನಾಡಿದ ಅವರು, ʼʼಕರ್ನಾಟಕ ಮತ್ತು ತಮಿಳುನಾಡಿನ ಪರಿಸ್ಥಿತಿ ಅವಲೋಕಿಸಿ ಜಲಾಶಯಗಳಲ್ಲಿನ ನೀರಿನ ಲಭ್ಯತೆ ಅಂಕಿ ಅಂಶದ ಮಾಹಿತಿ ಪಡೆದು ಎರಡು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತ ಪರಿಹಾರ ರೂಪಿಸಲು ಪ್ರಧಾನಮಂತ್ರಿ ಮುಂದಾಗಬಹುದಾಗಿತ್ತುʼʼ ಎಂದು ಹೇಳಿದರು. ʼʼದೇಶದ ಪ್ರಧಾನಿ ನರೇಂದ್ರ ಮೋದಿಗೆ ಬರೀ ಚುನಾವಣೆ ಚಿಂತೆ. ಈಗ ಇಲ್ಲಿ ಯಾವುದೇ ಚುನಾವಣೆ ಇಲ್ಲ. ಹಾಗಾಗಿ ಕರ್ನಾಟಕದ ಹಿತ ಕಾಯಲು ಮುಂದಾಗಿಲ್ಲ. ಬಿಜೆಪಿ ಮತ್ತು ಜೆಡಿಎಸ್‍ನದ್ದು ಬರೀ ಬೊಗಳೆ ಮಾತುʼʼ ಎಂದು ಅವರು ಕಿಡಿಕಾರಿದರು.  “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಸುಸಂದರ್ಭ ಬಂದಿದೆ. ಕಾವೇರಿ ನೀರು ಬಿಡುವುದಿಲ್ಲ ಎಂದು ದಿಟ್ಟ ನಿಲುವು ತೆಗೆದುಕೊಳ್ಳಲಿ. ಇತಿಹಾಸದಲ್ಲಿ ನಿಮ್ಮ ಹೆಸರು ಚಾರಿತ್ರಿಕವಾಗಿರಲಿದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಸರಕಾರ ವಜಾ ಮಾಡುತ್ತಾರ ಮಾಡಲಿ ಮತ್ತೊಮ್ಮೆ ನೀವೇ ಮುಖ್ಯಮಂತ್ರಿಯಾಗುತ್ತೀರಿ. ರಾಷ್ಟ್ರಪತಿ ಆಳ್ವಿಕೆ ಜಾರಿ ತಂದು ರಾಜ್ಯಪಾಲರ ಮೂಲಕ ನೀರು ಬಿಡುವುದು ಅಷ್ಟು ಸುಲಭದ ಮಾತಲ್ಲ.”  -ವಾಟಾಳ್ ನಾಗರಾಜ್.