ಕೊಲಂಬೊ: ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮಾರಕ ಬೌಲಿಂಗ್(6-21)ದಾಳಿ ಹಾಗೂ ಶುಭಮನ್ ಗಿಲ್(ಔಟಾಗದೆ 27) ಹಾಗೂ ಇಶಾನ್ ಕಿಶನ್(ಔಟಾಗದೆ 23 ರನ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ಧ 10 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮೂಲಕ ದಾಖಲೆ 8ನೇ ಬಾರಿ ಏಶ್ಯಕಪ್‌ನ್ನು ಎತ್ತಿ ಹಿಡಿದಿದೆ.ಇನ್ನು ಆರು ವಿಕೆಟ್‌ಗಳನ್ನು ಕಬಳಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುಹಮ್ಮದ್ ಸಿರಾಜ್ ಅವರನ್ನು ಅಭಿನಂದಿಸಿ ಟ್ವೀಟ್‌ ಮಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ʼʼಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡುʼʼ ಎಂದು ಕೊಂಡಾಡಿದ್ದಾರೆ. ʼʼಏಷ್ಯಾಕಪ್ ಫೈನಲ್ಸ್ ನಲ್ಲಿ ಶ್ರೀಲಂಕಾ ಪಡೆ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿದ ಟೀಂ ಇಂಡಿಯಾಗೆ ಹೃದಯಪೂರ್ವಕ ಶುಭಾಶಯಗಳು. 6 ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ದಾಳಿ ಕಂಡು ಬೆರಗಾದೆ. ಟೀಂ ಇಂಡಿಯಾ ಕಲಿಗಳ‌ ಗೆಲುವಿನ ನಾಗಾಲೋಟ ಹೀಗೇ ಮುಂದುವರಿಯಲಿ. ಜೈಹೋ ಟೀಂ ಇಂಡಿಯಾ!ʼʼ ಎಂದು ಡಿ.ಕೆ ಶಿವಕುಮಾರ್‌ ಬರೆದುಕೊಂಡಿದ್ದಾರೆ.  