ಕೋಲಾರ, ಸೆ.10: ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿದೆ.ಹರಿಪ್ರಸಾದ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಕಸ ಕೆ.ವೈ.ನಂಜೇಗೌಡ ಆಗ್ರಹಿಸಿದ್ದಾರೆ. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ವೈ.ನಂಜೇಗೌಡ,  ʼʼಪಕ್ಷದಲ್ಲಿ ಎಲ್ಲಾ ರೀತಿ ಅವಕಾಶ ತೆಗೆದುಕೊಂಡಿರುವ ಹರಿಪ್ರಸಾದ್ ಅವರಿಂದ ಹೇಳಿಕೆಯನ್ನ ನಿರೀಕ್ಷಿಸಿರಲಿಲ್ಲ. ಇದು ಪಕ್ಷದ ವಿರೋಧಿ ಹೇಳಿಕೆ, ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಇದೆ‌. ಈ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ ಎಂದರೆ ಅದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಂದ.  ಕಾಂಗ್ರೆಸ್ ಪಕ್ಷಕ್ಕೆ‌ ನಿಮ್ಮ ಕೊಡುಗೆ ಏನು?ʼʼ ಎಂದು ಹರಿಪ್ರಸಾದ್ ಅವರನ್ನು  ಪ್ರಶ್ನಿಸಿದ್ದಾರೆ. ಶನಿವಾರ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ನಡೆದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದ್ದ ಬಿ.ಕೆ. ಹರಿಪ್ರಸಾದ್ ಅವರು, ‘ಅರಸು, ಬಂಗಾರಪ್ಪ ಸೇರಿದಂತೆ ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು, ವಾಚ್ ಕಟ್ಟಿಕೊಂಡು, ಖಾಕಿ ಚಡ್ಡಿ ಹಾಕಿಕೊಂಡು ‘ಸಮಾಜವಾದಿ’ ಎಂದು ಹೇಳಿದರೆ ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. 