ಬಾಗಲಕೋಟೆ: ಸರಕಾರಿ ಪದವಿ ಕಾಲೇಜು ಆವರಣದಲ್ಲೇ ನೇಣು ಹಾಕಿಕೊಂಡು ಪ್ರಾಂಶುಪಾಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಮಂಗಳವಾರ ಮುಂಜಾನೆ ವರದಿಯಾಗಿದೆ.ಹುನಗುಂದ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಮುದಗಲ್ (57) ಆತ್ಮಹತ್ಯೆ ಮಾಡಿಕೊಂಡಿರುವವರು ಎಂದು ತಿಳಿದು ಬಂದಿದೆ. ಇಂದು ಬೆಳಗಿನ ಜಾವ ಕಾಲೇಜಿನ ಆವರಣದಲ್ಲಿಯ ಕ್ಯಾಂಟೀನ್‌ ಸ್ಟೇರ್ ಕೇಸ್ ಗ್ರಿಲ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇಂದು ಕಾಲೇಜಿನಲ್ಲಿ ನಡೆಯಬೇಕಿದ್ದ ಜನಪದ ಸಂಸ್ಕೃತಿ ಕಾರ್ಯಕ್ರಮ ತಯಾರಿಯಲ್ಲಿ ತೊಡಗಿಕೊಂಡಿದ್ದ ನಾಗರಾಜ್ ನಿನ್ನೆಯವರೆಗೂ (ಸೋಮವಾರ ರಾತ್ರಿ) ಕಾರ್ಯಕ್ರಮಕ್ಕಾಗಿ ಗಣ್ಯರಿಗೆಲ್ಲ ಆಮಂತ್ರಣ ನೀಡಿ ಬಂದಿದ್ದರು. ಇಂದು ಬೆಳಗ್ಗೆ ಮನೆಗೆ ಹೋಗಿ ಕಾಲೇಜಿಗೆ ಬಂದು ನೇಣು ಹಾಕಿಕೊಂಡಿದ್ದಾರೆಂದು ಹೇಳಲಾಗಿದೆ. ಮಾಹಿತಿ ತಿಳಿದ ಹುನಗುಂದ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 