ಬೆಂಗಳೂರು: ಮುಜರಾಯಿ ಇಲಾಖೆ ದೇವಸ್ಥಾನಗಳ ಅನುದಾನ ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವಂತೆ  ಆಯುಕ್ತರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ʼʼಕೇವಲ ದೇವಸ್ಥಾನ ಗಳ ಜೀರ್ಣೋದ್ಧಾರ, ಕಾಮಗಾರಿಗಳ ವಿವರ ಪಡೆಯುವಂತೆ ಸೂಚನೆ ನೀಡಿಲಾಗಿತ್ತು. ಆದರೆ ಗೊಂದಲದಿಂದ ಆಯುಕ್ತರು ಅನುದಾನ ತಡೆ ಹಿಡಿದು ಆದೇಶ ಹೊರಡಿಸಿದ್ದಾರೆ. ಯಾವ ದೇವಸ್ಥಾನದ ಕೆಲಸವನ್ನೂ ನಿಲ್ಲಿಸುವುದಕ್ಕೆ ಹೋಗುವುದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತರು ಆದೇಶ ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 